ರನ್ಯಾ ರಾವ್ ಕೇಸ್: ವಿಜಯೇಂದ್ರ ಕಡೆ ಬೊಟ್ಟು ಮಾಡಿದ ಕಾಂಗ್ರೆಸ್ ನಾಯಕ
ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಅವರ ಅಕ್ರಮ ಚಿನ್ನ ಸಾಗಾಟ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೊದಲಿಗೆ ಮೇಲ್ನೋಟಕ್ಕೆ ಇದು ವಿದೇಶದಿಂದ ಚಿನ್ನ ಸಾಗಾಟ ಪ್ರಕರಣವಾಗಿ ಕಂಡುಬಂದಿತ್ತು. ಇದೀಗ ಈ ಕೇಸ್ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಕೇಸ್ಗೆ ಪ್ರಭಾವಿ ಸಚಿವರ ನಂಟಿದೆ ಎಂಬ ಶಾಕಿಂಗ್ ವಿಚಾರ ತನಿಖೆ ವೇಳೆ ಕೇಳಿಬಂದಿದೆ. ಇಷ್ಟಕ್ಕೂ ರನ್ಯಾ ರಾವ್ ಜೊತೆ ನಂಟು ಹೊಂದಿರುವ ರಾಜಕಾರಣಿಗಳು ಯಾರು ಎಂಬ ಉತ್ತರಕ್ಕೆ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ. ಇದೇ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಡೆಗೆ ಕಾಂಗ್ರೆಸ್ ನಾಯಕ ಬೊಟ್ಟು ಮಾಡಿದ್ದಾರೆ.
ನಟಿ ರನ್ಯಾ ರಾವ್ ಕೇಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಬಿವೈ ವಿಜಯೇಂದ್ರ, ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹವಾಲಾ ನಂಟು ಬೆಸೆದುಕೊಂಡಿರುವ ಶಂಖೆ ವ್ಯಕ್ತವಾಗಿದ್ದು, ಆರೋಪಿ ರನ್ಯಾ ರಾವ್ ಬಂಧನದ ಸಂದರ್ಭದಲ್ಲಿ ಸಚಿವರೊಬ್ಬರನ್ನು ಸಂಪರ್ಕಿಸಲು ಯತ್ನಿಸಿರುವುದು ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಸ್ಪಷ್ಟ ಅನುಮಾನಗಳು ಮೂಡುತ್ತಿವೆ ಎಂದು ಹೇಳಿದ್ದರು.

ಅಲ್ಲದೆ, ರನ್ಯಾ ರಾವ್ ಅವರು ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಯೂ ಆಗಿರುವ ಕಾರಣ ಇಡೀ ಸರ್ಕಾರದ ವ್ಯವಸ್ಥೆಯ ಮೇಲೆ ಕರಿನೆರಳು ಆವರಿಸಿದೆ. ಈ ಪ್ರಕರಣ ನಮ್ಮ ರಾಜ್ಯಕ್ಕೂ ಕಳಂಕ ತಂದಿದ್ದು, ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಈ ಪ್ರಕರಣದ ಕುರಿತು ವಾಸ್ತವ ಸ್ಥಿತಿಯನ್ನು ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದರು. ಈ ಕೇಸ್ ಅನ್ನು ಸಿಬಿಐ ತನಿಖೆ ನಡೆಸುತ್ತಿರುವುದರಿಂದ ತಾರ್ಕಿಕ ಅಂತ್ಯ ತಲುಪಲಿದೆ ಎಂಬ ವಿಶ್ವಾಸವಿದೆ ಎಂದೂ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಪ್ರಕರಣದಲ್ಲಿ ಯಾವ ರಾಜಕಾರಣಿ ಇದ್ದರೂ ಹೆಸರು ಹೇಳಿದ್ರೆ ಮಾತ್ರ ಗೊತ್ತಾಗುತ್ತೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆ ಸಚಿವರು ಇರಬಹುದು, ಈ ಸಚಿವರು ಇರಬಹುದು ಎನ್ನುವುದು ಸರಿಯಲ್ಲ. ಈಗ ಸಿಬಿಐ, ಡಿಆರ್ಐ ಈ ಕೇಸ್ ತನಿಖೆ ನಡೆಸುತ್ತಿವೆ. ಒಂದು ವೇಳೆ ಆ ರೀತಿ ಯಾರದ್ದಾದರೂ ಹೆಸರು ಗೊತ್ತಿದ್ದರೆ ಬಹಿರಂಗಪಡಿಸಲಿ. ಇದು ಅವರ ತನಿಖೆಗೂ ನೆರವಾಗುತ್ತದೆ. ಸುಮ್ಮನೆ ಈ ಕೇಸ್ನಲ್ಲಿ ಇಬ್ಬರು ಸಚಿವರ ಪಾತ್ರ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ ಎಂದಿದ್ದಾರೆ.

ʼವಿಜಯೇಂದ್ರ ಕೂಡ ದುಬೈಗೆ ಹೋಗಿ ಬರ್ತಾರೆʼ
ಅವರದ್ದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳುವಂತೆ ವಿಜಯೇಂದ್ರ ಅವರಿಗೆ ದುಬೈ ಬಗ್ಗೆ ಬಹಳಷ್ಟು ಅನುಭವ ಇದೆ. ಇದನ್ನು ನಾವಲ್ಲ ಹೇಳಿರೋದು. ದುಬೈನಲ್ಲಿ ವಿಜಯೇಂದ್ರ ಅವರ ಸಾಕಷ್ಟು ದುಡ್ಡಿದೆ ಎಂದು ಯತ್ನಾಳ್ ಅವರೇ ಹೇಳಿದ್ದಾರೆ. ಹಾಗಾಗಿ ವಿಜಯೇಂದ್ರ ಅವರಿಗೆ ಈ ವಿಚಾರ ಗೊತ್ತಿರಬಹುದು. ಅವರಿಗೆ ಮಾಹಿತಿ ಇದ್ರೆ ಕೊಡಲಿ, ಬೇಕಾದ್ರೆ ತನಿಖೆ ಮಾಡಿಸುತ್ತೇವೆ. ಈಗ ತನಿಖೆ ನಡೆಸುತ್ತಿರೋ ಸಿಬಿಐ, ಡಿಆರ್ಐ ಅವರದ್ದೇ ಸಂಸ್ಥೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವ ಬದಲು ದಾಖಲೆಗಳಿದ್ರೆ ಕೊಡಿ ಸ್ವಾಮಿ..ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ನಟಿ ಹಿಂದೆ ಘಟಾನುಘಟಿಗಳು: ನಟಿ ರನ್ಯಾ ರಾವ್ ಅವರ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಗೆ ಬರುತ್ತಿದೆ. ಅವರು ಬೇರೆ ಬೇರೆ ದೇಶಗಳಿಗೆ ಹೋಗಿ ಬಂದಿರುವ ಮಾಹಿತಿ ಹೊರಬಿದ್ದಿದೆ. ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿ ಬಂದಾಗ ಸಂಪೂರ್ಣವಾದ ಪ್ರೋಟೋಕಾಲ್ ವ್ಯವಸ್ಥೆ ಸಿಗುತ್ತಿತ್ತು. ನಟಿಗೆ ಪೊಲೀಸರೇ ಎಸ್ಕಾರ್ಟ್ ನೀಡಿ, ಕರೆದೊಯ್ಯುತ್ತಿದ್ದರು. ಸೆಕ್ಯುರಿಟಿ ತಪಾಸಣೆ ಆಗುವುದಿಲ್ಲ ಎಂದಾದರೆ, ಇದರ ಹಿಂದೆ ಕೆಲವು ಘಟಾನುಘಟಿಗಳಿದ್ದಾರೆ. ಅಲ್ಲದೇ ಕೆಲವು ಸಚಿವರೂ ಇದ್ದಾರೆ ಎಂದು ವಿಜಯೇಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications