ಮೂರು ಡಿಸಿಎಂ ಹುದ್ದೆ ಬೇಡಿಕೆ ಹಿಂದೆ ಸಿದ್ದು ಬಣದ ರಾಜಕೀಯ: ಮಹಾದಾಳದ ಹಿಂದೆ ಟಗರು? ಇನ್ಸೈಡ್ ರಿಪೋರ್ಟ್
ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕೆಂಬ ಒತ್ತಾಯ ಕಾಂಗ್ರೆಸ್ನಲ್ಲಿ ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಕುರಿತಾಗಿ ಹೈಕಮಾಂಡ್ಗೂ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಯ ಹಿಂದೆ ಸಿಎಂ ಸಿದ್ದರಾಮಯ್ಯನವರು ಇದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ.
ರಾಜಣ್ಣ ಬೇಡಿಕೆ ಏನು?
ಸಿದ್ದರಾಮಯ್ಯ ನಿಕಟವರ್ತಿಯೂ ಆಗಿರುವ ರಾಜಣ್ಣ ಅವರು ವೀರಶೈವ ಲಿಂಗಾಯತ, ಎಸ್ಸಿ / ಎಸ್ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಇನ್ನೂ ಮೂರು ಡಿಸಿಎಂಗಳನ್ನು ನೇಮಿಸಬೇಕು. ಇದರಿಂದ 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಹಾಯವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

'ಕರ್ನಾಟಕದಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕು ಎಂಬುದು ನನ್ನ ಉದ್ದೇಶ. ಅದು ಆಗಬೇಕಾದರೆ ಎಲ್ಲ ಪ್ರಮುಖ ಸಮುದಾಯಗಳಿಗೂ ಒಂದು ಡಿಸಿಎಂ ಹುದ್ದೆ ನೀಡಬೇಕು' ಎಂದು ಹೇಳಿದ್ದಾರೆ.
ಹುಟ್ಟಿಕೊಂಡ ಊಹಾಪೋಹಗಳು
ರಾಜಣ್ಣ ಅವರ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಹಲವು ಊಹಾಪೋಹಗಳು ಓಡಾಡುತ್ತಿವೆ. ಈಗ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರ ಪ್ರಭಾವವನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವೆಂದು ಹೇಳಲಾಗುತ್ತಿದೆ.

ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ತಾವು ಶತಾಯಗತಾಯ ಸಿಎಂ ಆಗಲೇಬೇಕೆಂದು ಹಠ ಹಿಡಿದಿದ್ದರು. ಅದು ಸಾಧ್ಯವಾಗದೇ ಇದ್ದಾಗ, ಡಿಸಿಎಂ ಸ್ಥಾನದಲ್ಲಿ ನಾನೊಬ್ಬನೇ ಇರಬೇಕು ಎಂದು ಪ್ರತಿಪಾದಿಸಿದ್ದರು. ಅದರಂತೆಯೇ ನಡೆದುಕೊಂಡ ಹೈಕಮಾಂಡ್, ಡಿಕೆ ಶಿವಕುಮಾರ್ ಅವರೊಬ್ಬರನ್ನೇ ಡಿಸಿಎಂ ಸ್ಥಾನಕ್ಕೆ ನೇಮಿಸಿತು.
ಪ್ರಭಾವ ಹೆಚ್ಚಿಸಿಕೊಂಡ ಡಿಕೆ
ಒಬ್ಬರೇ ಡಿಸಿಎಂ ಸ್ಥಾನದಲ್ಲಿ ಇರುವುದರಿಂದ ಡಿಕೆ ಶಿವಕುಮಾರ್ ಅವರ ಪ್ರಭಾವ ಹೆಚ್ಚಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಸಿಎಂ ಸೇರಿದಂತೆ ಜಲಸಂಪನ್ಮೂಲ ಖಾತೆ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆಗಳನ್ನು ಡಿಕೆ ಶಿವಕುಮಾರ್ ಆರಿಸಿಕೊಂಡರು. ಇವೆರಡೂ ಪ್ರತಿಷ್ಠಿತ ಖಾತೆಗಳೆಂದು ಪರಿಗಣಿಸಲ್ಪಟ್ಟಿವೆ. ಪ್ರಮುಖ ಖಾತೆಗಳನ್ನು ವಹಿಸಿಕೊಂಡಿರುವ ಡಿಕೆ ಅವರು ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿದಿದ್ದಾರೆ.

ಸಿದ್ದು ಬಣದ ಗುಪ್ತ ಅಸಮಾಧಾನ
ಹೆಚ್ಚುತ್ತಿರುವ ಡಿಕೆ ಪ್ರಭಾವದಿಂದ ಸಿದ್ದರಾಮಯ್ಯ ಬಣದ ಕೆಲ ಸಚಿವರ ಒಳಗೊಳಗೇ ಕುದ್ದು ಹೋಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದು ಸಿದ್ದು ಬಣದ ಗುಪ್ತ ಅಸಮಾಧಾನಕ್ಕೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂವರು ಡಿಸಿಎಂ ಬೇಡಿಕೆಯನ್ನು ಸಿದ್ದು ಬಣದ ಸಚಿವರ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ತಂತ್ರದ ಹಿಂದೆ ಟಗರು?
ಮೂವರು ಡಿಸಿಎಂ ಬೇಡಿಕೆ ಹಿಂದೆ ಸಿದ್ದರಾಮಯ್ಯನವರು ಇದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಪ್ರಭಾವಿ ಡಿಕೆ ಶಿವಕುಮಾರ್ ಅವರ ಶಕ್ತಿಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವೆಂದು ಹೇಳಲಾಗುತ್ತಿದೆ. ದೊಡ್ಡ ಸಮುದಾಯಗಳ ಹೆಸರಿನಲ್ಲಿ ಮೂವರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿದರೆ, ಒಕ್ಕಲಿಗ ನಾಯಕ ಡಿಕೆಶಿ ಪ್ರಭಾವ ಕುಗ್ಗಲಿದೆ ಎಂಬುದು ಸಿದ್ದು ಬಣದ ತಂತ್ರವಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಸ್ವತಃ ಸಿದ್ದರಾಮಯ್ಯನವರ ತಂತ್ರವಿದೆಯೇ? ಎಂಬ ಪ್ರಶ್ನೆ ಇನ್ನೂ ಗುಟ್ಟಾಗಿ ಉಳಿದುಕೊಂಡಿದೆ.












Click it and Unblock the Notifications