ಕಟ್ಟಡ ನಿರ್ಮಾದ ವೇಳೆ ದುರಂತ: ಎಂಜಿನಿಯರ್ ಹೊಣೆಗಾರರಲ್ಲ-ಹೈಕೋರ್ಟ್
ಬೆಂಗಳೂರು, ಜೂ.21. ಕಟ್ಟಡ ನಿರ್ಮಾಣದ ವೇಳೆ ಅವಘಡ ಸಂಭವಿಸಿ ಕಾರ್ಮಿಕ ಮೃತಪಟ್ಟರೆ ಘಟನೆಗೆ ಕಟ್ಟಡ ವಿನ್ಯಾಸ ಮಾಡಿರುವ ವಾಸ್ತುಶಿಲ್ಪ ಎಂಜಿನಿಯರ್ ಹೊಣೆಗಾರನಾರಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ವಾಸ್ತುಶಿಲ್ಪ ಎಂಜಿನಿಯರ್ ವಿ.ವಿಶ್ವಾಸ್ ತಮ್ಮ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ನ್ಯಾಯಪೀಠದ ಆದೇಶದ ಸಾರಾಂಶ:
ಪ್ರಕರಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರನಿಗೆ ವಹಿಸಿದ್ದರು. ಗುತ್ತಿಗೆದಾರನ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದಾನೆ. ಗುತ್ತಿಗೆದಾರ ಅಧೀನದಲ್ಲಿ ಕೆಲಸಮಾಡುವ ಕಾರ್ಮಿಕ ಮೃತಪಟ್ಟರೆ, ಅದಕ್ಕೆ ಕಟ್ಟಡ ನಿರ್ಮಾಣಕ್ಕೆ ವಿನ್ಯಾಸಕ ಮಾಡಿಕೊಟ್ಟ ವಾಸ್ತುಶಿಲ್ಪ ಎಂಜಿನಿಯರ್ ಯಾವುದೇ ರೀತಿಯಲ್ಲೂ ಹೊಣೆಯಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಘಟನೆಯಲ್ಲಿ ಅರ್ಜಿದಾರರ ನಿರ್ಲಕ್ಷ್ಯ ಕಂಡುಬರುವುದಿಲ್ಲ. ಹಾಗಾಗಿ, ಅರ್ಜಿದಾರ ವಿರುದ್ಧ ಭಾರತೀಯ ದಂಡ ಸಂಹಿತೆ 304(ಎ) ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪವನ್ನು ಹೊರಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿದಾರನ ವಿರುದ್ಧ ನಂದಿನಿಲೇಔಟ್ ಠಾಣಾ ಪೊಲೀಸರು ದಾಖಲಿಸಿದ್ದ ದೂರು ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ:
ಚಂದ್ರಶೇಖರ್ ಎಂಬುವರು ನಗರದ ನಂದಿನಿ ಲೇಔಟ್ನಲ್ಲಿ ವಸತಿ ನಿವೇಶನ ಹೊಂದಿದ್ದರು. ಅವರು ವಿಶ್ವಾಸ್ ಅವರನ್ನು ಭೇಟಿ ಮಾಡಿ ಮನೆಯ ಕಟ್ಟಡದ ವಿನ್ಯಾಸ ಮಾಡಿಕೊಡಲು ಕೋರಿದ್ದರು. ವಿಶ್ವಾಸ್, ನಿವೇಶನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ವಿನ್ಯಾಸ ರಚನೆ ಮಾಡಿ ಕೊಟ್ಟಿದ್ದರು. ಆ ವಿನ್ಯಾಸ ಪ್ರಕಾರ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಿಗೆ ವಹಿಸಿದ್ದರು. ವಿಶ್ವಾಸ್ ಅಗ್ಗಾಗ್ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. 2020ರ ಅ.10ರಂದು ನಿವೇಶನದಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ಎಂಬ ಕಾರ್ಮಿಕ ವಿದ್ಯುತ್ ಸಂಪರ್ಕದಿಂದ ಸಾವನ್ನಪ್ಪಿದ್ದರು.
ಆ ಪ್ರಕರಣ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ ಅರ್ಜಿದಾರರನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ ನಿವೇಶನದ ಮಾಲೀಕ ಚಂದ್ರಶೇಖರ್ ಅವರನ್ನು ಕೈಬಿಟ್ಟು ವಿಶ್ವಾಸ್ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಿಕೊಟ್ಟ ಗುತ್ತಿಗೆದಾರರ ವಿರುದ್ಧ ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಹಾಗಾಗಿ ಅವರು ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications