ಧರಣಿ ಕೂತಿದ್ದ ಬಿಎಸ್ವೈ ಅವರ ಪಾದಮುಟ್ಟಿ, ಎಬ್ಬಿಸಿ ಕೂರಿಸಿದ್ದ ಅಂಬರೀಶ್
Recommended Video
ಪಕ್ಷಾತೀತವಾಗಿ ಸ್ನೇಹಜೀವಿಯೆಂದೇ ಕರೆಯಲ್ಪಡುತ್ತಿದ್ದ ಮಾಜಿ ಕೇಂದ್ರ ಸಚಿವ, ಅಂಬರೀಶ್ ಶನಿವಾರ ತಡರಾತ್ರಿ (ನ 24) ಇಹಲೋಕವನ್ನು ತ್ಯಜಿಸಿದ್ದಾರೆ. ಆ ಮೂಲಕ ಸಿನಿಮಾ ಮತ್ತು ರಾಜಕೀಯ ರಂಗದಲ್ಲಿನ ಅವರ ವರ್ಣರಂಜಿತ ಜೀವನಕ್ಕೆ ತೆರೆಬಿದ್ದಿದೆ.
ಅಂಬರೀಶ್ ಆವರ ನಿಧನದಿಂದ ನೊಂದ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ವರದಿಯಾಗಿದೆ. ದಕ್ಷಿಣಭಾರತದ ಸಿನಿಮಾರಂಗದಲ್ಲಿ ವಿಶೇಷ ಛಾಪನ್ನು ಹೊಂದಿದ್ದ ಅಂಬರೀಶ್, ಅವರ ಅಂತಿಮ ದರ್ಶನ ಪಡೆಯಲು, ಪಕ್ಕದ ಸಿನಿಮಾ ರಂಗದಿಂದಲೂ ಅವರ ಆಪ್ತರು ಬರುತ್ತಿದ್ದಾರೆ.
ಆಪ್ತ ಸ್ನೇಹಿತ ಅಂಬರೀಶ್ ಒಡನಾಟ ನೆನಪಿಸಿಕೊಂಡ ಸಿದ್ದರಾಮಯ್ಯ
ಅಂಬರೀಶ್ ಅವರು ವಸತಿ ಸಚಿವರಾಗಿದ್ದ ಅವಧಿಯಲ್ಲಿ ಅಂದರೆ, ನವೆಂಬರ್ 2013ರಲ್ಲಿ ನಡೆದ ರಾಜಕೀಯ ವಿದ್ಯಮಾನವೊಂದು, ಅಂಬರೀಶ್ ಅವರ ಸ್ನೇಹಪರತೆಗೆ ಸಾಕ್ಷಿಯಂತಿತ್ತು. ವಿರೋಧ ಪಕ್ಷದ ನಾಯಕರೊಬ್ಬರೊಬ್ಬರನ್ನು, ಧರಣಿ ನಿಲ್ಲಿಸುವಂತೆ ಅವರು ಮನವಿ ಮಾಡಿದ ರೀತಿ, ಭಾರೀ ಪ್ರಶಂಶೆಗೊಳಗಾಗಿತ್ತು.
ಯಡಿಯೂರಪ್ಪನವರು ಬೆಳಗಾವಿ ಅಧಿವೇಶನದ ವೇಳೆ, ಸರಕಾರದ ವಿರುದ್ದ ಧರಣಿ ಕೂತಿದ್ದರು. ಯಾರು ಎಷ್ಟೇ ಮನವಿ ಮಾಡಿದರೂ ಯಡಿಯೂರಪ್ಪ ಜಗ್ಗದಿದ್ದಾಗ, ಅಂಬರೀಶ್, ಯಡಿಯೂರಪ್ಪನವರ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದರು.
LIVE: ಅಂಬರೀಶ್ ನಿಧನದಿಂದ ನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ
ಭಾನುವಾರ, ಪುತ್ರ ವಿಜಯೇಂದ್ರನ ಜೊತೆ, ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಯಡಿಯೂರಪ್ಪ, ಪತ್ನಿ ಸುಮಲತಾ ಅವರನ್ನು ನೋಡಿ ಭಾವೋದ್ವೇಗಕ್ಕೂ ಒಳಗಾದರು. ಐದು ವರ್ಷದ ಹಿಂದಿನ ಘಟನೆಯನ್ನೊಮ್ಮೆ ಮೆಲುಕು ಹಾಕುವುದಾದರೆ, ಮುಂದೆ ಓದಿ..
ಸದನದ ಬಾವಿಯಲ್ಲಿ ಕೂತು ಬಿಎಸ್ವೈ ಪ್ರತಿಭಟನೆ
ನವೆಂಬರ್ 2013ರಲ್ಲಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು. ಸಿದ್ದರಾಮಯ್ಯ ಸರಕಾರದ ಜನಪ್ರಿಯ ಶಾಧಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಕ್ಕೂ ನೀಡಬೇಕೆಂದು, ಯಡಿಯೂರಪ್ಪ, ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಯಾರ ಮಾತಿಗೂ ಜಗ್ಗದೇ, ನೆಲದಲ್ಲೇ ಕೂತು ಸರಕಾರದ ವಿರುದ್ದ ಧರಣಿ ಕೂತಿದ್ದರು. ಯಾರು ಎಷ್ಟೇ ಪ್ರಯತ್ನ ಪಟ್ಟರೂ, ಬಿಎಸ್ವೈ ಕದಲಿರಲಿಲ್ಲ.
ಯಾರು ಎಷ್ಟು ಮನವೊಲಿಸಿದರೂ, ಬಿಎಸ್ವೈ ಜಪ್ಪಯ್ಯ ಅಂದಿರಲಿಲ್ಲ
ಆಗ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಹುಟ್ಟುಹಾಕಿದ್ದ ಮತ್ತು ಆ ಪಕ್ಷದಿಂದ ಗೆದ್ದು ಬಂದಿದ್ದ ಯಡಿಯೂರಪ್ಪ, ಸದನದ ಕಲಾಪ ಮುಗಿದ ನಂತರವೂ, ಸ್ಥಳ ಬಿಟ್ಟು ಕದಲಲು ತಯಾರಿರಲಿಲ್ಲ. ಹಿರಿಯ ಮುಖಂಡರೊಬ್ಬರು, ನೆಲದ ಮೇಲೆ ಕೂತು ಧರಣಿ ನಡೆಸುತ್ತಿದ್ದದ್ದು, ಪಕ್ಷಾತೀತವಾಗಿ ಎಲ್ಲರಿಗೂ ಕಸಿವಿಸಿಯನ್ನುಂಟು ಮಾಡಿತ್ತು. ಯಾರು ಎಷ್ಟು ಮನವೊಲಿಸಿದರೂ, ಬಿಎಸ್ವೈ ಜಪ್ಪಯ್ಯ ಅಂದಿರಲಿಲ್ಲ.
ಜೀವದ ಗೆಳೆಯ ಅಂಬರೀಶ್ ಬಗ್ಗೆ ರಜನೀಕಾಂತ್ ಹೇಳಿದರು ಮುತ್ತಿನಂತಾ ಮಾತು
ನಿಮ್ಮ ಕಾಲಿಗೆ ಬೀಳುತ್ತೇನೆ, ಧರಣಿ ಕೈಬಿಡಿ ಎಂದು ಅಂಬರೀಶ್ ಮನವಿ
ಆಗ ರಂಗ ಪ್ರವೇಶಿಸಿದ, ವಸತಿ ಸಚಿವರಾಗಿದ್ದ ಅಂಬರೀಶ್, ನೇರವಾಗಿ ಯಡಿಯೂರಪ್ಪನವರ ಬಳಿ ಬಂದು, ಏನಿದು ಯಡಿಯೂರಪ್ಪನವ್ರೇ... ಎಂದು ಧರಣಿ ಕೈಬಿಡುವಂತೆ ಒತ್ತಾಯಿಸಿದರು. ಅದಕ್ಕೂ, ಬಿಎಸ್ವೈ ಕ್ಯಾರೇ ಅಂದಿರಲಿಲ್ಲ. ಆಗ, ಯಡಿಯೂರಪ್ಪನವರ, ಪಾದಮುಟ್ಟಿ ಎಬ್ಬಿಸಲು ಮುಂದಾದರು. ನಿಮ್ಮ ಕಾಲಿಗೆ ಬೀಳುತ್ತೇನೆ, ಧರಣಿ ಕೈಬಿಡಿ ಎಂದು ಅಂಬರೀಶ್ ಮನವಿ ಮಾಡಿದರು.
ಯಡಿಯೂರಪ್ಪ ಮತ್ತೆ ಸದನದ ಬಾವಿಯಲ್ಲಿ ಧರಣಿ
ಇದಕ್ಕೂ ಒಪ್ಪದ ಯಡಿಯೂರಪ್ಪನವರನ್ನು ಬಲವಂತವಾಗಿ ಎಬ್ಬಿಸಿ ಕೂರಿಸಿ, ಬಿಎಸ್ವೈ ಮತ್ತು ಕೆಜೆಪಿ ಪಕ್ಷದ ಶಾಸಕರನ್ನು ಅವರ ಕುರ್ಚಿಯಲ್ಲಿ ಕೂರಿಸಿದರು. ಆದರೆ, ಅಂಬರೀಶ್ ಅವರು ತಮ್ಮ ಸ್ಥಾನಕ್ಕೆ ವಾಪಸ್ ಹೋಗುತ್ತಿದ್ದಂತೆಯೇ, ಯಡಿಯೂರಪ್ಪ ಮತ್ತೆ ಸದನದ ಬಾವಿಯಲ್ಲಿ ಧರಣಿ ಮುಂದುವರಿಸಿದರು. ಆಂಬರೀಶ್ ಅವರ ಈ ಪ್ರಯತ್ನಕ್ಕೆ ಮಾತ್ರ ಪಕ್ಷಾತೀತವಾಗಿ ಎಲ್ಲರೂ ಶಹಬ್ಬಾಸ್ ಅಂದಿದ್ದರು.
ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ
ಸಿನಿಮಾಕ್ಕಿಂತ ಉತ್ತಮವಾದದ್ದು ಎಂದು ತಿರುಗೇಟು
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತಿದ್ದ ಅಂಬರೀಶ್, ನಮ್ಮ ರಾಜ್ಯದ ಹಿರಿಯ ನಾಯಕರೊಬ್ಬರು ಈ ರೀತಿ ಪ್ರತಿಭಟನೆ ನಡೆಸುತ್ತಿರುವುದು ಮನಸ್ಸಿಗೆ ತುಂಬಾ ನೋವು ತರುತ್ತದೆ ಎಂದು ಅಂಬರೀಶ್ ಬೇಸರ ವ್ಯಕ್ತ ಪಡಿಸಿದ್ದರು. ಇದು ಸಿನಿಮಾ ಅಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಕಿಚಾಯಿಸಿದಾಗ, ಹೌದು, ಇದು ಸಿನಿಮಾಕ್ಕಿಂತ ಉತ್ತಮವಾದದ್ದು ಎಂದು ತಿರುಗೇಟು ನೀಡಿದ್ದರು.