ಸಾಲ ತೀರಿಸಲಾಗದೇ ಪತ್ನಿ-ಮಗನಿಗೆ ಗೃಹಬಂಧನ, ರೈತ ಆತ್ಮಹತ್ಯೆ: ಸರ್ಕಾರ ವಿರುದ್ಧ ಗುಡುಗಿದ ವಿಜಯೇಂದ್ರ
ಬೆಂಗಳೂರು, ಮೇ 21: ಭೀಕರ ಬರದಿಂದ ಸಾಲ ಮರುಪಾವತಿ ಮಾಡಲಾಗದೇ ಸಾಲಗಾರರು ಪತ್ನಿ-ಪುತ್ರನನ್ನು ಗೃಹಬಂಧನದಲ್ಲಿ ಇಟ್ಟಿದ್ದಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಈ ದುರಂತ ನಡೆದಿದೆ. ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ರೈತರ ಕಷ್ಟಕ್ಕೆ ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿ.ವೈ ವಿಜಯೇಂದ್ರ, ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಮಾಡಿಕೊಂಡಿದ್ದಾರೆ.

ಖಾಸಗಿ ಸಾಲ ತೀರಿಸಲಾಗದೇ ಸಾಲಕೊಟ್ಟವರಿಂದ ಪತ್ನಿ, ಪುತ್ರನನ್ನು ನಿಷೇಧಿತ ಜೀತ ಪದ್ಧತಿ ಹಾಗೂ ಅಕ್ರಮ ಗೃಹ ಬಂಧನದ ಶಿಕ್ಷೆ ಅನುಭವಿಸುವ, ಅಪಮಾನ ಹಾಗೂ ಅಸಹಾಯಕ ಪರಿಸ್ಥಿತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ಕಾಲದಲ್ಲಿ ಈ ರಾಜ್ಯದ ಜನತೆ ಇನ್ನೂ ಏನೇನು ಅನುಭವಿಸಬೇಕೋ? ತಿಳಿಯದಾಗಿದೆ.
ಗೂಂಡಾಗಳು, ಮೀಟರ್ ಬಡ್ಡಿ ದಂಧೆಕೋರರು, ಕೊಲೆಗಡುಕರಿಗೆ ಈ ಸರ್ಕಾರದ ಆಡಳಿತ ವ್ಯವಸ್ಥೆ 'ನೆರಳಿನ ಭಾಗ್ಯ' ಕಲ್ಪಿಸಿಕೊಡುತ್ತಿದೆ. ಈ ಸರ್ಕಾರಕ್ಕೆ ನೈತಿಕತೆಯಿದ್ದರೆ ಕೂಡಲೇ ಯಮಕನಮರಡಿ ರೈತನ ಆತ್ಮಹತ್ಯೆ ಪ್ರಕರಣದ ಕುರಿತು ಕಠಿಣ ಕ್ರಮ ಜರುಗಿಸಿ ಮುಂದೆಂದೂ ಇಂಥಾ ಹೀನ ಘಟನೆಗಳು ರಾಜ್ಯದಲ್ಲಿ ತಲೆ ಎತ್ತದಂತೆ ಎಚ್ಚರಿಕೆ ವಹಿಸಲಿ. ರೈತ ಸಮೂಹಕ್ಕೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ರೂಪಿಸಲಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಆರ್ಥಿಕ ನೆರವು ಹಾಗೂ ಭದ್ರತೆ ಒದಗಿಸಲಿ ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ ಏನು..?
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ರೈತ, ಬೆಳೆ ಕೈಕೊಟ್ಟಿದ್ದಕ್ಕೆ ಜೀವನ ನಡೆಸಲು ಸಾಲ ಮಾಡಿದ್ದರು. ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ಸಾಲ ನೀಡಿದ್ದ ಮಹಿಳೆ ರೈತನ ಪತ್ನಿ, ಪುತ್ರನಿಗೆ ಗೃಹಬಂಧನದಲ್ಲಿರಿಸಿದ್ದಾಳೆ. ಪತ್ನಿ-ಪುತ್ರನನ್ನು ಗೃಹಬಂಧನದಲ್ಲಿ ಇಟ್ಟಿದ್ದಕ್ಕೆ ಮನನೊಂದ ರೈತ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆ ಬಳಿ ರಾಜು ಖೋತಗಿ ಎಂಬ ರೈತ ಒಂದೂವರೆ ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಸಹ ತುಂಬುತ್ತಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಸಿದ್ದವ್ವ ಏಕಾಏಕಿ ಸಾಲ ವಾಪಸ್ ಕೇಳಿದ್ದಾರೆ. ಸಾಲ ವಾಪಾಸ್ ಕೊಡುವವರೆಗೂ ಪುತ್ರನನ್ನ ಮನೆಯಲ್ಲಿ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಈ ವೇಳೆ ಪುತ್ರ ಬಸವರಾಜ್ನನ್ನು ತಂದೆ ರಾಜು ಸಿದ್ದವ್ವ ಮನೆಯಲ್ಲಿ ಬಿಟ್ಟು ಬಂದಿದ್ದರು. ಮಾರನೇ ದಿನ ಕರೆಯಲು ಹೋದ ದುರ್ಗವ್ವಗೂ ಗೃಹ ಬಂಧನದಲ್ಲಿಡಲಾಗಿತ್ತು. ಇದರಿಂದ ಮನನೊಂದು ರೈತ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.












Click it and Unblock the Notifications