ಕಾಂಗ್ರೆಸ್ ತೊರೆಯುವ ಬಗ್ಗೆ ಉಮೇಶ್ ಜಾಧವ್ ಹೇಳಿದ್ದೇನು?
ಚಿಂಚೋಳಿ, ಜನವರಿ 24: ಕಾಂಗ್ರೆಸ್ನಲ್ಲಿ ಯಾರೂ ದೊಡ್ಡವರಿಲ್ಲ ಹೀಗಾಗಿ ಪಕ್ಷ ಬಿಡುವ ಬಗ್ಗೆ ಜನರನ್ನು ಕೇಳಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಚಿಂಚೋಳಿಯ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.
ತಮ್ಮ ತಂದೆಯವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಸ್ವಗ್ರಾಮ ಪೆಡಸೂರಿಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಎಲ್ಲಿಯೂ ಹೋಗಿರಲಿಲ್ಲ. ಧರ್ಮದರ್ಶಿಗಳೊಂದಿಗೇ ಇದ್ದೆ. ಕಾಂಗ್ರೆಸ್ ಬಿಡುವ ಕುರಿತೂ ಈಗಲೇ ಏನು ಹೇಳುವುದಿಲ್ಲ ಜನರನ್ನು ಕೇಳಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಬಿಜೆಪಿಗೆ?
ನಾನು ಮೂಲತಃ ಕಾಂಗ್ರೆಸಿಗ, ಇವತ್ತಿಗೂ ಕಾಂಗ್ರೆಸ್ ಬಿಟ್ಟಿಲ್ಲ. ನಾನು ಮುಂಬೈ ರೆಸಾರ್ಟ್ನಲ್ಲಿರಲಿಲ್ಲ. ಧರ್ಮದರ್ಶಿಗಳ ಜತೆ ಇದ್ದೆ ಬಿಜೆಪಿಗೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ. ಕ್ಷೇತ್ರದಲ್ಲಿ ಕೆಲಸಗಳಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ. ಕಾಂಗ್ರೆಸ್ನಲ್ಲಿ ಅಧಿಕಾರ ವಿಕೇಂದ್ರೀಕರಣವಾಗಬೇಕಿದೆ ಎಂದು ಅವರು ತಿಳಿಸಿದರು.
ಸ್ವಕ್ಷೇತ್ರಕ್ಕೆ ಮರಳಿದ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ
ನಾನು ಪಕ್ಷ ತೊರೆಯದಿದ್ದರೂ ಕಾಂಗ್ರೆಸ್ ಪಕ್ಷದ ಹಲವಾರು ಸಭೆಗಳಲ್ಲಿನ ಬ್ಯಾನರ್ಗಳಲ್ಲಿ ನನ್ನ ಭಾವಚಿತ್ರ ತೆಗೆದಿದ್ದಾರೆ. ಪಕ್ಷದಲ್ಲಿದ್ದಾಗಲೂ ಪ್ರತಿಭಟನೆ ನಡೆಸಿ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗಿದೆ. ನಾನೆಂದೂ ಪಕ್ಷದ ವಿರುದ್ಧ ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.