DK Shivakumar: ರಾಜಕೀಯ ಒತ್ತಡದಿಂದ ಅನ್ವರ್ ಮಾಣಿಪ್ಪಾಡಿ ಯೂಟರ್ನ್: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 16: ರಾಜಕೀಯ ಒತ್ತಡದಿಂದಾಗಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುವರ್ಣಸೌಧದ ಆವರಣದಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು, ಅನ್ವರ್ ಮಾಣಿಪ್ಪಾಡಿ ಅವರು ತಮ್ಮ ಹೇಳಿಕೆ ಬದಲಿಸಿದ್ದಾರೆ. ಮಾಜಿ ಅಧ್ಯಕ್ಷರ ಹೇಳಿಕೆ ವಿಡಿಯೋಗಳನ್ನು ನಾನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವರನ್ನು ಗಮನಿಸಿದ್ದೇನೆ. ಅನೇಕ ವಿಚಾರಗಳು ಅವರ ಬಾಯಲ್ಲೇ ಬಂದಿವೆ. ತಮ್ಮ ವಿಚಾರವನ್ನು ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಪತ್ರ ಬರೆದು ತಿಳಿಸಿರುವುದಾಗಿ ಹೇಳಿದ್ದರು. ಅವರು ಹೇಳಿರುವ ವಿಚಾರಗಳನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ. ಈ ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ. ನಾವು ದಾಖಲೆ ಬಿಡುಗಡೆ ಮಾಡುವ ಮುನ್ನ ಅವರೇ ಈ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ತಿಳಿಸಿದರು.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು, ಸಿಬಿಐಗೆ ವಹಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದ ಎಲ್ಲಾ ವಿಚಾರ ನಮ್ಮ ಕಣ್ಮುಂದೆ ಇದೆ. ಸಿಬಿಐನವರು ಈ ಪ್ರಕರಣದ ತನಿಖೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿ. ನಂತರ ನಾವು ಆಲೋಚನೆ ಮಾಡುತ್ತೇವೆ. ನಾವಾಗಿ ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದು ಬಿಜೆಪಿ ಅವರಿಗೆ ಗೊತ್ತಿದೆ ಹೀಗಾಗಿ ಅವರು ಸಿಬಿಐ ತನಿಖೆಗೆ ಕೇಳುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಈ ವಿಚಾರವಾಗಿ ಯಾಕೆ ಗೊಂದಲ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಗೊಂದಲ ಮಾಡುತ್ತಿರುವವರು ನೀವು. ಅವರ ಹೇಳಿರುವ ಮಾತನ್ನು ನೀವು ಪ್ರಕಟಿಸಿದ್ದೀರಿ. ಈ ವಿಚಾರವನ್ಮು ಸಿಎಂ ಟ್ವೀಟ್ ಮಾಡಿದ್ದಾರೆ. ಈ ವಿಚಾರ ಮುಚ್ಚಿಕೊಳ್ಳಲು ಅವರಿಂದ ವಿಭಿನ್ನ ಹೇಳಿಕೆ ಕೊಡಿಸಲಾಗಿದೆ. ಅವರು ಹೇಳಿಕೆ ನೀಡಿರುವುದು ಸತ್ಯ. ಬೇಕಾದರೆ ಅವರ ಧ್ವನಿ ನೀವೇ ಪರಿಶೀಲಿಸಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕಾಂಗ್ರೆಸ್ ನಾಯಕರು ನನಗೆ ಆಫರ್ ಕೊಟ್ಟಿದ್ದಾರೆ ಎಂಬ ಅನ್ವರ್ ಅವರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವನ್ನು ಮೊದಲೇ ಹೇಳಬೇಕಿತ್ತು. ಯಾರೆಲ್ಲಾ ಆಫರ್ ಕೊಟ್ಟಿದ್ದರು ಎಂದು ಆಗ ಹೇಳದೆ, ಈಗ ಹೇಳಿದರೆ ಏನು ಪ್ರಯೋಜನ? ಅಧಿಕಾರ ಇದ್ದಾಗ ಏನು ಹೇಳುತ್ತೇವೆ ಎಂಬುದು ಮುಖ್ಯ ಎಂದು ತಿಳಿಸಿದರು.












Click it and Unblock the Notifications