ಈ ಕಾರಣಕ್ಕೆ ಯಾವುದೇ ಹೊಸ ಜಿಲ್ಲೆ, ತಾಲ್ಲೂಕು ಘೋಷಣೆ ಇಲ್ಲ
ಸಿಎಂ ಸಿದ್ದರಾಮಯ್ಯ ಅವರು ಇದೇ ಶುಕ್ರವಾರ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ನಲ್ಲಿ ರಾಜ್ಯದಲ್ಲಿ ಹಲವು ಜಿಲ್ಲೆಗಳಿಂದ ವಿವಿಧ ಬೇಡಿಕೆಗಳು ಬಂದಿದೆ. ಅದರಲ್ಲಿ ಮುಖ್ಯವಾಗಿ ಹೊಸ ಜಿಲ್ಲೆಗಳು ಹಾಗೂ ಹೊಸ ತಾಲ್ಲೂಕುಗಳ ಘೋಷಣೆಯೂ ಒಂದು. ಹಲವು ವರ್ಷಗಳಿಂದ ಇರುವ ಈ ಬೇಡಿಕೆ ಈ ಬಜೆಟ್ನಲ್ಲಾದರೂ ಈಡೇರುತ್ತಾ ಎನ್ನುವ ಆಸೆಯಲ್ಲಿದ್ದರು ಜನ. ಆದರೆ ರಾಜ್ಯ ಸರ್ಕಾರ ಈ ಆಸೆಗೆ ತಣ್ಣೀರೆರಚಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಬಜೆಟ್ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.
ಹೊಸ ಜಿಲ್ಲೆ ಅಥವಾ ತಾಲ್ಲೂಕುಗಳನ್ನು ರಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ ಪಾಟೀಲ್ ಅವರು ತಮ್ಮ ಕ್ಷೇತ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಜನಗಣತಿ ಸಂದರ್ಭದಲ್ಲಿ ಯಾವ ರಾಜ್ಯಗಳೂ ಹೊಸ ಕಂದಾಯ ಜಿಲ್ಲೆ ಘೋಷಿಸಬಾರದು ಎಂದು ಕೇಂದ್ರ ಸರ್ಕಾರದ ನಿಯಮವಿದೆ. ಅಲ್ಲದೆ, ರಾಜ್ಯ ಸರ್ಕಾರದ ಮುಂದೆಯೂ ಯಾವುದೇ ಹೊಸ ಜಿಲ್ಲೆ ಅಥವಾ ತಾಲ್ಲೂಕು ರಚನೆಯ ಪ್ರಸ್ತಾವನೆಯೂ ಇಲ್ಲ ಎಂದಿದ್ದಾರೆ. ಕೆಲವು ತಾಲ್ಲೂಕುಗಳಿಂದ ಮಾತ್ರ ಜಿಲ್ಲಾ ಕೇಂದ್ರದ ರಚನೆಯ ಸಂಬಂಧ ಮನವಿ ಬಂದಿದೆ. ಭವಿಷ್ಯದಲ್ಲಿ ಇಂತಹ ಸಾಧ್ಯತೆ ಎದುರಾದರೆ, ಖಂಡಿತವಾಗಿಯೂ ಇಂಡಿ ತಾಲ್ಲೂಕನ್ನು ಪರಿಗಣಿಸಲಾಗುವುದು ಎಂದೂ ಭರವಸೆ ನೀಡಿದ್ದಾರೆ.
ಎಲ್ಲೆಲ್ಲಿಂದ ಬೇಡಿಕೆ?: ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆ ಹೊಸ ಜಿಲ್ಲೆಗಳ ಘೋಷಣೆಗೆ ಬೇಡಿಕೆ ಹೆಚ್ಚಾಗಿತ್ತು. ಉತ್ತರ ಕರ್ನಾಟಕದ ಜಿಲ್ಲೆಗಳ ವಿಭಜನೆಗೆ ಹೆಚ್ಚಿನ ಕೂಗು ಕೇಳಿಬಂದಿದೆ. ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆಗೂ ಹಲವು ವರ್ಷಗಳಿಂದ ಒತ್ತಾಯವಿದೆ. ಬೈಲಹೊಂಗಲ, ಗೋಕಾಕ್, ಬೆಳಗಾವಿ ಹಾಗೂ ಚಿಕ್ಕೋಡಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವ ಬೇಡಿಕೆ ಇದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮೈಸೂರು ಜಿಲ್ಲೆಯ ಹುಣಸೂರು, ತುಮಕೂರು ಜಿಲ್ಲೆಯ ಮಧುಗಿರಿ ಹಾಗೂ ತಿಪಟೂರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರನ್ನು ಜಿಲ್ಲೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಗೋಕಾಕ್, ಬೈಲಹೊಂಗಲ, ಚಿಕ್ಕೋಡಿ, ಕಿತ್ತೂರು, ತಿಪಟೂರು, ಮಧುಗಿರಿ, ಶಿರಸಿ, ಹುಣಸೂರು, ಶಿಕಾರಿಪುರ, ಸಾಗರ, ಪುತ್ತೂರು, ಜಮಖಂಡಿ, ಇಂಡಿ, ಸಿಂಧನೂರು, ಸೇಡಂ, ಶಹಾಪುರ, ಗಂಗಾವತಿ ತಾಲ್ಲೂಕುಗಳನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂಬ ಬೇಡಿಕೆ ಇದೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ 2007ರಲ್ಲಿ ಬೆಂಗಳೂರು ಗ್ರಾಮಾಂತರದ ರಾಮನಗರವನ್ನು ಜಿಲ್ಲೆಯಾಗಿ ಘೋಷಿಸಲಾಯಿತು. ಬಳಿಕ ಕೋಲಾರದಿಂದ ಚಿಕ್ಕಬಳ್ಳಾಪುರ ಪ್ರತ್ಯೇಕ ಮಾಡಲಾಯಿತು. ನಂತರ 2009ರಲ್ಲಿ ಕಲಬುರಗಿಯಿಂದ ಯಾದಗಿರಿಯನ್ನು ಬೇರ್ಪಡಿಸಿ ಹೊಸ ಜಿಲ್ಲೆಯಾಗಿ ಮಾಡಲಾಯಿತು. ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಿ, ರಾಜ್ಯದ 31ನೇ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿತ್ತು.












Click it and Unblock the Notifications