ಅಲ್ವಾರ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕೆಂಡಕಾರಿದ ರಾಹುಲ್ ಗಾಂಧಿ
Recommended Video

ಅಲ್ವಾರ್ (ರಾಜಸ್ಥಾನ), ಡಿ 4: ಪ್ರಧಾನಿ ಮೋದಿಯವರನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆಂದು ರಾಜಸ್ಥಾನದ ಕಾಂಗ್ರೆಸ್ ಕಾರ್ಯಕರ್ತರು, ಎಐಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದರೂ, ರಾಹುಲ್ ಗಾಂಧಿ, ಮೋದಿ ವಿರುದ್ದ ತಮ್ಮ ಟೀಕಾಸ್ತ್ರವನ್ನು ಮುಂದುವರಿಸುತ್ತಲೇ ಇದ್ದಾರೆ.
ರಾಜಸ್ಥಾನದ ಅಸೆಂಬ್ಲಿ ಚುನಾವಣೆಗೆ ಬಹಿರಂಗ ಪ್ರಚಾರ ಮುಗಿಯಲು ಕೆಲವೇ ದಿನಗಳು ಬಾಕಿಯಿದ್ದು, ಅಲ್ವಾರ್ ನಲ್ಲಿ ಮಂಗಳವಾರ (ಡಿ 4) ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ, ಮೋದಿಜೀಯ ಮಾತು ಏನಾಯಿತು ಎಂದು ವ್ಯಂಗ್ಯವಾಡಿದ್ದಾರೆ. ರಾಜಸ್ಥಾನದಲ್ಲಿ ಡಿಸೆಂಬರ್ ಏಳರಂದು ಚುನಾವಣೆ ನಡೆಯಲಿದ್ದು, ಡಿ. 11ರಂದು ಫಲಿತಾಂಶ ಹೊರಬೀಳಲಿದೆ.
ಭಾಷಣ ಆರಂಭಿಸಿ, ವೇದಿಕೆಯ ಮೇಲಿದ್ದವರನ್ನು ಮತ್ತು ಕೆಳಗಿದ್ದವರನ್ನು ಸ್ವಾಗತಿಸುತ್ತಾ ರಾಹುಲ್, 2014ರಲ್ಲಿ ಮೋದಿ ಈ ದೇಶದ ಪ್ರಧಾನಿಯಾದರು, ಅದಕ್ಕಿಂತ ಮುಂಚೆ ವಸುಂಧರಾ ರಾಜಸ್ಥಾನದ ಸಿಎಂ ಆಗಿದ್ದರು. ಎರಡು ಕೋಟಿ ಉದ್ಯೋಗ ಸೃಷ್ಟಿಸಿ, ನಿರುದ್ಯೋಗ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ಮೋದಿಯದ್ದು ಬರೀ ಮಾತು.. ಮಾತು..ಮಾತು ಎಂದು ರಾಹುಲ್ ಟೀಕಿಸಿದ್ದಾರೆ.
ರಾಜಸ್ಥಾನದ ಯುವಕರಲ್ಲಿ ನಾನು ಕೇಳಲು ಬಯಸುತ್ತೇನೆ, ದೇಶದ ಪ್ರಧಾನಿ ನಿಮಗೆ ಮೋಸ ಮಾಡಿದ್ದಾರೋ ಇಲ್ಲವೋ ಹೇಳಿ ಎಂದು ಸಭಿಕರಲ್ಲಿ ಪ್ರಶ್ನಿಸಿದ್ದಾರೆ. ಒಂದು ವೇಳೆ ಉದ್ಯೋಗ ಸೃಷ್ಟಿಸಿದ್ದರೆ, ಅಲ್ವಾರ್ ನಲ್ಲಿ ನಾಲ್ವರು ಯುವಕರು ಆತ್ಮಹತ್ಯೆ ಯಾಕಾಗಿ ಮಾಡಿಕೊಂಡರು? ಇದಕ್ಕೆ ಮೋದಿ ಸರಕಾರ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ.
ಪ್ರತೀದಿನ ಅನಿಲ್ ಅಂಬಾನಿಗೆ ಫೋನ್ ಮಾಡುವ ಪ್ರಧಾನಿಗೆ, ಆತ್ಮಹತ್ಯೆ ಮಾಡಿಕೊಂಡ ಯುವಕರ ಕುಟುಂಬದ ಸದಸ್ಯರಿಗೆ ಫೋನ್ ಮಾಡಬೇಕೆಂದು ಅನಿಸಲಿಲ್ಲವೇ? ಬರೀ ಭಾಷಣ ಮಾಡುವ ನಿಮಗೆ, ಯುವಕರ ಮನಸ್ಸಿನ ನೋವು ಅರ್ಥವಾಗುತ್ತದೆಯೇ ಎಂದು ಮೋದಿಯನ್ನು ರಾಹುಲ್ ಪ್ರಶ್ನಿಸಿದ್ದಾರೆ. ರಾಹುಲ್ ಇತ್ತೀಚಿನ ಭಾಷಣದ ಕೆಲವೊಂದು ಝಲಕ್, ಮುಂದೆ ಓದಿ..

ಭಾರತ್ ಮಾತಾ ಕೀ ಜೈ ಎನ್ನುವ ಮೋದಿ
ನಿರುದ್ಯೋಗ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದ ಮೋದಿಜೀ, ನಂತರ ಮಾಡಿದ್ದು ಇನ್ನೊಬ್ಬರ ಚೌಕೀದಾರೀ ಕೆಲಸವನ್ನು. ತಮ್ಮ ಪ್ರತೀ ಭಾಷಣದಲ್ಲಿ ಭಾರತ್ ಮಾತಾ ಕೀ ಜೈ ಎನ್ನುವ ಮೋದಿ, ಕೆಲಸ ಮಾಡುತ್ತಿರುವುದು ಮಾತ್ರ ಅನಿಲ್ ಅಂಬಾನಿಗೆ. ವಾಣಿಜ್ಯೋದ್ಯಮಿಗಳ ಸಾಲಮನ್ನಾ ಮಾಡುವ ಮೋದಿಗೆ, ರೈತರ ಸಾಲ ಮನ್ನಾ ಮಾಡಲು ಮನಸ್ಸಾಗಲಿಲ್ಲ ಎಂದು ರಾಹುಲ್, ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ (ಅಲ್ವಾರ್, ಡಿಸೆಂಬರ್ 4)

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಎಲ್ಲರೂ ಒಂದೇ. ಅವರು ಮೂರು ಜನರೂ ಒಂದೇ. ದಯವಿಟ್ಟು ಅವರನ್ನು ನಂಬಿ ಮೂರ್ಖರಾಗಬೇಡಿ. ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಬಿಜೆಪಿ 'ಬಿ' ಟೀಮ್ ಇದ್ದಂತೆ. ಕೆ.ಚಂದ್ರಶೇಖರ್ ರಾವ್ ಪ್ರಧಾನಿ ನರೇಂದ್ರ ಮೋದಿ ಅವರ 'ತೆಲಂಗಾಣ ರಬ್ಬರ್ ಸ್ಟಾಂಪ್'. (ತಂಡೂರು, ಡಿಸೆಂಬರ್ 3)

ವಸೂಲಾಗದ ಸಾಲದ ಹೊರೆ ದುಪ್ಪಟ್ಟು
ನಾಲ್ಕು ವರ್ಷಗಳ ಹಿಂದೆ ನವೆಂಬರ್ ನಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ನರೇಂದ್ರ ಮೋದಿ ಅವರು ತಮ್ಮ ಸ್ವಂತ ರಾಜಕೀಯ ಆಸ್ತಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಯುಪಿಎ ಆಡಳಿತವಿದ್ದಾಗ ಬ್ಯಾಂಕುಗಳಿಂದ ವಸೂಲಾಗದ ಸಾಲದ ಹೊರೆ 2 ಲಕ್ಷ ಕೋಟಿಯಷ್ಟಿದ್ದರೆ, ಎನ್ಡಿಎ ಆಡಳಿತದಲ್ಲಿ ಅದು 12 ಲಕ್ಷ ಕೋಟಿಯಷ್ಟಾಗಿದೆ. ಅಲ್ಲದೆ, ಮೋದಿ ಸರಕಾರ 15ರಿಂದ 20 ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಇಡೀ ಬ್ಯಾಂಕ್ ವ್ಯವಸ್ಥೆಯೇ ಈ ಉದ್ಯಮಿಗಳಿಗಾಗಿ ಅನ್ನುವಂತಾಗಿದೆ. (ಉದಯಪುರ, ಡಿಸೆಂಬರ್ 1)

ಖಾವೋ ಕಮೀಷನ್ ರಾವ್
ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ರನ್ನು ಕೆಸಿಆರ್ ಅಂತಲೇ ಕರೆಯಲಾಗುತ್ತದೆ. 'ಕೆಸಿಆರ್' ಅಂದರೆ ಖಾವೋ ಕಮೀಷನ್ ರಾವ್. ತೆಲಂಗಾಣ ಅಭಿವೃದ್ಧಿ ಮಾಡಬೇಕಾದ ಹಣದಲ್ಲಿ ಕೆಸಿಆರ್ ಕುಟುಂಬದವರು ಶ್ರೀಮಂತರಾಗಿದ್ದಾರೆ. ಬುಡಕಟ್ಟು ಜನಾಂಗದವರು ಹಾಗೂ ರೈತರ ಹಕ್ಕುಗಳನ್ನು ನಿರಾಕರಿಸಿ, ಬಂಡವಾಳದಾರರಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ನ ಹಳೆ ಯೋಜನೆಗಳಿಗೆ ಮರು ನಾಮಕರಣ ಮಾಡಿ, ಅದರ ವೆಚ್ಚ ಹೆಚ್ಚಿಸಿ, ಆ ಮೂಲಕ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕಮೀಷನ್ ಪಡೆಯುವುದೇ ಕೆಸಿಆರ್ ಕೆಲಸ. (ನಾಂಪಲ್ಲಿ, ನವೆಂಬರ್ 29)

ನಮಗೆ ಒಂದೇ ರಾಷ್ಟ್ರ ಬೇಕು, ನಮಗೆ ನ್ಯಾಯಬೇಕು
ನಮಗೆ ಎರಡು ಹಿಂದುಸ್ಥಾನ ಬೇಕಿಲ್ಲ. ಉದ್ಯಮಿಗಳ ಮತ್ತು ಸಾಮಾನ್ಯ ವರ್ಗದ ಎಂಬ ಎರಡು ವಿಧದ ಹಿಂದುಸ್ಥಾನ ನಮಗೆ ಬೇಕಿಲ್ಲ. ಬೆರಳೆಣಿಕೆಯ ಉದ್ಯಮಿಗಳದ್ದೊಂದು ಮತ್ತು ಸಾಮಾನ್ಯ ಜನರದ್ದೊಂದು ಎಂಬ ಎರಡು ಹಿಂದುಸ್ಥಾನ ನಮಗೆ ಬೇಕಿಲ್ಲ. ನಮಗೆ ಒಂದೇ ರಾಷ್ಟ್ರ ಬೇಕು, ನಮಗೆ ನ್ಯಾಯಬೇಕು. (ಇಂದೋರ್, ನವೆಂಬರ್ 16)












Click it and Unblock the Notifications