ವಿಧಾನಸಭೆ ಅಧಿವೇಶನ ನಡೆಸಲು ರಾಜಸ್ಥಾನ ರಾಜ್ಯಪಾಲರ ಒಪ್ಪಿಗೆ
ಜೈಪುರ, ಜುಲೈ 30 : ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ವಿಧಾನಸಭೆ ಅಧಿವೇಶನ ಕರೆಯಲು ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ಆಗಸ್ಟ್ 14ರಿಂದ ರಾಜ್ಯದಲ್ಲಿ ವಿಧಾನಸಭೆಯ 5ನೇ ಅಧಿವೇಶನ ಆರಂಭವಾಗಲಿದೆ.
ರಾಜಸ್ಥಾನದಲ್ಲಿ ಸ್ಪೀಕರ್ ಮತ್ತು ಸರ್ಕಾರದ ನಡುವೆ ಅಧಿವೇಶನ ಕರೆಯುವ ವಿಚಾರದಲ್ಲಿ ಜಟಾಪಟಿ ನಡೆದಿತ್ತು. ಅಧಿವೇಶನ ಕರೆಯಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಲ್ಲಿಸಿದ್ದ ಮೂರು ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.
ಬುಧವಾರ ಅಶೋಕ್ ಗೆಹ್ಲೋಟ್ ಖುದ್ದಾಗಿ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಕಲ್ರಾಜ್ ವಿಶ್ರಾ ಭೇಟಿ ಮಾಡಿದ್ದರು. ಬಳಿಕ ರಾಜಭವನದಿಂದ ವಿಧಾನಸಭೆ ಅಧಿವೇಶನ ನಡೆಲು ಒಪ್ಪಿಗೆ ನೀಡಲಾಗಿದೆ. ಆಗಸ್ಟ್ 14ರಿಂದ ಅಧಿವೇಶನ ನಡೆಯಲಿದೆ.
ಜುಲೈ 31ರಿಂದ ಅಧಿವೇಶನ ನಡೆಸಬೇಕು ಎಂದು ಅಶೋಕ್ ಗೆಹ್ಲೋಟ್ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ, 21 ದಿನದ ಮೊದಲು ನೋಟಿಸ್ ನೀಡಬೇಕು ಎಂದು ರಾಜ್ಯಪಾಲರು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಈಗ ಅಂತಿಮವಾಗಿ ಒಪ್ಪಿಗೆ ಸಿಕ್ಕಿದೆ.

3 ಬಾರಿ ತಿರಸ್ಕರಿಸಿದ್ದರು
ಕೊರೊನಾ ವೈರಸ್ ಸೋಂಕಿನ ಭೀತಿ, 21 ದಿನಗಳ ನೋಟಿಸ್ ನೀಡಿಲ್ಲ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ಮೂರು ಬಾರಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಲ್ಲಿಸಿದ್ದ ಅಧಿವೇಶನ ಕರೆಯುವ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈಗ ಅಂತಿಮವಾಗಿ ಒಪ್ಪಿಗೆ ಸಿಕ್ಕಿದೆ.

ವಿಶ್ವಾಸಮತಯಾಚನೆ ಇದೆಯೇ?
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಸ್ತಾವನೆಯಲ್ಲಿ ವಿಶ್ವಾಸಮತಯಾಚನೆ ಪ್ರಕ್ರಿಯೆ ಸೇರಿಸಿಲ್ಲ. ಸಚಿನ್ ಪೈಲೆಟ್ ಬಣ, ಗೆಹ್ಲೋಟ್ ಬಣ ಎಂದು ಕಾಂಗ್ರೆಸ್ ಶಾಸಕರು ಗುಂಪುಗಳಾಗಿದ್ದು, ಅಧಿವೇಶನ ಆರಂಭವಾದಾಗ ಪ್ರತಿಪಕ್ಷ ಬಿಜೆಪಿ ಬಹುಮತ ಸಾಬೀತು ಮಾಡಲು ನಿರ್ಣಯ ಮಂಡಿಸುವ ನಿರೀಕ್ಷೆ ಇದೆ.

ನಮಗೆ ಪೂರ್ಣ ಬಹುಮತವಿದೆ
"ವಿಧಾನಸಭೆಯಲ್ಲಿ ನಮಗೆ ಪೂರ್ಣ ಬಹುಮತವಿದೆ. ರಾಜ್ಯಪಾಲರಿಗೆ ವಿಶ್ವಾಸಮತ ಸಾಬೀತು ಮಾಡಬೇಕು ಎಂದೆನಿಸಿದರೆ ಸೂಚನೆ ನೀಡಲಿದ್ದಾರೆ" ಎಂದು ಕಾಂಗ್ರೆಸ್ನ ಮುಖ್ಯಸಚೇತಕ ಮಹೇಶ್ ಜೋಶಿ ಹೇಳಿದ್ದಾರೆ. ಗೆಹ್ಲೋಟ್ ಬಣದಲ್ಲಿ 104, ಸಚಿನ್ ಪೈಲೆಟ್ ಬಣದಲ್ಲಿ 21 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.

ಸಾಮಾಜಿಕ ಅಂತರ ಕಾಪಾಡಬೇಕು
ಅಧಿವೇಶನಕ್ಕೂ ಮುನ್ನ ವಿಧಾನಸಭೆ ಕಟ್ಟಡ ಸ್ಯಾನಿಟೈಸ್ ಆಗಬೇಕಿದೆ. ಶಾಸಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್ ಧರಿಸಬೇಕು. ಅಧಿವೇಶನದ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲರ ಕಚೇರಿ ಸೂಚನೆ ಕೊಟ್ಟಿದೆ.












Click it and Unblock the Notifications