Breaking: ಬೆಂಗಳೂರಿನಲ್ಲಿ ಇಬ್ಬರನ್ನು ಬಲಿ ಪಡೆದ ಕೊರೊನಾ ವೈರಸ್!
ಬೆಂಗಳೂರು, ಜೂನ್.07: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಭಾನುವಾರ ಕೂಡಾ ರಾಜ್ಯದಲ್ಲಿ 239 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,452ಕ್ಕೆ ಏರಿಕೆಯಾಗಿದೆ.
ಭಾನುವಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲೇ ಇಬ್ಬರು ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಕರ್ನಾಟಕದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
ಮಂಡ್ಯ: ಕ್ವಾರೆಂಟೈನ್ ಕೇಂದ್ರದಿಂದ ಮನೆಗೆ ಕೊರೊನಾ ವೈರಸ್ ಸೋಂಕಿತ!
ಬೆಂಗಳೂರಿನ ನಗರ ನಿವಾಸಿ 2519ನೇ ರೋಗಿ ಆಗಿರುವ 61 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಮೇ.29ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯು ಚಿಕಿತ್ಸೆ ಫಲಿಸದೇ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಬೆಂಗಳೂರಿನ ನಿವಾಸಿಯೇ ಆಗಿರುವು ಮತ್ತೊಬ್ಬ ಕೊರೊನಾ ವೈರಸ್ ಸೋಂಕಿತ ಕೂಡಾ ಭಾನುವಾರ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. 4,315ನೇ ರೋಗಿ ಆಗಿರುವ 57 ವರ್ಷದ ಪುರುಷ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಪತ್ತೆಯಾದ ಜಿಲ್ಲಾವಾರು ಸೋಂಕಿತ ಪ್ರಕರಣ:
ಕರ್ನಾಟಕದಲ್ಲಿ 239 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಪೈಕಿ ಕಲಬುರಗಿ -39, ಯಾದಗಿರಿ - 39, ಬೆಳಗಾವಿ -38, ಬೆಂಗಳೂರು ನಗರ - 23, ದಕ್ಷಿಣ ಕನ್ನಡ - 17, ಉಡುಪಿ -13, ಶಿವಮೊಗ್ಗ -12, ವಿಜಯಪುರ - 9, ಬೀದರ್ - 7, ಬಳ್ಳಾರಿ -6, ಬೆಂಗಳೂರು ಗ್ರಾಮಾಂತರ -5, ಹಾಸನ -5, ಧಾರವಾಡ -3, ಗದಗ -2, ಉತ್ತರ ಕನ್ನಡ -2, ಮಂಡ್ಯ -1, ರಾಯಚೂರು -1 ಪ್ರಕರಣಗಳು ಪತ್ತೆಯಾಗಿವೆ.