ರಾಜಸ್ಥಾನದಲ್ಲಿ ತಾಲಿಬಾನ್ ಶೈಲಿಯಲ್ಲಿ ಹತ್ಯೆ: ಭಯೋತ್ಪಾದನೆ ಪ್ರಕರಣವಾಗಿ ಪರಿಗಣಿಸಿದ ಕೇಂದ್ರ ಸರಕಾರ
ಜೈಪುರ್, ಜೂನ್ 29: ರಾಜಸ್ಥಾನದ ಉದಯಪುರ್ನಲ್ಲಿ ಸಂಭವಿಸಿದ ಪೈಶಾಚಿಕ ಹತ್ಯೆ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸುವಂತಿದೆ. ಸಾಮಾಜಿಕ ಜಾಲತಾಣದಲ್ಲಿ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದ ದರ್ಜಿ ಕನ್ಹಯ್ಯ ಲಾಲ್ ಎಂಬುವರನ್ನು ಇಬ್ಬರು ವ್ಯಕ್ತಿಗಳು ಭೀಕರವಾಗಿ ಕೊಂದುಹಾಕಿದ್ದಾರೆ. ಈ ಘಟನೆಯನ್ನು ಕೇಂದ್ರ ಸರಕಾರ ಭಯೋತ್ಪಾದನಾ ಘಟನೆ ಎಂಬಂತೆ ಪರಿಗಣಿಸಿ ತನಿಖೆ ನಡೆಸಲು ಮುಂದಾಗಿದೆ.
ಕನ್ಹಯ್ಯ ಲಾಲ್ ಅವರನ್ನು ಕೊಂದ ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತಾರಿ ಅವರಿಬ್ಬರನ್ನೂ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಘಟನೆಯ ತನಿಖೆ ನಡೆಸಲು ರಾಜ್ಯ ಸರಕಾರ ಕೂಡ ವಿಶೇಷ ತಂಡವೊಂದನ್ನು ರಚಿಸಿದೆ.
ಕೇಂದ್ರ ಸರಕಾರ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ತಂಡವೊಂದನ್ನು ಉದಯಪುರಕ್ಕೆ ಕಳುಹಿಸಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಐಸಿಸ್ ಮಾದರಿಯಲ್ಲಿ ತಲೆ ಕತ್ತರಿಸಿ ಹತ್ಯೆಗೈಯ್ಯಲು ಹಂತಕರು ಪ್ರಯತ್ನಿಸಿದ್ದಾರೆ. ವಿಡಿಯೋ ಕೂಡ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ಹಂತಕರು ಐಸಿಸ್ ಜೊತೆ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದೆ.
ಉದಯ್ಪುರ ಪ್ರಕರಣ: ಗೆಹ್ಲೋಟ್ ಸರ್ಕಾರದ ವಿರುದ್ಧ ವಸುಂಧರಾ ರಾಜೆ ವಾಗ್ದಾಳಿ
ಉದಯಪುರದಲ್ಲಿ ಯಾವುದೇ ಗಲಭೆಯಾಗದಂತೆ ತಡೆಯಲು ಬಿಗಿ ಭದ್ರತೆ ವಹಿಸಲಾಗಿದೆ. ಹೆಚ್ಚುವರಿ ಭದ್ರತೆಯಾಗಿ ೬೦೦ ಪಡೆಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
ತಾಲಿಬಾನಿ ಮನಸ್ಥಿತಿಗೆ ಬಿಡಲ್ಲ
ಉದಯಪುರದ ಟೈಲರ್ನನ್ನು ಹತ್ಯೆಗೈದ ಘಟನೆಯನ್ನು ಎಲ್ಲರೂ ಖಂಡಿಸಿದ್ಧಾರೆ. ಅಜ್ಮೇರ್ ದರ್ಗಾದ ದೀವಾನ್ ಜೈನುಲ್ ಅಬೇದಿನ್ ಅಲಿ ಖಾನ್ ಕೂಡ ಬಲವಾಗಿ ಖಂಡಿಸಿದ್ದು, ದೇಶದಲ್ಲಿ ತಾಲಿಬಾನೀ ಮನಸ್ಥಿತಿ ಬೆಳೆಯಲು ಮುಸ್ಲಿಮರು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.
"ಯಾವ ಧರ್ಮವೂ ಮನುಕುಲದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ಕೊಡುವುದಿಲ್ಲ. ಅದರಲ್ಲೂ ಇಸ್ಲಾಮ್ ಧರ್ಮದಲ್ಲಿ ಇರುವ ಎಲ್ಲಾ ಬೋಧನೆಗಳೂ ಶಾಂತಿ ಮಾರ್ಗವನ್ನು ಸೂಚಿಸುತ್ತವೆ" ಎಂದು ಜೈನುಲ್ ಅಬೇದಿನ್ ಅಲಿ ಖಾನ್ ತಿಳಿಸಿದ್ದಾರೆ.
ಉದಯಪುರ ಕೊಲೆ ಪ್ರಕರಣ: ಇಂಟರ್ ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ ಮಾಡಿದ ಸರ್ಕಾರ
ಜಮಾಯತ್ ಉಲಾಮಾ-ಇ-ಹಿಂದ್ ಖಂಡನೆ
ಉದಯಪುರ ಘಟನೆಯನ್ನು ಖಂಡಿಸಿರುವ ಜಮಾಯತ್ ಉಲಾಮ-ಇ-ಹಿಂದ್, ಈ ಕೃತ್ಯವು ಇಸ್ಲಾಮ್ಗೆ ವಿರುದ್ಧವಾಗಿದೆ, ಈ ನೆಲದ ಕಾನೂನಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
"ಈ ಘಟನೆ ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ನಮ್ಮ ಧರ್ಮ ಮತ್ತು ನಮ್ಮ ನೆಲದ ಕಾನೂನಿಗೆ ಇದು ವಿರುದ್ಧವಾಗಿದೆ. ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಹೊಂದಿಲ್ಲ. ದೇಶದ ಎಲ್ಲಾ ಜನರೂ ತಮ್ಮ ಭಾವನೆಯನ್ನು ನಿಯಂತ್ರಿಸಿ ಶಾಂತಿ ಪಾಲಿಸಬೇಕೆಂದು ಮನವಿ ಮಾಡುತ್ತೇನೆ" ಎಂದು ಜಮಾಯತ್ ಉಲಾಮ-ಇ-ಹಿಂದ್ನ ಪ್ರಧಾನ ಕಾರ್ಯದರ್ಶಿ ಮೌಲಾನ ಹಕೀಮುದ್ದೀನ್ ಖಸ್ಮಿ ಹೇಳಿಕೆ ನೀಡಿದ್ದಾರೆ.
ಘಟನೆ ನಡೆದದ್ದೇನು?
ಉದಯಪುರದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ನೂಪುರ್ ಸರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಹಲವು ಪೋಸ್ಟ್ಗಳನ್ನು ಹಾಕಿದ್ದರು. ಇದೇ ಕಾರಣಕ್ಕೆ ಹಿಂದೊಮ್ಮೆ ಅವರನ್ನು ಪೊಲೀಸರು ಬಂಧಿಸಿಯೂ ಇದ್ದರು. ಆದರೆ, ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತಾರಿ ಇಬ್ಬರೂ ಗ್ರಾಹಕರ ಸೋಗಿನಲ್ಲಿ ದರ್ಜಿಯ ಅಂಗಡಿಗೆ ಹೋಗುತ್ತಾರೆ.
ಕನ್ಹಯ್ಯ ಲಾಲ್ ಇವರ ಬಟ್ಟೆ ಹೊಲಿಯಲು ಮೈ ಅಳತೆ ತೆಗೆದುಕೊಳ್ಳುವಾಗ ಹಂತಕರು ಕತ್ತು ಸೀಳಿ ಸಾಯಿಸುತ್ತಾರೆ. ನಂತರ ಕನ್ಹಯ್ಯನ ಕತ್ತು ಕತ್ತರಿಸುವ ಪ್ರಯತ್ನನ್ನೂ ಮಾಡುತ್ತಾರೆ. ಈ ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ ಇವರು ಅದನ್ನು ಇಂಟರ್ನೆಟ್ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಕತ್ತು ಸೀಳಿದ ಚಾಕುವನ್ನು ವಿಡಿಯೋದಲ್ಲಿ ತೋರಿಸುತ್ತಾ ಪ್ರಧಾನಿ ನರೇಂದ್ರ ಮೋದಿಗೂ ಬೆದರಿಕೆ ಹಾಕಿದ್ದಾರೆ.
ಸದ್ಯ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡ ರಚನೆಯಾಗಿ ತನಿಖೆ ನಡೆಸುತ್ತಿದೆ. ಕೇಂದ್ರದಿಂದ ಎನ್ಐಎ ಕೂಡ ಅಖಾಡಕ್ಕೆ ಇಳಿದಿದ್ದು ಇದನ್ನು ಭಯೋತ್ಪಾದಕಾ ಕೃತ್ಯದ ಪ್ರಕರಣವೆಂದು ಪರಿಗಣಿಸಿ ತನಿಖೆ ಮಾಡಲಿದೆ. ಈ ಎನ್ಐಎ ತಂಡದಲ್ಲಿ ಒಬ್ಬ ಡಿಐಜಿ ಮಟ್ಟದ ಅಧಿಕಾರಿಯೂ ಇದ್ದಾರೆನ್ನಲಾಗಿದೆ.
ಬಿಗಿ ಭದ್ರತೆ
ಕನ್ಹಯ್ಯ ಲಾಲ್ ಹತ್ಯೆ ಘಟನೆ ಬಳಿಕ ಉದಯಪುರದಲ್ಲಿ ಸೂಕ್ಷ್ಮ ವಾತಾವರಣ ನೆಲಸಿದೆ. ನಿನ್ನೆ ಮಂಗಳವಾರ ಮುನ್ನೆಚ್ಚರಿಕೆಯಾಗಿ ಇಡೀ ಜಿಲ್ಲೆಯಲ್ಲಿ ಸೆಕ್ಷನ್ 144 ಹಾಕಲಾಗಿತ್ತು. ವಾಟ್ಸಾಪ್ ಇತ್ಯಾದಿ ಮೂಲಕ ಪ್ರಚೋದನಕಾರಿ ಸಂದೇಶಗಳು ಹರಿದಾಡುವ ಸಾಧ್ಯತೆಯನ್ನು ತಪ್ಪಿಸಲು ಇಡೀ ರಾಜಸ್ಥಾನ ರಾಜ್ಯದಲ್ಲಿ ಮಂಗಳವಾರ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು.
ಕೋಮುಗಲಭೆ ಸಾಧ್ಯತೆ ಇರುವುದರಿಂದ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ರಜೆ ಹೋದ ಪೊಲೀಸರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಯಾರೇ ಹಿಂಸಾಚಾರಕ್ಕೆ ಮುಂದಾದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಜ್ಮೇರ್ನ ಎಸ್ಪಿ ವಿಕಾಸ್ ಶರ್ಮಾ ಹೇಳಿದ್ಧಾರೆ.
(ಒನ್ಇಂಡಿಯಾ ಸುದ್ದಿ)