ಏಳು ಸಾವಿರ ಲಂಚಕ್ಕೆ ಕೈಯೊಡ್ಡಿ ಜೈಲು ಸೇರಿದ ದ್ವಿತೀಯ ದರ್ಜೆ ಸಹಾಯಕ!
ಬೆಂಗಳೂರು, ಜೂ. 21: ಏಳು ಸಾವಿರ ಲಂಚಕ್ಕೆ ಆಸೆ ಪಟ್ಟು ದ್ವಿತೀಯ ದರ್ಜೆ ಸಹಾಯಕ ಜೈಲು ಸೇರಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಮನೆ ನಿರ್ಮಿಸಲು ಪಂಚಾಯಿತಿಯಿಂದ ಅನುಮತಿ ನೀಡಲು ಪಂಚಾಯಿತಿ ಸದಸ್ಯೆ ಮತ್ತು ಪಂಚಾಯಿತಿ ಅಧಿಕಾರಿ ಲಂಚ ನುಂಗಲು ಹೋಗಿ ಬಳ್ಳಾರಿ ಜೈಲು ಸೇರಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಸೇರಿದಂತೆ ಮೂವರು ಬಂಧನಕ್ಕೆ ಒಳಗಾಗಿದ್ದಾರೆ. ಬಿಡಿಗಾಸು ಲಂಚಕ್ಕೆ ಕೈಚಾಚಿ ದ್ವಿತೀಯ ದರ್ಜೆ ಸಹಾಯಕ ಜೀವನದ ಮೇಲೆ ಕಲ್ಲು ಹಾಕಿಕೊಂಡಿದ್ದಾನೆ.
ಚಾಮರಾಜನಗರದಲ್ಲಿ ಟ್ರ್ಯಾಪ್ ಕಾರ್ಯಾಚರಣೆ:
ಏಳು ಸಾವಿರಕ್ಕೆ ಕೈಯೊಡ್ಡಿ ಜೈಲು ಸೇರಿದ ಎಸ್ಡಿಎ: ಚಾಮರಾಜನಗರದ ಅಟ್ಟುಗಳ್ಳಿಪುರದ ನಿವಾಸಿ ನಾಲ್ಕನೇ ದರ್ಜೆ ಗುತ್ತಿಗೆ ಪರವಾನಗಿ ಪಡೆಯಲು ಲೋಕೋಪಯೋಗಿಯ ಕಾರ್ಯ ನಿರ್ವಾಯಕ ಇಂಜಿನಿಯರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ನಾಲ್ಕನೇ ದರ್ಜೆ ಗುತ್ತಿಗೆದಾರ ಪರವಾನಗಿ ನೀಡಲು 10 ಸಾವಿರ ರೂ. ಲಂಚ ನೀಡುವಂತೆ ದ್ವಿತೀಯ ದರ್ಜೆ ಸಹಾಯಕ ಗೋವಿಂದಯ್ಯ ಬೇಡಿಕೆ ಇಟ್ಟಿದ್ದಾರೆ. ಹತ್ತು ಸಾವಿರ ಹಣವನ್ನು ದೂರುದಾರ ನೀಡಿದ್ದರು. ಆ ಬಳಿಕ ಪುನಃ 7500 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಕುಪಿತಗೊಂಡ ಅರ್ಜಿದಾರ ಚಾಮರಾಜನಗರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಎರಡನೇ ಕಂತಿನ ಲಂಚ 7500 ರೂ. ಲಂಚ ಸ್ವೀಕರಿಸುತ್ತಿದ್ದ ಗೋವಿಂದಯ್ಯನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿತನ ಅಧಿಕಾರಿ ಬಳಿ ಲಂಚ ಹಣ ವಶಪಡಿಸಿಕೊಂಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಓ ಕೂಡ ಜೈಲಿಗೆ:
ಬಳ್ಳಾರಿ ತಾಲೂಕಿನ ಗುಡಾರನಗರ ನಿವಾಸಿ ಮನೆ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಮನೆ ನಿರ್ಮಾಣದ ಪರವಾನಗಿ ನೀಡಲು ಪಂಚಾಯಿತಿ ಸದಸ್ಯೆ ಮಹಾಲಕ್ಷ್ಮೀ ಅವರ ಪತಿ ಜಂಬಣ್ಣ ಅವರು 80 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಿಡಿಓ ಸಿದ್ದಲಿಂಗಪ್ಪ ಅವರನ್ನು ಕೇಳಿದಾಗ, ಜಂಬಣ್ಣ ಹೇಳಿದ್ದೇ ಫೈನಲ್ ಅಂತ ಲಂಚದ ದಾಹವನ್ನು ತೋರಿದ್ದಾರೆ. ಈ ಕುರಿತು ಗುಡಾರನಗರ ನಿವಾಸಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಎಸಿಬಿ ಪೊಲೀಸರು ಪಂಚಾಯಿತಿ ಸದಸ್ಯೆಯ ಪತಿ ಜಂಬಣ್ಣ, ಪಿಡಿಓ ಸಿದ್ದಲಿಂಗಪ್ಪ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 80 ಸಾವಿರ ರೂ. ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳ್ಳಾರಿ ಜಿಲ್ಲಾ ಎಸಿಬಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.












Click it and Unblock the Notifications