ಸಿದ್ದರಾಮಯ್ಯ, ನಳಿನ್ ಕಟೀಲ್ ಜುಗಲ್ ಬಂದಿ: ಜನರಿಗೆ ಪುಕ್ಸಟೆ ರಸಕವಳ
ಬೆಂಗಳೂರು, ಅ 24: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ವಾಕ್ಸಮರ ಮುಂದುವರಿದಿದೆ. ಇವರಿಬ್ಬರ ಆರೋಪ, ಪ್ರತ್ಯಾರೋಪ, ಸಾರ್ವಜನಿಕ ವಲಯದಲ್ಲಿ ತಮಾಷೆಗೆ ಗುರಿಯಾಗುತ್ತಿದೆ.
ಉಪಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ, ಕಟೀಲ್ ಅವರಿಗೆ ಧಮ್ ಇದೆಯಾ ಎಂದು ಪ್ರಶ್ನಿಸಿದರೆ, ನಿಮ್ಮ ಮುಖಂಡ ಚಿದಂಬರಂ ಮನೆ ಮುಂದೆ ಹೋಗಿ, ಈ ಪ್ರಶ್ನೆ ಕೇಳಿ ಎಂದು ಕಟೀಲ್, ತಿರುಗೇಟು ನೀಡಿದ್ದಾರೆ.
"ಪ್ರಾಣ ರಕ್ಷಕ ಕೊರೊನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿರುವ ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ @nsitharaman ಅವರ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಿರಾ @nalinkateel ಅವರೇ?"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ @nsitharaman ಅವರ ಮನವೊಲಿಸಿ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದದಲ್ಲಿ ಕೊರೊನಾದಿಂದ ಭೀತಿಗೊಳಗಾಗಿರುವ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ 'ಧಮ್' (ಇದು ನಿಮ್ಮದೇ ಭಾಷೆ) ನಿಮಗಿದೆಯೇ ಶ್ರೀ @nalinkateel ಅವರೇ?" ಎನ್ನುವ ಪ್ರಶ್ನೆಯನ್ನು ಸಿದ್ದರಾಮಯ್ಯ ಟ್ವೀಟ್ ಮೂಲಕ ಎತ್ತಿದ್ದರು.
ಇದಕ್ಕೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿರುವ ನಳಿನ್ ಕಟೀಲ್, "ಕೊರೊನಾ ವೈರಾಣುಗೆ ಲಸಿಕೆ ಬಂದಾಗ ಆತ್ಮನಿರ್ಭರ್ ಯೋಜನೆ ಅಡಿಯಲ್ಲಿ ಯಾವೆಲ್ಲಾ ರಾಜ್ಯಗಳಿಗೆ ಹೇಗೆ ತಲುಪಿಸಬೇಕೋ ಎನ್ನುವುದು ನಮಗೆ ತಿಳಿದಿದೆ. ಇದನ್ನೆಲ್ಲಾ, ಯಾರಿಂದಲೂ ಹೇಳಿಸಿಕೊಳ್ಳಬೇಕಾದ ಅಗತ್ಯ ನಮಗಿಲ್ಲ"ಎಂದು ನಳಿನ್ ಕಟೀಲ್ ತಿರುಗೇಟು ನೀಡಿದ್ದಾರೆ.
"ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಮೊದಲು ಅವರು ಮಾತನಾಡುವುದನ್ನು ಕಲಿಯಲಿ. ನನ್ನ ಧಮ್ ಬಗ್ಗೆ ಪ್ರಶ್ನಿಸಿರುವ ಅವರು, ಚಿದಂಬರಂ ಮುಂದೆ ನಿಂತು ಮಾತನಾಡುವ ಧಮ್ ಅನ್ನು ತೋರಿಸುತ್ತಾರಾ"ಎಂದು ಕಟೀಲ್, ಸಿದ್ದರಾಮಯ್ಯಗೆ ಕುಟುಕಿದ್ದಾರೆ.












Click it and Unblock the Notifications