ಅಂಬರೀಶ್ ಕೊನೆಯ ಆಸೆ ಈಡೇರಲೇ ಇಲ್ಲ: ಸುಮಲತಾ ನೋವಿನ ಮಾತು
Recommended Video
ಬೆಂಗಳೂರು, ನವೆಂಬರ್ 30: "ಭಗವದ್ಗೀತೆಯಲ್ಲಿ ಹೀಗೆ ಬರೆದಿದೆಯಂತೆ. ಭಗವಂತ ಮನುಷ್ಯನನ್ನು ಕೇಳುತ್ತಾನೆ, 'ನೀನು ಬರುವಾಗ ಏನು ತರುತ್ತೀ? ಹೋಗುವಾಗ ಏನು ತಗೊಂಡು ಹೋಗುತ್ತಿ? ಯಾವುದೂ ಶಾಶ್ವತ ಅಲ್ಲ'.
ಅದಕ್ಕೆ ಮನುಷ್ಯ, 'ನೀನು ನನ್ನನ್ನು ಕಳುಹಿಸುವಾಗ ಒಂದೇ ಒಂದು ಹೃದಯ ಕೊಟ್ಟು ಕಳುಹಿಸಿದ್ದೀಯ. ಆದರೆ, ನಾನು ಇಲ್ಲಿಂದ ಹೋಗುವಾಗ ಲಕ್ಷಾಂತರ ಜನರ ಹೃದಯದಲ್ಲಿ ಮನೆ ಮಾಡಿಕೊಂಡು ಶಾಶ್ವತವಾಗಿ ಇಲ್ಲಿಯೇ ಉಳಿದು ಬಿಡುತ್ತೇನೆ. ನೀನು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತೀಯ. ನನ್ನ ಹೃದಯ, ನನ್ನ ಮನೆ ಇಲ್ಲಿಯೇ ಇದ್ದು ಬಿಡುತ್ತದೆ' ಎಂದು ನಕ್ಕು ಹೇಳಿದನಂತೆ.
ಅಂತಹ ಮನುಷ್ಯರಾಗಿದ್ದರು ನಮ್ಮ ನಿಮ್ಮ ಅಂಬರೀಶ್" -ಹೀಗೆನ್ನುತ್ತಾ ಭಾವುಕರಾದರು ಸುಮಲತಾ ಅಂಬರೀಶ್.
ಅವರ ಕಣ್ಣುಗಳಲ್ಲಿ ಸಣ್ಣನೆ ನೀರು ಜಿನುಗುತ್ತಿತ್ತು. ಒತ್ತರಿಸಿಕೊಂಡು ಬರುತ್ತಿದ್ದ ದುಃಖವನ್ನು ಯಾವುದೋ ಶಕ್ತಿ ತಡೆದಂತಿತ್ತು. ಅವರ ಪ್ರತಿ ಮಾತಲ್ಲೂ ಅಂಬಿ ಇದ್ದರು. ಜತೆಗಿದ್ದ ಹಮ್ಮೀರನ ಕಳೆದುಕೊಂಡ ನೋವು ತೀವ್ರವಾಗಿ ಕಾಡುತ್ತಿರುವುದು ಅವರ ಮಾತು-ಮುಖದಲ್ಲಿ ಪ್ರಕಟವಾಗುತ್ತಿತ್ತು. ಆ ದುಃಖದಲ್ಲಿಯೂ ಸುಮಲತಾ, ಮಾತಿನಲ್ಲಿ ಸಂಯಮ ಕಾಪಿಟ್ಟುಕೊಂಡರು.
ಅಂಬರೀಶ್- ಸುಮಲತಾ ಜೀವನಪ್ರೀತಿ ತೋರಿಸುವ ಈ ವಿಡಿಯೋ ನೋಡಿದ್ದೀರಾ?
ಅಂಬಿ ಬಗ್ಗೆ ಇನ್ನೂ ಹೇಳುವುದು ಸಾಕಷ್ಟಿದೆ ಎನ್ನುವುದನ್ನು ನೆನಪಿಸುತ್ತಲೇ ಮಾತು ಮುಗಿಸಿದರು.
ಚಿತ್ರರಂಗದ ವತಿಯಿಂದ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬರೀಶ್ ಶ್ರದ್ಧಾಂಜಲಿ ಸಭೆಯಲ್ಲಿ ಸುಮಲತಾ ಆಡಿದ ಮಾತುಗಳ ಸಾರಾಂಶ ಇಲ್ಲಿದೆ...
ನನಗಿಂತಲೂ ಜಾಸ್ತಿ ನಿಮಗೇ ಗೊತ್ತು
ಅಂಬರೀಶ್ ಅವರ ಪಯಣದ ಬಗ್ಗೆ ಹೇಳಬೇಕು ಎಂದರೆ, ನನಗಿಂತಲೂ ಇಲ್ಲಿ ಇರುವವರು ಬೇಕಾದಷ್ಟು ಜನ ಅವರನ್ನು ಇನ್ನೂ ಹತ್ತಿರದಿಂದ ನೋಡಿದವರಿದ್ದೀರಿ. ಅವರ ಬಗ್ಗೆ ಇನ್ನಷ್ಟು ತಿಳಿದವರು ಇದ್ದೀರ. 27 ವರ್ಷಗಳಿಂದ ನಾನು ಅಂಬರೀಶ್ ಅವರನ್ನು ನೋಡಿದಷ್ಟನ್ನೇ ಹೇಳಲು ಸಾಧ್ಯ.
ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್?
ಎಲ್ಲರೂ ಬೆಂಬಲಿಸಿದ್ದೀರಿ
ಅವರ ಈ ಸಿನಿಮಾ ಪ್ರಯಾಣ ಶುರುವಾಗಿದ್ದು 45 ವರ್ಷಗಳೇ ಕಳೆದಿವೆ. ಅದರಲ್ಲಿ ಅವರಿಗೆ ಅನ್ನದಾತರಾಗಿದ್ದ ನಿರ್ಮಾಪಕರಿದ್ದೀರಿ. ಅವರಿಗೆ ಒಳ್ಳೆ ಒಳ್ಳೆ ಪಾತ್ರಗಳನ್ನು ಕೊಟ್ಟು, ಅವರನ್ನು ನಟರನ್ನಾಗಿ, ಕರ್ನಾಟಕದ ಜನರು ಮೆಚ್ಚುವ ಮೇರು ನಟರನ್ನಾಗಿ ಬೆಳೆಯೋಕೆ ಬೆಂಬಲ ಕೊಟ್ಟ ನಿರ್ದೇಶಕರು, ಸಹ ಕಲಾವಿದರು, ತಾಂತ್ರಿಕ ವರ್ಗದವರು ಎಲ್ಲರೂ ಇದ್ದೀರ. ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ಅಭಿಮಾನಿಗಳು. ಸಮಸ್ತ ಕರುನಾಡಿನ ಜನತೆ ಎಲ್ಲರಿಗೂ ನನ್ನ ಪಾದಾಭಿವಂದನೆಗಳು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಮನವಿ
ಜನರ ಮನುಷ್ಯನಾಗಿ ಉಳಿದರು
ಅಂಬರೀಶ್ ಅವರ ಬಗ್ಗೆ ಹೇಳಲು ಏನೆಂದು ಪದಗಳನ್ನು ಹುಡುಕಲಿ? ನಾನು ನೋಡಿರುವ ನನ್ನ ಅಂಬರೀಶ್ ಒಳ್ಳೆ ಮಗನಾಗಿದ್ದರು. ಒಳ್ಳೆಯ ಸಹೋದರ, ಒಳ್ಳೆಯ ಗಂಡ, ಒಳ್ಳೆ ತಂದೆ, ಒಳ್ಳೆ ಸ್ನೇಹಿತ, ಒಳ್ಳೆ ನಟ, ಒಳ್ಳೆ ರಾಜಕೀಯ ನಾಯಕ, ಒಳ್ಳೆ ಸಮಾಜ ಸೇವಕ ಇವೆಲ್ಲವೂ ಆಗಿದ್ದರು.
ಅವರಿಗೆ ಕ್ರೀಡೆಯಲ್ಲಿ ಬಹಳ ಬಹಳ ಆಸಕ್ತಿ. ಹೀಗೆ ಎಷ್ಟೊಂದು ಆಯಾಮಗಳು ಅವರಲ್ಲಿತ್ತು. ಆದರೆ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಒಳ್ಳೆಯ ಮನುಷ್ಯರಾಗಿದ್ದರು. ಒಬ್ಬ ಜನರ ಮನುಷ್ಯನಾಗಿದ್ದರು. ಕೊನೆವರೆಗೂ ಮನುಷ್ಯನಾಗಿಯೇ ಉಳಿದಿದ್ದರು. ಮನುಷ್ಯನಾಗೇ ಹೋದರು.
ರಾಜನಾಗಿ ಬಾಳಿದರು
ಅವರು ಒಬ್ಬ ರಾಜನ ಹಾಗೆ ಬಾಳಿದರು. ರಾಜನ ಹಾಗೆಯೇ ನಿರ್ಗಮಿಸಿದರು. ಆ ಒಂದು ಪ್ರಯಾಣದಲ್ಲಿ ರಾಜಕಾರಣದಲ್ಲಾಗಲೀ, ಖಾಸಗಿ ಜೀವನದಲ್ಲಾಗಲೀ ಬೆಂಬಲ ಕೊಟ್ಟವರು ಇವರೆಲ್ಲರಿಗೂ ನನ್ನ ಧನ್ಯವಾದಗಳು.
ಅವರ ಅಂತಿಮ ಪಯಣದಲ್ಲಿಯೂ ಅವರನ್ನು ಅರಸನಾಗೇ ಕಳುಹಿಸಿಕೊಟ್ಟಿದ್ದೀರಿ. ಅದಕ್ಕೆ ಮುಖ್ಯವಾಗಿ ನಾನು ಕುಮಾರಣ್ಣ ಅವರಿಗೆ ಕೈಜೋಡಿಸಿ ನಮಸ್ಕಾರ ಹೇಳ್ತೀನಿ. ಸರಿಯಾದ ಸಮಯಕ್ಕೆ ಸರಿಯಾದ ದಿಟ್ಟ ನಿರ್ಧಾರ ತೆಗೆದುಕೊಂಡು ಇದನ್ನು ನಡೆಸಿಕೊಟ್ಟಿದ್ದೀರಿ. ರೀತಿ ಸಮಸ್ತ ನಾಡಿನ ಜನತೆ, ಮಂಡ್ಯದ ಜನ ಅಭಿಮಾನಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಮಾಧ್ಯಮದವರಿಗೂ ಧನ್ಯವಾದಗಳು
ಈ ಸಂದರ್ಭದಲ್ಲಿ ಬಿಗಿ ಭದ್ರತೆ ಕೊಟ್ಟು ಸಹಕಾರ ನೀಡಿದ ಎಲ್ಲ ಅಧಿಕಾರಿಗಳಿಗೂ, ಪೊಲೀಸ್ ಇಲಾಖೆ, ಚಿತ್ರರಂಗದ ಕುಟುಂಬದವರಿಗೆ ಕೃತಜ್ಞತೆಗಳು. ಸಚಿವ ಸಂಪುಟದ ಮಿತ್ರರು ಅವರೂ ಬೆಂಬಲ ಕೊಟ್ಟಿದ್ದಾರೆ. ಮಾಧ್ಯಮದವರು ಯಾವಾಗಲೂ ಅವರನ್ನು ಕೇವಲ ರಾಜಕೀಯ ನಾಯಕಾನಾಗಿಯೋ ಅಥವಾ ಸಿನಿಮಾ ನಟನಾಗೋ ನೋಡಿಲ್ಲ. ಅವರು 'ಸುಂದರವಾದ ಭಾಷೆ'ಯಲ್ಲಿ ಸಂಭೋದನೆ ಮಾಡಿದಾಗಲೂ ಅಷ್ಟೇ ಕ್ರೀಡಾಮನೋಭಾವದಿಂದ ಸ್ವೀಕರಿಸಿ ಅಷ್ಟೇ ಪ್ರೀತಿ ತೋರಿಸಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು.
ಸ್ನೇಹಿತ ಎನ್ನಲೇ? ಗಂಡ ಎನ್ನಲೇ?
ಅವರು ಎಲ್ಲರಿಗೂ ಸ್ನೇಹಿತರಾಗಿದ್ದರು. ನನಗೆ ಸ್ನೇಹಿತ ಎನ್ನಲೇ? ಗಂಡ ಎನ್ನಲೇ? ಜೀವನ ಸಂಗಾತಿ ಎನ್ನಲೇ? ಅವೆಲ್ಲವುಗಳಿಗಿಂತ ಹೆಚ್ಚಾಗಿ ತಂದೆಯಾಗಿಯೂ ಇದ್ದರು, ಅಣ್ಣನಾಗಿಯೂ ಇದ್ದರು. ಪ್ರಾಣಕ್ಕಿಂತ ಹೆಚ್ಚಿನದ್ದಾಗಿದ್ದರು. ಇಂದು ಎಲ್ಲೇ ಇದ್ದರೂ ಅವರು ನಗು ನಗುತ್ತಲೇ ಆಶೀರ್ವಾದ ಮಾಡುತ್ತಲೇ ಇರುತ್ತಾರೆ.
ನನ್ನವರಾಗಿ ಮಾತ್ರ ಇರಲಿಲ್ಲ
ಅವರನ್ನು 'ನನ್ನ ಅಂಬರೀಶ್' ಎಂದು ಕರೆಯೋಕೆ ಸಂದರ್ಭವೇ ಬರಲಿಲ್ಲ. ಯಾಕೆಂದರೆ ಅವರು ನನ್ನವರಾಗಿ ಮಾತ್ರ ಯಾವತ್ತೂ ಇರಲಿಲ್ಲ. ಎಲ್ಲರ ಅಂಬರೀಶ್, ಎಲ್ಲರಿಗೂ ಬೇಕಾದವರು,. ಅವರನ್ನು ಕೊನೆಯ ಬಾರಿಗೆ ಅವರ ಅತ್ಯಂತ ಪ್ರಿಯವಾದ ಮಂಡ್ಯದ ಜನತೆಗೆ ದರ್ಶನ ಕೊಡಿಸಿರುವುದಕ್ಕೆ ನಿಜಕ್ಕೂ ಮಂಡ್ಯದ ಜನತೆ ನಿಮ್ಮನ್ನು ಎಂದಿಗೂ ಮರೆಯೋದಿಲ್ಲ. ಮತ್ತೊಮ್ಮೆ ಕುಮಾರಣ್ಣ ಅವರಿಗೆ ಧನ್ಯವಾದಗಳು.
ಕೊನೆಯ ಆಸೆ ಈಡೇರಲಿಲ್ಲ
ಅಂಬರೀಶ್ ಅವರಿಗೆ ಕೊನೆಯದಾಗಿ ಒಂದು ಆಸೆ ಇತ್ತು. ಅದು ಮಗ ಅಭಿಷೇಕ್ನ ಮೊದಲನೆ ಸಿನಿಮಾ ನೋಡುವುದು. ಆದರೆ ಅದು ಸಾಧ್ಯವಾಗಲಿಲ್ಲ. ಅಭಿಷೇಕ್ ಮೇಲೂ ನಿಮ್ಮ ಆಶೀರ್ವಾದ ಇರಲಿ ಎಂದು ನನ್ನ ಪ್ರಾರ್ಥನೆ. ಎಲ್ಲರಿಗೂ ಧನ್ಯವಾದಗಳು.