ಬೈಂದೂರು: ಗೋಪಾಲ್ ಪೂಜಾರಿ ಎದುರು ಬಿಜೆಪಿ ಅಭ್ಯರ್ಥಿ ಯಾರು?
ಉಡುಪಿ, ಫೆಬ್ರವರಿ 2: ಉಡುಪಿ 5 ವಿಧಾನಸಭಾ ಕ್ಷೇತ್ರ ಗಳ ಪೈಕಿ ಪೈಪೋಟಿಯಿಂದ ಕೂಡಿರುವ ಕ್ಷೇತ್ರಗಳಲ್ಲಿ ಬೈಂದೂರು ಕೂಡಾ ಒಂದು. ಬೈಂದೂರು ಉಡುಪಿ ಜಿಲ್ಲೆಯ ಕಟ್ಟಕಡೆಯ ವಿಧಾನಸಭಾ ಕ್ಷೇತ್ರ. ಇಲ್ಲಿ ಜಾತಿ ಸಮೀಕರಣ ಬಹಳ ವರ್ಕ್ ಔಟ್ ಆಗುತ್ತೆ. ಬಂಟ, ಬಿಲ್ಲವ ಜಾತಿ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ಈ ಹಿನ್ನೆಲೆಯಲ್ಲಿ ಬಂಟ ಸಮುದಾಯದ ಸುಕುಮಾರ ಶೆಟ್ಟಿ ಬಿಜೆಪಿಯಿಂದ ಸ್ಪರ್ಧೆಗಿಳಿಸುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಾರಿ ಸುಕುಮಾರ್ ಶೆಟ್ಟಿ, ಕಾಂಗ್ರೆಸ್ ನ ಗೋಪಾಲ ಪೂಜಾರಿ ವಿರುದ್ಧ ಸೋಲು ಕಂಡಿದ್ದರು. ಜಾತಿ ಆಧಾರದ ಮೇಲೆ ಮತ ನಿರ್ಣಾಯಕವಾಗುವ ಕಾರಣದಿಂದ ಗೋಪಾಲ ಪೂಜಾರಿ ಇಲ್ಲಿ ಸತತ ಗೆಲುವು ಕಂಡಿದ್ದಾರೆ.
ಅಭಿವೃದ್ಧಿ ಕೆಲಸದಲ್ಲೂ ಗೋಪಾಲ್ ಪೂಜಾರಿ ಮುಂದಿದ್ದಾರೆ. ಜನ ಸಾಮಾನ್ಯರತ್ತ ಚಿತ್ತ ಹರಿಸಿದ್ದಾರೆ. ಆದರೆ ಕೆಲವು ವಿಚಾರದಲ್ಲಿ ಅವರ ವಿರುದ್ಧವೂ ಧ್ವನಿ ಎದ್ದಿವೆ. ಇಷ್ಟು ವರ್ಷಗಳಾದರೂ ಬೈಂದೂರು ಪ್ರಗತಿಯನ್ನು ಕಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯ ಆಜುಬಾಜುಗಳಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರ ಇನ್ನೂ ಸರಿಯಾದ ಸುಸಜ್ಜಿತ ಬಸ್ಸು ನಿಲ್ದಾಣವನ್ನು ಹೊಂದಿಲ್ಲ ಎಂಬ ಆರೋಪಗಳಿವೆ.
ಇನ್ನು ಪ್ರತಿನಿತ್ಯ ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸುವ ಸಾವಿರಾರು ಪ್ರವಾಸಿಗರಿಗೆ ಅನುಗುಣವಾಗಿ ಬೈಂದೂರು ಬೆಳೆದಿಲ್ಲ ಎಂಬುವುದು ಕೆಲವರ ವಾದ.
ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಬಿ.ಎಂ.ಸುಕುಮಾರ್ ಶೆಟ್ಟಿ ಅವರೊಂದಿಗೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಹೆಸರೂ ಕೂಡ ಕೇಳಿಬರುತ್ತಿದೆ.
ಈ ನಡುವೆ ಬಿ.ವೈ.ರಾಘವೇಂದ್ರ ಅವರ ಹೆಸರೂ ತೇಲಿಬರುತ್ತಿದೆ. ಇದಕ್ಕೆ ಕಾರಣವೂ ಇದೆ. ಸಂಸದರಾಗಿರುವ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ. ರಾಘವೇಂದ್ರ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಲು ತಾಲೀಮು ನಡೆಸುತ್ತಿದ್ದಾರಾದರೂ ಕೊನೆಗಳಿಗೆಯಲ್ಲಿ ಬೈಂದೂರಿಗೆ ಬಂದರೂ ಅಚ್ಚರಿ ಇಲ್ಲ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಯುಡಿಯೂರಪ್ಪ ಪರಮಾಪ್ತ ಸುಕುಮಾರ್ ಶೆಟ್ಟಿ ಟಿಕೆಟ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಸುಕುಮಾರ್ ಶೆಟ್ಟಿ ಬೈಂದೂರು ಕ್ಷೇತ್ರದಿಂದ ಖಾತೆ ತೆರೆಯುತ್ತಾರಾ ಅಥವಾ ಗೋಪಾಲ ಪೂಜಾರಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುತ್ತಾರಾ ಎಂಬುದನ್ನು ಮತದಾರ ಪ್ರಭುಗಳೇ ಹೇಳಬೇಕು.
ಇಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬೈಂದೂರಿನಲ್ಲಿ 1,01,775 ಮಹಿಳಾ ಮತದಾರರಿದ್ದರೆ, ಪುರುಷ ಮತದಾರರ ಸಂಖ್ಯೆ 89,162.