ಸಂಕ್ರಾಂತಿ ಪುಣ್ಯಸ್ನಾನದ ವೇಳೆ ನದಿಯಲ್ಲೇ ಹೃದಯಾಘಾತ, ಸ್ವಾಮೀಜಿ ಲಿಂಗೈಕ್ಯ
ಕಲಬುರಗಿ, ಜ 15: ಮಕರ ಸಂಕ್ರಾಂತಿ ಪುಣ್ಯಕಾಲದ ಹಿನ್ನಲೆಯಲ್ಲಿ ಭೀಮಾ - ಕಾಗಿಣಾ ನದಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದ ವೇಳೆಯೇ ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ತೀವ್ರ ಹೃದಯಾಘಾತಕ್ಕೆ ಒಳಗಾಗಿ, ನಂತರ ಆಸ್ಪತ್ರೆಗೆ ಸಾಗಿಸುವ ವೇಳೆ ಲಿಂಗೈಕ್ಯರಾದ ಘಟನೆ ವರದಿಯಾಗಿದೆ.
ಕಮಲಾಪುರ ತಾಲೂಕಿನ ಮಹಾಗಾಂವ ಕಳ್ಳಿಮಠದ ಶ್ರೀಗಳಾದ ಗುರುಲಿಂಗ ಶಿವಾಚಾರ್ಯರು, ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದ ನದಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿದೆ.
ಶ್ರೀಗಳು ಅಸಂಖ್ಯಾತ ಭಕ್ತ ಸಮುದಾಯವನ್ನು ಅಗಲಿದ್ದಾರೆ. ಸ್ವಾಮೀಜಿಯವರ ಶಿಷ್ಯರು ಸ್ಥಳೀಯರ ನೆರವಿನಿಂದ ನದಿಯಿಂದ ಹೊರಗೆ ಕರೆತರುವಷ್ಟರಲ್ಲಿ ಶ್ರೀಗಳು ಇಹಲೋಕ ತ್ಯಜಿಸಿದ್ದರು ಎಂದು ಭಕ್ತ ಮೂಲಗಳಿಂದ ತಿಳಿದು ಬಂದಿದೆ.

ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ, ಕೋವಿಡ್ ಸಂದರ್ಭದಲ್ಲಿ ಬೆಳೆಯಲ್ಲಿ ಎತ್ತುಗಳೊಂದಿಗೆ ಎತ್ತುಗಳನ್ನು ಹೊಡೆಯುತ್ತಾ, ಕೃಷಿ ಬದುಕು, ಸ್ವಾವಲಂಬಿ ಜೀವನದ ಬಗ್ಗೆ ಪಾಠವನ್ನು ಗುರುಲಿಂಗ ಶಿವಾಚಾರ್ಯರು ಮಾಡುತ್ತಿದ್ದರು.
ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾಗಬಹುದು, ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗುವುದಿಲ್ಲ ಎಂದು ಭಕ್ತರಿಗೆ ಉಪದೇಶ ಮಾಡುತ್ತಿದ್ದ ಶ್ರೀಗಳು, ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಪಾಠವನ್ನು ಮಾಡುತ್ತಿದ್ದರು. ಶ್ರೀಗಳ ನಿಧನಕ್ಕೆ ಹಲವು ಸ್ವಾಮೀಜಿಗಳು ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ.












Click it and Unblock the Notifications