ಕಲಬುರಗಿ: ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಕಲಬುರಗಿ, ಸೆಪ್ಟೆಂಬರ್ 18: ಕಲಬುರಗಿ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಬಳಿ ಪ್ರವಾಹದಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಸಿದ್ದರಾಮ ಆವುಂಟೆ ಅವರ ಶವವನ್ನು ಇಂದು ಬೆಳಿಗ್ಗೆ ಪತ್ತೆ ಮಾಡಲಾಯಿತು.
ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಜೆಸ್ಕಾಂ ಎಇಇ ಆಗಿದ್ದ ಸಿದ್ದರಾಮ ಆವುಂಟೆ, ಕಳೆದ ರಾತ್ರಿ ಸ್ನೇಹಿತ ರಾಜು ಜೊತೆ ಕಾರಿನಲ್ಲಿ ಯಳಸಂಗಿ ಗ್ರಾಮಕ್ಕೆ ತೆರಳುತ್ತಿದ್ದರು. ಭಾರಿ ಮಳೆಯಾಗಿದ್ದರಿಂದ ಹಳ್ಳ ತುಂಬಿ ಹರಿಯುತ್ತಿತ್ತು. ಈ ವೇಳೆ ಹಳ್ಳದಲ್ಲಿ ಕಾರು ಕೊಚ್ಚಿಹೋಗಿದ್ದು, ಇಬ್ಬರು ಕಾರಿನಿಂದ ನೀರಿಗೆ ಜಿಗಿದಿದ್ದಾರೆ.

ಪ್ರಾಣದ ಹಂಗು ತೊರೆದು ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ರಾಜುನನ್ನು ರಕ್ಷಣೆ ನಿಂಬರ್ಗಾ ಠಾಣೆ ಪೊಲೀಸರು ಮಾಡಿದ್ದಾರೆ. ಈ ವೇಳೆ ಸಿದ್ದರಾಮ ಹರಿಯುತ್ತಿರುವ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು.
ತಡರಾತ್ರಿವರೆಗೂ ಅಗ್ನಿಶಾಮಕ ದಳ ಹಾಗೂ ನಿಂಬರ್ಗಾ ಪೊಲೀಸರು ಹುಡುಕಾಟ ನಡೆಸಿದ್ದರೂ ಸಿದ್ದರಾಮ ಆವುಂಟೆ ಪತ್ತೆಯಾಗಿರಲಿಲ್ಲ. ತೀವ್ರ ಹುಡುಕಾಟದ ನಂತರ ಇಂದು ಬೆಳಗ್ಗೆ ಸಿದ್ದರಾಮ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.












Click it and Unblock the Notifications