ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮತ್ತು ಸಂಪುಟ ಸಭೆಯ ಇತರ ತೀರ್ಮಾನಗಳು
ಬೆಂಗಳೂರು, ಅಕ್ಟೋಬರ್ 11: ನವೆಂಬರ್ 13 ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಗಳನ್ನು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಬಿಪಿಎಲ್ ಕಾರ್ಡುದಾರರಿಗೆ ಉಚಿತ ಎಲ್ಇಡಿ ಬಲ್ಬ್
ಬಿಪಿಎಲ್ ಕಾರ್ಡ್ ಗ ಸಿಗುವ ಸೀಮೆ ಎಣ್ಣೆ ಬಿಟ್ಟು ಬಿಡುವ ಕುಟುಂಬಗಳಿಗೆ ಉಚಿತ ಎಲ್ಇಡಿ ಬಲ್ಬ್ ವಿತರಿಸುವ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ.
ಹೊಸ ಆ್ಯಂಬುಲೆನ್ಸ್ ಖರೀದಿಗೆ ಸಮ್ಮತಿ
ಆರೋಗ್ಯ ಕವಚ ಯೋಜನೆಯ ಹಳೆಯ 95 ಆಧುನಿಕ ಜೀವ ರಕ್ಷಕ ವ್ಯವಸ್ಥೆ (ಅಡ್ವಾನ್ಸ್ ಲೈಫ್ ಸಪೋರ್ಟರ್ಸ್) ಮತ್ತು 276 ಮೂಲ ಜೀವ ರಕ್ಷಕ ವ್ಯವಸ್ಥೆ (ಬೇಸಿಕ್ ಲೈಫ್ ಸಪೋರ್ಟರ್ಸ್) ಆ್ಯಂಬುಲೆನ್ಸ್ ಗಳನ್ನು ಬದಲಾಯಿಸಿ 61.78 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಆಂಬುಲೆನ್ಸ್ ಗಳನ್ನು ಖರೀದಿಸಲು ಸಚಿವ ಸಂಪುಟ ಸಮ್ಮತಿಸಿದೆ.
ಸಂಘಗಳಿಗೆ ರಿಯಾಯಿತಿ ದರದಲ್ಲಿ ಜಾಗ
ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಡಿವಾಳ ಮಾಚಿದೇವ ಸಂಘಕ್ಕೆ ಖಾಸಗೀ ವಸತಿ ಬಡಾವಣೆಯಲ್ಲಿ 4465 ಚದರಡಿ ವಿಸ್ತೀರ್ಣದ ಜಾಗವನ್ನು ಚದರ ಅಡಿಗೆ 10 ರೂ. ರಿಯಾಯಿತಿ ಗುತ್ತಿಗೆ ದರದಲ್ಲಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ದಾವಣಗೆರೆ ಜಿಲ್ಲಾ ಒಕ್ಕಲಿಗರ ಸಂಘಕ್ಕೂ ದಾವಣಗೆರೆಯ ಆವರೆಗೆರೆ ಗ್ರಾಮದ ಖಾಸಗೀ ಬಡಾವಣೆಯಲ್ಲಿನ 21,418 ಚದರಡಿ ವಿಸ್ತೀರ್ಣದ ನಾಗರೀಕ ಸೌಲಭ್ಯ ನಿವೇಶನವನ್ನು ಶೇಕಡಾ 10 ರ ರಿಯಾಯತಿ ದರದಲ್ಲಿ ನೀಡಲು ಸಚಿವ ಸಂಪುಟ ಅನುಮತಿ ನೀಡಿದೆ.
ಹಿರೆಕೆರೂರು ತಾಲೂಕಿಗೆ ಕುಡಿಯುವ ನೀರು
ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲ್ಲೂಕಿನ ಹಿರೆಕೆರೂರು ಪಟ್ಟಣದ ದುರ್ಗಾದೇವಿ ಕೆರೆ ಹಾಗೂ ಬಹುಗ್ರಾಮ ಕೆರೆಗಳಿಗೆ ಕುಮದ್ವತಿ ನದಿಯಿಂದ ಅಂದಾಜು 24 ಕೋಟಿ ರೂ. ವೆಚ್ಚದಲ್ಲಿ ನೀರನ್ನು ತುಂಬಿಸುವ ಯೋಜನಾ ವರದಿಗೆ ಸಂಪುಟ ಆಡಳಿತಾತ್ಮಕ ಅನುಮತಿ ನೀಡಿದೆ.
ಹಿರೆಕೆರೂರು ತಾಲ್ಲೂಕಿನ 13 ಕೆರೆ ಹಾಗೂ ಬ್ಯಾಡಗಿ ತಾಲ್ಲೂಕಿನ 2 ಕೆರೆಗಳಿಗೆ ವರದಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ 38 ಕೋಟಿ ರೂ ಅಂದಾಜು ವೆಚ್ಚದ ಗುಡ್ಡದ ಮಲ್ಲಾಪುರ್ ನೀರಾವರಿ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.