ಚಿಕ್ಕರಾಯಪ್ಪ ಸಂಬಂಧಿಗಳ ಮನೆ ಮೇಲೆ ಎಸಿಬಿ ದಾಳಿ
ಕೋಲಾರ, ಡಿಸೆಂಬರ್ 08 : ಕೋಟಿಗಟ್ಟಲೆ ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ಅಮಾನತಾಗಿರುವ ಸರಕಾರಿ ಅಧಿಕಾರಿ ಚಿಕ್ಕರಾಯಪ್ಪ ಅವರ ಸಂಬಂಧಿಗಳ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಕಾವೇರಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಚಿಕ್ಕರಾಯಪ್ಪ ಮತ್ತು ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿ ಜಯಚಂದ್ರ ಅವರ ಬಳಿ 152 ಕೋಟಿ ರು.ಗೂ ಹೆಚ್ಚು ಅಕ್ರಮ ಆಸ್ತಿ ಇರುವುದು ಪತ್ತೆಯಾದ ನಂತರ ಅವರಿಬ್ಬರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಲಾಗಿದೆ. [ಹೈದರಾಬಾದ್ : ಐಟಿ ದಾಳಿ, 17 ಲಕ್ಷ ಅಕ್ರಮ ಹಣ ವಶ]
ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ಇದರ ಭಾಗವಾಗಿ ಕೋಲಾರದ ಕೆಜಿಎಫ್ ನಲ್ಲಿರುವ ಚಿಕ್ಕರಾಯಪ್ಪ ಅವರ ನಾದಿನಿಯ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಜಿಎಫ್ ನಲ್ಲಿರುವ ಸಂಬಂಧಿಯ ಮನೆಯಲ್ಲಿ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಚಿಕ್ಕರಾಯಪ್ಪ ಬಚ್ಚಿಟ್ಟಿದ್ದಾರೆ ಎಂಬ ಸುಳಿವು ಸಿಕ್ಕ ಮೇಲೆ ದಾಳಿ ನಡೆಸಲಾಗಿದೆ. [ಬೆಂಗಳೂರಿನ ಕೆನರಾ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮೇಲೆ ದಾಳಿ]
ಬೆಂಗಳೂರಿನಲ್ಲಿ ಆದಾಯ ತೆರಿಖೆ ಇಲಾಖೆ ಅಧಿಕಾರಿಗಳು ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಮನೆಗಳ ಮೇಲೆ ಡಿಸೆಂಬರ್ 2ರಂದು ದಾಳಿ ನಡೆಸಿ, 4.7 ಕೋಟಿ ರು. ಹೊಸ ನೋಟು ಸೇರಿದಂತೆ, 6 ಕೋಟಿ ರು.ಗೂ ಹೆಚ್ಚು ನಗದು ಮತ್ತು 7 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. [ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?]