ಹೆಬ್ಬಾಳ ಚುನಾವಣೆಯ ಮುನ್ನ ಡಿ ಕೆ ಶಿವಕುಮಾರ್ ಸಿಡಿಸಿದ ಬಾಂಬ್!
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಹೆಬ್ಬಾಳ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಹವಾ ಎಷ್ಟಿದೆಯಂದರೆ ಉಳಿದ ಎರಡು ಕ್ಷೇತ್ರಗಳಲ್ಲೂ ಅದೇ ದಿನ (ದೇವದುರ್ಗ, ಬೀದರ್ ಫೆ 13 ರಂದು) ಚುನಾವಣೆ ನಡೆಯುತ್ತಿದೆ ಎನ್ನುವುದರ ಬಗ್ಗೆ ಅಷ್ಟಾಗಿ ಚರ್ಚೆಯೇ ನಡೆಯುತ್ತಿಲ್ಲ.
ಕಾಂಗ್ರೆಸ್ಸಿನ 'ವಿನ್ನಿಂಗ್ ಕ್ಯಾಪ್ಟನ್' ಎಂದೇ ಹೆಸರಾಗಿರುವ ರಾಜ್ಯ ಇಂಧನ ಸಚಿವ ಡಿ ಕೆ ಶಿವಕುಮಾರ್, ಹೆಬ್ಬಾಳ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡ ನಂತರ ಹತ್ತು ಹಲವಾರು ಕಾರಣಗಳಿಂದ ಕ್ಷೇತ್ರವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿರುವ ಸಿದ್ದರಾಮಯ್ಯ ನಿರಾಳರಾಗಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. (ಮತ್ತೆ ಮೌನಕ್ಕೆ ಶರಣಾದರೆ ಬಿಎಸ್ವೈ)
ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ವೃತ್ತಿಪರವಾಗಿ ಬಳಸಿಕೊಳ್ಳುವ ಡಿಕೆಶಿ, ಹೆಬ್ಬಾಳ ಚುನಾವಣೆಗೆ ದಿನಗಣನೆಯ ಸಂದರ್ಭದಲ್ಲಿ ಹೊಸ 'ರಾಜಕೀಯ ಬಾಂಬ್' ಸಿಡಿಸಿದ್ದಾರೆ. ಹೆಬ್ಬಾಳ ಸೇರಿದಂತೆ ಮೂರು ಅಸೆಂಬ್ಲಿ ಕ್ಷೇತ್ರಗಳ ಚುನಾವಣೆ ಫೆ13 ರಂದು ಮತ್ತು ಮತಎಣಿಕೆ ಫೆ16ರಂದು ನಡೆಯಲಿದೆ.
ಸಂದರ್ಶನವೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡುತ್ತಾ, I pity for him ಎಂದು ಲೇವಡಿ ಮಾಡಿದ ಶಿವಕುಮಾರ್, ನಾನು ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡ ನಂತರ ಬಿಜೆಪಿಯ ಕೆಲವು ಮುಖಂಡರು ಹೆಬ್ಬಾಳ ಚುನಾವಣೆಯ ಈ ಸಂದರ್ಭದಲ್ಲಿ ನನ್ನನು ಭೇಟಿ ಮಾಡಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ. (ಹೆಬ್ಬಾಳ ಉಪ ಚುನಾವಣೆಯಲ್ಲಿ ಗೆಲುವು ನಮ್ಮದು)
ಹೆಬ್ಬಾಳ ಕ್ಷೇತ್ರಕ್ಕೆ ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡಿದ ಬಿಜೆಪಿ ನಿರ್ಧಾರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಡಿಕೆಶಿ, ಬಿಜೆಪಿ ಹಿನ್ನಡೆ ಅನುಭವಿಸಲು ಇದೇ ಪ್ರಮುಖ ಕಾರಣ ಎಂದು ಬಿಜೆಪಿಗೆ ಚುನಾವಣೆಗೆ ಮುನ್ನವೇ 'ನಾವೇ ಗೆಲ್ಲುತ್ತೇವೆ' ಎಂದು ಸವಾಲೆಸಿದಿದ್ದಾರೆ.
ಡಿಕೆಶಿ ಭೇಟಿ ಮಾಡಿದ ಬಿಜೆಪಿ ಮುಖಂಡರು ಯಾರಿರಬಹುದು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಎಚ್ ಡಿ ದೇವೇಗೌಡರ ಬಗ್ಗೆ
ಸಿದ್ದರಾಮಯ್ಯನವರಿಗೆ ಸಿಎಂ ಹುದ್ದೆ ತಪ್ಪಿಸಿದ್ದು ಎಸ್ ಎಂ ಕೃಷ್ಣ ಮತ್ತು ಡಿ ಕೆ ಶಿವಕುಮಾರ್ ಎನ್ನುವ ದೇವೇಗೌಡರ ಹೇಳಿಕೆಯ ಬಗ್ಗೆ ಮಾತನಾಡುತ್ತಿದ್ದ ಡಿಕೆಶಿ, ಹಿರಿಯರಿಂದ ಇಂತಹ ಸುಳ್ಳನ್ನು ನಾನು ನಿರೀಕ್ಷಿಸಿರಲಿಲ್ಲ. ಯಾಕೆ ಈ ವಯಸ್ಸಿನಲ್ಲಿ ಗೌಡ್ರು ಈ ರೀತಿ ಸುಳ್ಳು ಹೇಳುತ್ತಿದ್ದಾರೆ, I pity for him ಎಂದು ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪ ಬಗ್ಗೆ ಶಿವಕುಮಾರ್
ಬಿಜೆಪಿಯಲ್ಲಿ ಕೆಲವರೆಲ್ಲಾ ಜೈಲಿಗೆ ಹೋಗಿದ್ದಾರೆ, ಯಡಿಯೂರಪ್ಪನವರೂ ಜೈಲಿಗೆ ಹೋಗಿದ್ದರು. ಮತ್ತೆ ಚುನಾವಣೆಗೆ ನಿಂತು ಈಗ ಸಂಸದರಾಗಿಲ್ಲವೇ, ಜನನಾಯಕರಾಗಿಲ್ಲವೇ? ರಾಜಕೀಯದಲ್ಲಿ ಯಾವುದೂ ಶಾಸ್ವತವಲ್ಲ. ಅಭ್ಯರ್ಥಿಯನ್ನು ಬಿಜೆಪಿಯವರು ಫೈನಲ್ ಮಾಡುವ ಮುನ್ನ ಹಿರಿಯ ಮುಖಂಡರ ಮಾತಿಗೆ ಬಿಜೆಪಿ ವರಿಷ್ಠರು ಮಣೆಹಾಕಿದ್ರಾ, ಎಂದು ಪರೋಕ್ಷವಾಗಿ ಶಿವಕುಮಾರ್, ಯಡಿಯೂರಪ್ಪನವರ ಮೇಲೆ ತನ್ನ ಸಾಫ್ಟ್ ಕಾರ್ನರ್ ಮುಂದುವರಿಸಿದ್ದಾರೆ.
ಒಕ್ಕಲಿಗ ಅಭ್ಯರ್ಥಿಯನ್ನು ನಿಲ್ಲಿಸಿದರೆ
ಬಿಟಿವಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶಿವಕುಮಾರ್, ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆ ಸಮುದಾಯವರು ಅಭ್ಯರ್ಥಿಯ ಬಗ್ಗೆ ಮತ ಹಾಕುತ್ತಾರೆ ಎನ್ನುವ ರಾಜಕೀಯ ಲೆಕ್ಕಾಚಾರ ಈಗ ವರ್ಕೌಟ್ ಆಗಲ್ಲ, ಬಿಜೆಪಿದ್ದು ತಪ್ಪು ಲೆಕ್ಕಾಚಾರ ಎನ್ನುವುದು ಫಲಿತಾಂಶದ ದಿನ ಗೊತ್ತಾಗುತ್ತೆ.
ಮಾಜಿ ಡಿಸಿಎಂ ಅಶೋಕ್ ಬಗ್ಗೆ
ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ ಆಗಬೇಕು ಎನ್ನುವ ರಾಜಕೀಯ ಲೆಕ್ಕಾಚಾರ ತಪ್ಪಲ್ಲ, ಅದಕ್ಕೆ ನನ್ನ ಅಭ್ಯಂತರವೂ ಇಲ್ಲ. ಆರ್ ಅಶೋಕ್, ಒಕ್ಕಲಿಗ ಸಮುದಾಯದ ಯುವ ಮುಖಂಡ ಎಂದು ತನ್ನನ್ನು ಬಿಂಬಿಸಲು ಮುಂದಾದರು, ಒಂದು ಮಟ್ಟಿಗೆ ಯಶಸ್ವಿಯಾದರು ಕೂಡಾ. ಆದರೆ ಹೆಬ್ಬಾಳ ಚುನಾವಣೆಯ ಬಿಜೆಪಿಯ ಜಾಹೀರಾತಿನಲ್ಲಿ ಅಶೋಕ್ ಹೆಸರು ಎಲ್ಲಿದೆ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಟ್ಟಾ ಸುಬ್ರಮಣ್ಯ ನಾಯ್ಡು
ಹೆಬ್ಬಾಳ ಚುನಾವಣೆಗೆ ಅಭ್ಯರ್ಥಿ ಘೋಷಣೆಯಾದ ನಂತರ ಬಿಜೆಪಿಯ ಕೆಲವು ಮುಖಂಡರು ನನ್ನನ್ನು ಭೇಟಿಯಾಗಿದ್ದರು, ಅದರಲ್ಲಿ ಬಿಜೆಪಿಯ ಹಿರಿಯ ಮುಖಂಡರೂ ಇದ್ದರು ಎಂದು ಬಾಂಬ್ ಸಿಡಿಸಿರುವ ಡಿಕೆಶಿ, ನಾನು ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಉತ್ತಮ ಸ್ನೇಹಿತರು ಎಂದಿದ್ದಾರೆ.
ಯಾರೆಂದು ಬಾಯಿಬಿಡದ ಡಿಕೆಶಿ
ನಿಮ್ಮನ್ನು ಭೇಟಿಯಾದ ಬಿಜೆಪಿ ಮುಖಂಡರು ಯಾರು ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರಿಸದ ಡಿ ಕೆ ಶಿವಕುಮಾರ್, ರಾಜಕೀಯದಲ್ಲಿ ಇದೆಲ್ಲಾ ಮಾಮೂಲು. ಬಿಜೆಪಿ ಮುಖಂಡರೂ ನನ್ನನ್ನು ಭೇಟಿಯಾಗಿದ್ದರು ಜೊತೆಗೆ ಕಾರ್ಯಕರ್ತರು ನಮ್ಮನ್ನು ಭೇಟಿಯಾಗಿದ್ದರು. ಕಟ್ಟಾ ಮತ್ತು ನನ್ನ ನಡುವೆ ಉತ್ತಮ ಸಂಬಂಧವಿದೆ ಎಂದು ಶಿವಕುಮಾರ್ ಸಂದರ್ಶನದಲ್ಲಿ ಮತ್ತೊಮ್ಮೆ ಪುನರುಚ್ಚಿಸಿದರು.
ಸ್ಥಳೀಯ ಮುಖಂಡರು ಯಾರೂ ಇರಲಿಲ್ಲವೇ?
ಬಿಜೆಪಿಗೆ ಸ್ಥಳೀಯ ಮುಖಂಡರು ಯಾರೂ ಸಿಗಲಿಲ್ಲವೇ, ಕೋಲಾರದಿಂದ ನಾರಾಯಣಸ್ವಾಮಿಯವರನ್ನು ಕರೆಸಿ ಅಭ್ಯರ್ಥಿಯನ್ನಾಗಿ ಮಾಡಬೇಕಿತ್ತೇ? ಬಿಜೆಪಿ ಮೊದಲು ಎಡವಟ್ಟು ಮಾಡಿಕೊಂಡಿದ್ದು ಇಲ್ಲೇ, ಯಡಿಯೂರಪ್ಪನವರು ಜೈಲಿಗೆ ಹೋಗಿ, ಮತ್ತೆ ಸಂಸದರಾಗಲಿಲ್ಲವೇ ಎಂದು ಪರೋಕ್ಷವಾಗಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಟಿಕೆಟ್ ನೀಡಬೇಕಿತ್ತು ಎನ್ನುವ ರೀತಿಯಲ್ಲಿ ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿ ಚುನಾವಣೆ
ಕಳೆದ ಬಳ್ಳಾರಿ ಗ್ರಾಮಾಂತರ (ಆಗಸ್ಟ್ 2014) ಚುನಾವಣೆಗೆ ನನ್ನನ್ನು ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಹತ್ತಕ್ಕೂ ಹೆಚ್ಚುಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಎನ್ ವೈ ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಲಾಯಿತು. ಟಿಕೆಟ್ ಸಿಗದೇ ನಿರಾಶೆ ಅನುಭವಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿ ಮೇಲೆ ದಾಳಿ ಮಾಡಿದರು. ನಾನು ಜವಾಬ್ದಾರಿ ತೆಗೆದುಕೊಂಡ ಮೇಲೆ, ಎಲ್ಲರನ್ನೂ ಒಗ್ಗೂಡಿಸಿ ಚುನಾವಣೆ ಗೆಲ್ಲುವಂತೆ ಮಾಡಿದೆ.
ಗೆಲುವು ನಮ್ಮದೇ
ಹೆಬ್ಬಾಳ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಇಬ್ಬರು ಮೂವರು ಇದ್ದರು ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅಧಿಕೃತ ಅಭ್ಯರ್ಥಿ ಘೋಷಣೆಯಾದ ನಂತರ ನಾವೆಲ್ಲರೂ ಒಂದಾಗಿದ್ದೇವೆ. ಜೆಡಿಎಸ್ ಇಲ್ಲಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ನಮ್ಮ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಮತ್ತು ಜಯ ನಮಗೆ ಹಂಡ್ರೆಡ್ ಪರ್ಸೆಂಟ್ ಗ್ಯಾರಂಟಿ ಎಂದು ಡಿ ಕೆ ಶಿವಕುಮಾರ್ ಭರವಸೆಯ ಮಾತನ್ನಾಡಿದ್ದಾರೆ.