Breaking: ರಾಜ್ಯಸಭೆ ಚುನಾವಣೆ ಫಲಿತಾಂಶ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಾಲಾದ 3 ಸ್ಥಾನಗಳು
ಜೈಪುರ, ಜೂನ್ 10: ರಾಜಸ್ಥಾನದಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ರಾಜಸ್ಥಾನದಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದರು.
राजस्थान में तीन राज्यसभा सीटों पर कांग्रेस की विजय लोकतंत्र की जीत है। मैं तीनों नवनिर्वाचित सांसदों श्री प्रमोद तिवारी, श्री मुकुल वासनिक एवं श्री रणदीप सुरजेवाला को बधाई देता हूं। मुझे पूर्ण विश्वास है कि तीनों सांसद दिल्ली में राजस्थान के हक की मजबूती से पैरवी कर सकेंगे।
— Ashok Gehlot (@ashokgehlot51) June 10, 2022
ರಾಜ್ಯಸಭೆ ಚುನಾವಣೆಗಾಗಿ ಜೂನ್ 10ರಂದು ಬೆಳಗ್ಗೆ ಮತದಾನ ನಡೆದು ಸಂಜೆ ವೇಳೆಗೆ ಮತ ಎಣಿಕೆ, ಫಲಿತಾಂಶ ಪ್ರಕಟವಾಗಿದೆ. 15 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ, ಈ ಪೈಕಿ11 ರಾಜ್ಯಗಳ ಒಟ್ಟು 41 ರಾಜ್ಯಸಭೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಗಳಿಸಬೇಕಾದರೆ ಪವಾಡ ಸಂಭವಿಸಬೇಕಾಗುತ್ತದೆ.

ಉದ್ಯಮಿ ಸುಭಾಷ್ ಚಂದ್ರರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಬೆಂಬಲ ನೀಡಿರುವ ಬಿಜೆಪಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿಕಾರಿದ್ದರು. ಬಹುಮತ ಗಳಿಸುವ ಸಾಧ್ಯತೆ ಕಡಿಮೆ ಇದ್ದರೂ ಪ್ರಾಶಸ್ತ್ಯ ಮತಗಳನ್ನು ಒಡೆಯಲು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಗೆಹ್ಲೋಟ್ ಹೇಳಿದ್ದರು.
ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, 26 ಅಧಿಕ ಮತ ಮೌಲ್ಯದೊಂದಿಗೆ ಎರಡು ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ಮೂರನೇ ಸ್ಥಾನ ಗೆಲ್ಲಲು ಇನ್ನೂ 15 ಸ್ಥಾನ ಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದಿಂದ ರಣದೀಪ್ ಸುರ್ಜೇವಾಲ, ಮುಕುಲ್ ವಾಸ್ನಿಕ್ ಹಾಗೂ ಪ್ರಮೋದ್ ತಿವಾರಿಗೆ 126 ಶಾಸಕರ ಬಲ ಸಿಕ್ಕಿದೆ. ಬಿಜೆಪಿ 71 ಶಾಸಕ ಬಲ ಹೊಂದಿದ್ದು, ಒಂದು ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದ್ದು, 30 ಹೆಚ್ಚುವರಿ ಮತ ಮೌಲ್ಯ ಹೊಂದಿದೆ
ವಿಜೇತರು: ಕಾಂಗ್ರೆಸ್ ಪಕ್ಷದ ರಣದೀಪ್ ಸುರ್ಜೇವಾಲ, ಮುಕುಲ್ ವಾಸ್ನಿಕ್, ಪ್ರಮೋದ್ ತಿವಾರಿ, ಬಿಜೆಪಿಯ ಘನಶ್ಯಾಮ್ ತಿವಾರಿ. ಬಿಜೆಪಿ ಬೆಂಬಲಿತ ಉದ್ಯಮಿ ಸುಭಾಷ್ ಚಂದ್ರಗೆ ಸೋಲು.
ಕಳೆದ ಜೂನ್ ಮತ್ತು ಆಗಸ್ಟ್ ನಡುವೆ ವಿವಿಧ ದಿನಾಂಕಗಳಲ್ಲಿ ಸದಸ್ಯರ ನಿವೃತ್ತಿಯಿಂದಾಗಿ ಖಾಲಿಯಾಗುವ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ನಾಯಕ ಅಂಬಿಕಾ ಸೋನಿ, ಜೈರಾಮ್ ರಮೇಶ್ ಮತ್ತು ಕಪಿಲ್ ಸಿಬಲ್ ಮತ್ತು ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ ನಿವೃತ್ತಿ ಆಗಲಿದ್ದಾರೆ.
ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಆರು ಸದಸ್ಯರು ನಿವೃತ್ತಿ ಹೊಂದಲಿದ್ದಾರೆ. ಬಿಹಾರದಿಂದ ಐದು ಮತ್ತು ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಿಂದ ತಲಾ ನಾಲ್ವರು ಸದಸ್ಯರು ರಾಜ್ಯಸಭೆಯಿಂದ ನಿವೃತ್ತಿ ಆಗುತ್ತಿದ್ದಾರೆ. ಅದೇ ರೀತಿ ಮಧ್ಯಪ್ರದೇಶ ಮತ್ತು ಒಡಿಶಾದಿಂದ ತಲಾ ಮೂವರು, ತೆಲಂಗಾಣ, ಛತ್ತೀಸ್ಗಢ, ಪಂಜಾಬ್ ಜಾರ್ಖಂಡ್ ಮತ್ತು ಹರ್ಯಾಣದಿಂದ ತಲಾ ಇಬ್ಬರು ಮತ್ತು ಉತ್ತರಾಖಂಡದಿಂದ ಒಬ್ಬ ಸದಸ್ಯರು ನಿವೃತ್ತರಾಗಿದ್ದಾರೆ.
ರಾಜ್ಯಸಭಾ ಸದಸ್ಯರನ್ನು ಆಯ್ಕೆ ಹೇಗೆ?:
ಸಾರ್ವಜನಿಕರು ನೇರವಾಗಿ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿಲ್ಲ. ಆದರೆ, ಪರೋಕ್ಷವಾಗಿ ಆಯ್ಕೆ ಪ್ರಕ್ರಿಯೆ ಭಾಗವಾಗುತ್ತಾರೆ. ಜನರು ಆಯ್ಕೆ ಮಾಡಿದ ಶಾಸಕರು ಮತದಾನದ ಮೂಲಕ ಆಯ್ಕೆ ಮಾಡಬಹುದು. ಇದಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುತ್ತಾರೆ.












Click it and Unblock the Notifications