ಚಕ್ರವರ್ತಿ ಸೂಲಿಬೆಲೆ ಬರೆದ "ತಾಯಿ ಭಾರತಿಯ ಅಮರಪುತ್ರರು' ಪೂರ್ಣ ಪಾಠ ಇಲ್ಲಿದೆ
ಬೆಂಗಳೂರು, ಮೇ24: ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಪಠ್ಯಪುಸ್ತಕವನ್ನು ಪರಿಷ್ಕರಣೆಯನ್ನು ಮಾಡಿದೆ. ಚಕ್ರವರ್ತಿ ಸೂಲಿಬೆಲೆಯವರು ಬರೆದ "ತಾಯಿ ಭಾರತಿಯ ಅಮರಪುತ್ರರು' ಎಂಬ ಲೇಖನವನ್ನು ಹತ್ತನೇ ತರಗತಿಯ ಪಠ್ಯದಲ್ಲಿ ಪೂರಕಪಠ್ಯವಾಗಿ ಸೇರಿಸಲಾಗಿದೆ.
"ತಾಯಿ ಭಾರತೀಯ ಅಮರಪುತ್ರರು' ಪಾಠದ ವಿವರ ಇಲ್ಲಿದೆ:
ಅದು 1931ನೇ ಇಸವಿ, ಮಾರ್ಚ್ 23. ಲಾಹೋರಿನ ಸೆರಮನೆಯ ಮುಂದೆ ಸಾವಿರಾರು ಜನ ಸೇರಿದ್ದರು. "ವೆಂದೇ ಮಾತರಂ', "ಭಾರತ್ ಮಾತಕಿ ಜೈ' ಘೋಷಣೆಗಳು ಮುಗಿಲು ಮುಟ್ಟಿದ್ದವು. ಆ ಜನಸಂದಣಿಯಲ್ಲಿ ಎಲ್ಲರಿಗಿಂತಲೂ ಮುಂದೆ ವೃದ್ಧ ತಾಯ್ತಂದೆಯರು ನಿಂತಿದ್ದರು. ಅವರ ಕಂಗಳಲ್ಲಿ ಮುಂದೇನಾಗುವುದೋ ಎಂಬ ಆತಂಕ. ವ್ಯಾಪಾರ ನೆಪದಲ್ಲಿ ಬಂದು ಭಾರತೀಯರನ್ನೇ ತಮ್ಮ ಅಡಿಯಾಳಾಗಿಸಿಕೊಂಡ ಬ್ರಿಟಿಷರು ತಮ್ಮ ಮಕ್ಕಳನ್ನು ನಿರ್ದಯವಾಗಿ ಗಲ್ಲಿಗೇರಿಸುತ್ತಾರಲ್ಲ ಎನ್ನುವ ದುಗುಡ. ಆದರೂ ಕಣ್ಣಲ್ಲಿ ಹನಿ ನೀರಿಲ್ಲ! ಧೀರತನ.
ಹ್ಹ್! ಆ ಎದೆಗಾರಿಕೆ ಬ್ರಿಟಿಷರಿಗೆಬೇಕಲ್ಲ? ಹೊರಗೆ ನೆರೆದ ಜನಸಂದಣಿಯನ್ನು ಕಂಡೇ ನಡುಗಿಹೋಗಿದ್ದರು. ಈ ಜನರೆಲ್ಲಿ ಸೆರೆಮನೆಯ ಗೋಡೆಯನ್ನು ಒಡೆದು ಒಳನುಗ್ಗಿ, ಯುವಕ್ರಾಂತಿಕಾರಿಗಳನ್ನು ಬಿಡಿಸಿ ಕೆರೆೆದೊಯ್ಯುವರೋ ಎಂಬ ಅಂಜಿಕೆ ಅವರಿಗೆ. ಅದಕ್ಕಾಗಿಯೇ ಅವರ ನಿಗದಿತ ದಿನಕ್ಕಿಂದ ಒಂದು ದಿನ ಮೊದಲೇ ತಮ್ಮ ಅಪರಾಧಿಗಳನ್ನು ಗಲ್ಲಿಗೇರಿಸುವ ತಯಾರಿಯಲ್ಲಿದ್ದರು.
ಆ ಅಪರಾಧಿಗಳು ಮಾಡಿದ್ದ ತಪ್ಪಾದರೂ ಏನೆನ್ನುತ್ತೀರಿ? ದೇಶದ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದ್ದು. ಆ ದನಿಯನ್ನು ಬ್ರಿಟಿಷ್ ಸರ್ಕಾರ ಕೇಳಿಸಿಕೊಳ್ಳದೆ ಕಿವುಡರಾಗಿ ಕುಳಿತಿದ್ದಾಗ ಅಸೆಂಬ್ಲಿಯಲ್ಲಿ ಬಾಂಬೆಸೆದು ಸದ್ದು ಸದ್ದು ಮಾಡಿದ್ದರು ಅವರು! ಇಂಗ್ಲೆಂಡಿನಿಂದ ಬಂದು ಈ ದೇಶವನ್ನು ಲೂಟಿಗೈದಿದ್ದಲ್ಲದೇ ಭಾರತೀಯರನ್ನು ತುಚ್ಛವಾಗಿ ಕಾಣುತ್ತ ಶೋಷಣೆಗೆ ದೂಡಿದ್ದ ಬ್ರಿಟಿಷರ ವಿರುದ್ದ ಸೆಟೆದು ನಿಂತಿದ್ದರು ಬಿಸಿರಕ್ತದ ಆ ಯುವಕರು. ಭಿನ್ನ ಭಿನ್ನ ಕ್ರಾಂತಿ ಚಟುವಟಿಕೆಗಳ ಮೂಲಕ ಪರಕೀಯಕನ್ನು ಈ ದೇಶಬಿಟ್ಟು ಓಡಿಸುವ ಯೋಜನೆಗಳನ್ನು ರೂಪಿಸಿದ್ದರು. ಅವರೇ ದೇಶದಲ್ಲಿ ಕ್ರಾಂತಿದೀಪ ಮತ್ತಷ್ಟು ಜಾಜ್ವಲ್ಯಮಾನವಾಗಿ ಬೆಳಗುವಂತೆ ಮಾಡಲು ತಮ್ಮ ರಕ್ತವನ್ನೇ ಬಸಿದ ಭಗತ್ಸಿಂಗ್, ರಾಜಗುರು ಮತ್ತು ಸುಖದೇವರು.
ಈ ಮೂವರು ಯುವ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲು ಬ್ರಿಟಿಷರು ಕೊಟ್ಟ ಕಾರಣ ರಾಜದ್ರೋಹ. ಎಷ್ಟು ವಿಚಿತ್ರ ನೋಡಿ. ಬ್ರಿಟಿಷರು ಭಾರತದ ರಾಜರೇ ಆಗಿರಲಿಲ್ಲ, ಅವರೇ ಬೇರೆ ದೇಶದಿಂದ ಬಂದಿದ್ದವರು. ಭಾರತೀಯರು ತಮ್ಮ ಸ್ವಂತ ನೆಲದ ಮುಕ್ತಿಗಾಗಿ ಹೋರಾಡುವುದನ್ನೇ ಈ ಬಿಳಿಯರು ರಾಜದ್ರೋಹ ಎಂದು ಕರೆದಿದ್ದರು. ಅನೇಕರನ್ನು ಇದೇ ಆಧಾರದ ಮೇಲೆ ನೇಣಿಗೇರಿಸಿದ್ದು, ಗುಂಡು ಹಾಕಿ ಕೊಂದಿದ್ದರಲ್ಲದೇ ನಡು ಬೀದಿಯಲ್ಲಿ ಲಾಠಿಯಿಂದ ಕೊಲ್ಲಲಾಗುತ್ತಿತ್ತು. ಬ್ರಿಟಿಷರು ಈ ಅನ್ಯಾಯ, ದರ್ಪಗಳನ್ನು ಮೆಟ್ಟಿನಿಲ್ಲಲೆಂದೇ ಈ ಸಿಡಿಲಮರಿಗಳು ಬ್ರಿಟಿಷ್ ಅಧಿಕಾರಿ ಸ್ಕಾಟ್ನ ಹತ್ಯೆಯ ಯೋಜನೆ ರೂಪಿಸಿದರು. ಪಂಜಾಬಿನ ಹಿರಿಯ ಸ್ವಾಂತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯರನ್ನು ಲಾಠಿಯಿಂದ ಬಡಿದುಕೊಲ್ಲುವಲ್ಲಿ ಸ್ಕಾಟ್ನ ಪಾತ್ರ ಮಹತ್ವದ್ದಾಗಿತ್ತು. ಲಾಲಾಜಿ ತೀರಿಕೊಳ್ಳುವ ಮುನ್ನ "ನನಗೆ ಹೊಡೆದ ಒಂದೊಂದೂ ಲಾಠಿ ಏಟೂ ಬ್ರಿಟಿಷರ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳು' ಎಂದಿದ್ದರು. ಯೋಜನೆ ಕಾರ್ಯರೂಪಕ್ಕೆ ಬರುವ ಹೊತ್ತಿನಲ್ಲಿ ಸ್ವಲ್ಪ ಎಡವಟ್ಟಾಯ್ತು. ಸ್ಯಾಂಡರ್ಸ್ಗಳನ್ನೇ ಸ್ಕಾಟ್ ಎಂದು ಭಾವಿಸಿ ಕ್ರಾಂತಿಕಾರಿಗಳು ಅವನ ಹತ್ಯೆಯನ್ನು ಮಾಡಿ ಮುಗಿಸಿದ್ದರು. ವಾಸ್ತವವಾಗಿ ಸ್ಕಾಟ್ನ ಆದೇಶದಂತೆ ಲಾಲಾಜಿಯವರಿಗೆ ಲಾಠಿಯಿಂದ ಹೊಡೆಯಿಂದ ಬಡಿದವನು ಇದೇ ಸ್ಯಾಂಡರ್ಸ್. ಆ ದುರಹಂಕಾರಿಯು ಭಾರತೀಯರ ಪ್ರತೀಕಾರದ ಗುಂಡಿಗೆ ಬಲಿಯಾಗಿದ್ದ. ಈ ಒಟ್ಟಾರೆ ಯೋಜನೆಯನ್ನು ರೂಪಿಸಿದವನು ಸುಖದೇವ. ಭಗತ್ ಸಿಂಗ್ನೊಂದಿಗೆ ಗುಂಡು ಹಾರಿಸಿದವ ಮರಾಠ ಕಲಿ ರಾಜಗುರು. ಇವರೆಲ್ಲರಿಗೂ ರಕ್ಷಣೆಯಾಗಿ ನಿಂತಿದ್ದು ಆಜಾದ್ ಎಂದೇ ಖ್ಯಾತರಾದ ಚಂದ್ರಶೇಖರ್ ಆಜಾದ್.
ಭಗತ್ ಸಿಂಗ್ ಇಷ್ಟು ದೊಡ್ಡ ಕ್ರಾಂತಿಕಾರಿಯಾಗಿ ಬೆಳೆಯುವಲ್ಲಿ ಬಾಲ್ಯಜೀವನದ ಪಾತ್ರ ಬಲುದೊಡ್ಡದು. ಪಂಜಾಬಿನ ಜಲಿಯನ್ ವಾಲಾಬಾಗ್ನಲ್ಲಿ ಪರಂಗಿಗಳು ನಡೆಸಿದ ಹತ್ಯಾಕಾಂಡವನ್ನು ನೇರವಾಗಿ ನೋಡಿದ್ದ ಆತ ಸ್ವಾತಂತ್ರ್ಯದ ಕಿಚ್ಚನ್ನು ತನ್ನೊಳಗೆ ಕಾಯ್ದುಕೊಂಡಿದ್ದ. ಮುಂದೆ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳುವಳಿ ಅವನನ್ನು ಬಹುವಾಗಿ ಸೆಳೆದು ಶಾಲೆಯಲ್ಲಿರುವಾಗಲೇ ಆತ ಅವರ ಕಟ್ಟಾ ಅನುಯಾಯಿಯಾಗುವಂತೆ ಮಾಡಿತು. ಆದರೆ ಚೌರಿಚೌರಾದಲ್ಲಿ ನಡೆದ ಹತ್ಯಾಕಾಂಡದ ಘಟನೆಯಿಂದ ತೀವ್ರವಾಗಿ ನೊಂದ ಗಾಂಧೀಜಿ ಚಳುವಳಿಗಳನ್ನು ಹಿಂಪಡೆದರು. ಶಾಲೆಬಿಟ್ಟು ಈ ಚಳುವಳಿಗೆ ಧುಮುಕಿದ್ದ ಭಗತ್ ಸಿಂಗ್ಗೆ ನಿರಾಸೆಯಾಯ್ತು. ಮಹಾತ್ಮ ಗಾಂಧೀಜಿಯವರ ಶಾಂತಿ ಮಾರ್ಗದಿಂದ ಆತ ದೂರ ಸರಿದ. ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ ಓದು ಮುಂದುವೆರೆಸಿದ.
ಕಾಲೇಜಿನ ದಿನಗಳಲ್ಲಿ ಸುಖದೇವ ಜೊತೆಗೂಡಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದ. ಕ್ರಮೇಣ ಕ್ರಾಂತಿಕಾರಿಗಳ ಸಂಪರ್ಕ ಸಾಧಿಸಿದ. ಎಲ್ಲರಿಂದಲೂ ಪಂಡಿತ್ ಜೀ ಎಂದು ಗೌರವಿಸಲ್ಪಡುತ್ತಿದ್ದ ಚಂದ್ರಶೇಖರ್ ಆಜಾದರ ಸಹವಾಸಕ್ಕೆ ಬಂದ ಮೇಲಂತೂ ಅವನ ಕ್ರಾಂತಿಕಾರಿ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡವು. ಈ ಹೊತ್ತಿನಲ್ಲೇ ಕಾಕೋರಿಕಾಂಡ ನಡೆದು ಕ್ರಾಂತಿಕಾರಿಗಳ ಗುಂಪು ಚದುರಿಹೋಯ್ತು. ಆದರೆ ಭಗತ್ ಸಿಂಗ್ ಕೈ ಚೆಲ್ಲಲಿಲ್ಲ. ಆಜಾದರೊಡಗೂಡಿ ಕ್ರಾಂತಿಕಾರಿಗಳನ್ನು ಮತ್ತೆ ಸಂಘಟಿಸಿದ. ಅಲ್ಲಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕ್ರಾಂತಿಕಾರಿಗಳನ್ನೆಲ್ಲಾ ಒಂದೇ ಸಂಘಟಿನೆಯಡಿ ತರುವ ಪ್ರಯತ್ನ ಮಾಡಿದ. ಈ ಹೊತ್ತಿನಲ್ಲಿಯೇ ಆತ ಬಟುಕೇಶ್ವರ ದತ್ತನೊಂದಿಗೆ ಸೇರಿ ಅಸೆಂಬ್ಲಿಯಲ್ಲಿ ಬಾಂಬೆಸೆದು ಬ್ರಿಟಿಷರನ್ನೇ ನಡುಗಿಸಿಬಿಟ್ಟ. ತಾನೇ ಬ್ರಿಟಿಷರಿಗೆ ಶರಣಾಗಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಕ್ರಾಂತಿಕಾರಿಗಳ ಹೋರಾಟದ ಮಾರ್ಗವನ್ನು ಪೂರ್ತಿಯಾಗಿ ವಿವರಿಸಿದ.
ಆತ ಪ್ರತಿಪಾದಿಸಿದ "ಪೂರ್ಣ ಸ್ವರಾಜ್ಯ' ಚಿಂತನೆಯು ಕಾಂಗ್ರೆಸ್ಸಿನ ತರುಣರನ್ನು ಸೆಳೆಯಿತು. ಆವರೆಗೂ ಡೊಮಿನಿಯನ್ ಸ್ಟೇಟಸ್ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್, ತಾನೂ ಪೂರ್ಣ ಸ್ವರಾಜ್ಯದ ಬಗ್ಗೆ ಬಗ್ಗೆ ಘೋಷಣೆ ನೀಡಲಾರಂಭಿಸಿತು. ಮುಂದೆ ಜೈಲಿನಲ್ಲಿ ಕೂಡ ಭಗತ್ ಸಿಂಗ್ ಸ್ವಾಭಿಮಾನ, ಸ್ವಾತಂತ್ರ್ಯ ಪ್ರಿಯತೆಯನ್ನು ಮೆರೆದ. ಬ್ರಿಟಿಷರ ಕುನೀತಿಗಳ ವಿರುದ್ಧ ಅನೇಕ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ದೇಶಬಾಂಧವರಿಗೆ ಕ್ರಾಂತಿಕಾರಿಗಳ ಬಗ್ಗೆ ಇದ್ದ ತುಪ್ಪು ತಿಳುವಳಿಕೆಯನ್ನು ಹೋಗಲಾಡಿಸಿದ.
ಭಗತ್ಸಿಂಗ್, ರಾಜಗುರು, ಸುಖದೇವರೆಲ್ಲ ಬ್ರಿಟಿಷರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತೆ? ಜಯಗೋಪಾಲ ಎಂಬ ದ್ರೋಹಿಯ ಕಾರಣದಿಂದ. ಈ ಬಗೆ ದ್ರೋಹಿಗಳೇನು ಕಡಿಮೆಯೆ ಇತಿಹಾಸದಲ್ಲಿ? ಸಿರಾಜುದ್ದೌಲನನ್ನು ನಂಬಿಸಿ ಕೇಡು ಮೀರ್ ಜಾಫರನಿಂದ ಹಿಡಿದು, ಚಾಪೇಕರ್ ಸಹೋದರರ ನೇಣಿಗೆ ಕಾರಣನಾದ ಗಣೇಶ್ ಶಂಕರ್ ದ್ರವಿಡನವರೆಗೂ ಯಾವತ್ತಿಗೂ ಇದ್ದರು ಇಂಥವರು. ಅಲೆಕ್ಸಾಂಡರನು ಭಾರತಕ್ಕೆ ಬಂದ ಕಾಲದಲ್ಲೇ ಪುರೂರವನಿಗೆ ದ್ರೋಹ ಬಗೆದ ಅಂಬಿಯೇ ಇರಲಿಲ್ಲವೆ? ನಮ್ಮ ಚನ್ನಮ್ಮ ಕೂಡ ಸೆರೆಸಿಕ್ಕಿದ್ದು ದ್ರೋಹಿಗಳ ಕಾರಣದಿಂದಲೇ. ಇಲ್ಲವಾದಲ್ಲಿ ನಮ್ಮ ಹೆಮ್ಮೆಯ ನಾಡಿನ ಕದನ ಕಲಿಗಳನ್ನು ಬಂದೂಕಿನ ತುದಿಯಿಂದ ಹೆದರಿಸಿ ಸೆರೆಹಿಡಿಯುವಷ್ಟು ತಾಕತ್ತು ಪರದೇಶೀಯರಿಗೆಲ್ಲಿಂದ ಬರಬೇಕು!
ಅಂತೂ ನಮ್ಮ ಕ್ರಾಂತಿರತ್ನಗಳು ನಗುನಗುತ್ತ ಕುಣಿಕೆಯನ್ನು ಚುಂಬಿಸಿ ಭಾರತಮಾತೆಗೆ ಜೈಕಾರ ನೀಡುತ್ತಾ ಆತ್ಮಾಹುತಿಗೆ ಅಣಿಯಾದರು. ಸ್ವತಃ ಜೈಲರ್ ಕೂಡ ಇವರ ಕೆಚ್ಚು ಕಂಡು ಭಾವುಕನಾದ. ಮಾರ್ಚ್ 23ರ ಆ ದಿನ ಭಗತ್, ರಾಜಗುರು, ಸುಖದೇವರು ತಾಯಿ ಭಾರತಿಗಾಗಿ ತಮ್ಮ ಜೀವನವನ್ನೇ ಧಾರೆ ಎರೆದರು. ಹೀಗೆ ದೇಶಕ್ಕಾಗಿ ಪ್ರಣಾರ್ಪಣೆಗೈದಾಗ ಭಗತ್ ಸಿಂಗ್ ವಯಸ್ಸು 24 ಮಾತ್ರ! ಚಂದ್ರಶೇಖರ್ ಆಜಾದ್ ಜೈಲಿನಿಂದ ತಪ್ಪಿಸಿಕೊಳ್ಳುವ ಮಾರ್ಗದ ಕುರಿತು ಸೂಚಿಸಿದಾಗ "ನೇಣಿಗೇರುವುದರಿಂದ ಹೆಚ್ಚು ಪ್ರೇರಣೆ ನೀಡುವುದು ಸಾಧ್ಯ' ಎಂದು ಭಗತ್ ದೃಢವಾಗಿ ನುಡಿದಿದ್ದ. ಆತ ಹೇಳಿದಂತೆ ಲಕ್ಷ-ಲಕ್ಷ ಭಾರತೀಯರು ದೇಶಕ್ಕಾಗಿ ಪ್ರಣಾರ್ಪಣೆಗೈಯ್ಯುವ ಪಾಠವನ್ನು ಈ ನಗುಮೊಗದ ತರುಣರಿಂದ ಕಲಿತುಕೊಂಡರು. ಸ್ವಾರ್ಥದ ಅಂಗು ತೊರೆದು ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ಮುಂದಡಿಯಿಟ್ಟರು.
ಯುವಕರಲ್ಲಿ ಮೂಡಿದ ಈ ಪ್ರಾಣಾರ್ಪಣೆಯ ಕಿಚ್ಚು ಮುಂದೆ ದೇಶದ ಕ್ರಾಂತಿ ಸಂಘಟನೆಯಲ್ಲಿ ಬಲುದೊಡ್ಡ ಶಕ್ತಿತುಂಬಿತು. ಭಗತ್ ಸಿಂಗ್ ಬಲಿದಾನವನ್ನು ಸುಭಾಷ್ ಚಂದ್ರ ಬೋಸರು ತಮ್ಮ ಸೇನೆಯ ಪ್ರೇರಣೆಗೆಂದು ಬಳಸಿಕೊಳ್ಳುತ್ತಿದ್ದರು. ಒಂದೆಡೆ ಮಹಾತ್ಮ ಗಾಂಧೀಜಿಯವರ ಅಹಿಂಸಾ ಚಳುವಳಿ ನಡೆಯುತ್ತಿದ್ದರೆ, ಅದಕ್ಕೆ ಪೂರಕವಾಗಿ ನಡೆದ ಈ ಕ್ರಾಂತಿ ಚಳವಳಿ ಬ್ರಿಟಿಷರನ್ನು ಹೆದರಿಸಿಬಿಟ್ಟಿತ್ತು. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯದ್ದೇೇ ಮತ್ತೊಂದು ಹೋರಾಟ ನಡೆದರೆ ತಾವು ಉಳಿಯುವುದು ಕಷ್ಟ ಎಂದು ಅವರಿಗೆ ಭಾಸವಾಗಿತ್ತು. ಕೊನೆಗೂ ನಮಗೆ ಸ್ವಾತಂತ್ರ್ಯ ದಕ್ಕಿತು.
ಆದರೆ ಭಗತ್ ಸಿಂಗ್ಗೆ ಸ್ವಾತಂತ್ರ್ಯ ಪ್ರಾಪ್ತಿಯೊಂದೇ ಮುಖ್ಯವಾಗಿರಲಿಲ್ಲ. ಸ್ವಾತಂತ್ರ್ಯ ನಂತರದ ಭಾರತ ಹೇಗಿರಬೇಕೆನ್ನುವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಗಳಿದ್ದವು. ಆತನ ಧ್ಯೇಯವನ್ನು ಕಾಯ್ದುಕೊಳ್ಳಲು ನಮ್ಮ ಯುವ ಪೀಳಿಗೆ ಮನಸ್ಸು ಮಾಡುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ. ದೇಶಕ್ಕಾಗಿ ನಗುನಗುತ್ತಲೇ ನೇಣಿಗೇರಿದ ಮಹಾತ್ಮರ ಹೆಸರಿನಲ್ಲಿ ಅವರ ಹೋರಾಟವನ್ನು ಸಾರ್ಥಕಗೊಳಿಸುವ, ದೇಶದ ಸ್ವಾಭಿಮಾನ- ಸ್ವಾವಲಂಬನಗಳನ್ನು ಕಾಯ್ದಿಡುವ ದೀಕ್ಷೆ ತೊಡೋಣ. ಭರತಮಾತೆ ಪದತಲಗಳಲ್ಲಿ ಅರ್ಪಣೆಯಾದ ಈ ಮೂರು ಅಮರಪುಷ್ಪಗಳ ನೆನಪನ್ನು ಹೃದಯದಲ್ಲಿ ಹಸಿರಾಗಿಟ್ಟಿರೋಣ, ಇಂಕ್ವಿಲಾಬ್ ಜಿಂದಾಬಾದ್!
Recommended Video