ಅಳ್ವಾರ್ ಅತ್ಯಾಚಾರ ಪ್ರಕರಣ: ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ರಾಜಸ್ಥಾನ ಸರ್ಕಾರ ನಿರ್ಧಾರ
ಜೈಪುರ ಜನವರಿ 17: ಅಳ್ವಾರ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲು ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರ ಭಾನುವಾರ ನಿರ್ಧರಿಸಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಅಳ್ವಾರ್ನ ಬೌದ್ಧಿಕ ವಿಕಲಾಂಗ ಬಾಲಕಿಯ ವಿಷಯವನ್ನು ನಗರದ ಪೊಲೀಸ್ ಅಧಿಕಾರಿಗಳು, ಕ್ರೈಂ ಬ್ರಾಂಚ್, ಎಸ್ಒಜಿ ಅಥವಾ ಸಿಬಿಐ ಮೂಲಕ ತನಿಖೆ ಮಾಡಲು ರಾಜ್ಯ ಸರ್ಕಾರ ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿರೋಧ ಪಕ್ಷವು ರಾಜಕೀಯಕ್ಕಾಗಿ ಅಸಹ್ಯಕರ ಪ್ರಚಾರವನ್ನು ಹರಡುತ್ತಿದೆ. ಪಕ್ಷವು ಅವಳನ್ನು ಸಾಮೂಹಿಕ ಅತ್ಯಾಚಾರದ ಬಲಿಪಶು ಎಂದು ಕರೆಯುತ್ತಿದೆ ಎಂದು ಆರೋಪಿಸಿದರು. ಆದರೆ ವೈದ್ಯಕೀಯ ವರದಿಯು ಆಕೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ ಎಂದು ಸ್ಥಾಪಿಸಿದೆ. ಬಾಲಕಿಯ ಗಾಯಗಳ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಗೆಹ್ಲೋಟ್ ಹೇಳಿದರು.
Breaking; ಕೊಲೆ ಪ್ರಕರಣ, ರಾಮ್ ರಹೀಮ್ ಸಿಂಗ್ಗೆ ಜೀವಾವಧಿ ಶಿಕ್ಷೆ
ಅಳ್ವಾರ್ ಅತ್ಯಾಚಾರ ಪ್ರಕರಣ:
ಮಂಗಳವಾರ ರಾತ್ರಿ ಅಳ್ವಾರ್ನ ತಿಜಾರಾ ಫಟಕ್ ಬಳಿಯ ಸೇತುವೆಯ ಮೇಲೆ 14 ವರ್ಷದ ಬಾಲಕಿ ತನ್ನ ಖಾಸಗಿ ಭಾಗಗಳಿಗೆ ಗಾಯಗಳೊಂದಿಗೆ ಸಂಕಷ್ಟದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಗೆ ರಕ್ತಸ್ರಾವ ಕಂಡು ಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪೊಲೀಸರ ಪ್ರಕಾರ, ಆಕೆ ತನ್ನ ಹಳ್ಳಿಯಿಂದ ನಗರಕ್ಕೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.

"ರಾಜ್ಯ ಪೊಲೀಸರು ಈಗಾಗಲೇ ಪ್ರಕರಣದಲ್ಲಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಆದರೂ, ಅಳ್ವಾರ್ನ ಹೊರಗಿನ ನಿರ್ದಿಷ್ಟ ಅಧಿಕಾರಿ ಅಥವಾ ಸಿಐಡಿ, ಕ್ರೈಂ ಬ್ರಾಂಚ್, ಎಸ್ಒಜಿ ಅಥವಾ ಸಿಬಿಐನಿಂದ ಈ ವಿಷಯವನ್ನು ತನಿಖೆ ಮಾಡಬೇಕೆಂದು ಹುಡುಗಿಯ ಕುಟುಂಬ ಬಯಸಿದರೆ, ರಾಜ್ಯ ಸರ್ಕಾರವೂ ಇದಕ್ಕೆ ಸಿದ್ಧವಾಗಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. "ಈ ವಿಷಯದಲ್ಲಿ ಸ್ವತಂತ್ರ ತನಿಖೆ ನಡೆಯಬೇಕು ಮತ್ತು ಈ ಘಟನೆಯ ಸತ್ಯವು ಬೆಳಕಿಗೆ ಬರಬೇಕು ಎಂಬುದು ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ" ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಾಯಕರ ನಿಯೋಗ ಅಳ್ವಾರ್ನಲ್ಲಿರುವ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿದೆ. ಬಿಜೆಪಿ ತನ್ನ ರಾಜಕೀಯದಿಂದ ಸಂತ್ರಸ್ತೆಯ ಕುಟುಂಬಕ್ಕೆ ಏನನ್ನಿಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ. ಕುಟುಂಬ ಈಗಾಗಲೇ ಸಂಕಷ್ಟದಲ್ಲಿದ್ದು, ಬಿಜೆಪಿ ನಾಯಕರು ಈ ವಿಚಾರದಲ್ಲಿ ನಾಚಿಕೆಗೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದರು. "ಬಿಜೆಪಿಯು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಮತ್ತು ಅಳ್ವಾರ್ನಲ್ಲಿರುವ ಬಾಲಕಿಯ ಮನೆಗೆ ಬಂದು ಇದನ್ನು ಸಾಮೂಹಿಕ ಅತ್ಯಾಚಾರದ ಪ್ರಕರಣ ಎಂದು ಕರೆಯುವುದು ನಾಚಿಕೆಗೇಡಿನ ಸಂಗತಿ" ಎಂದು ಗೆಹ್ಲೋಟ್ ಹೇಳಿದರು.
Recommended Video
ಅಳ್ವಾರ್ ಸಾಮೂಹಿಕ ಅತ್ಯಾಚಾರದ ಬಳಿಕ ಇನ್ನೂ 2 ಪ್ರಕರಣ ಬೆಳಕಿಗೆ
ಅಪ್ರಾಪ್ತ ಬಾಲಕಿಯ ದೇಹದ ಭಾಗಗಳಿಗೆ ಚೂಪಾದ ವಸ್ತುಗಳನ್ನು ಸೇರಿಸಲಾಗಿದ್ದು, ಆಕೆಯ ಆಂತರಿಕ ಅಂಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಮಾಹಿತಿಯ ಪ್ರಕಾರ, ಬಾಲಕಿಯ ಆಂತರಿಕ ಅಂಗಗಳು ಹಾನಿಗೊಳಗಾಗಿದ್ದು, ಪ್ರಸ್ತುತ ಆಕೆ ಜೆಕೆ ಲೋನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾಳೆ. ವೈದ್ಯರು ಬಾಲಕಿಯ ಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ಜೈಪುರದ ಜೆಕೆ ಲೋನ್ ಆಸ್ಪತ್ರೆಯ ಡಾ.ಅರವಿಂದ್ ಶುಕ್ಲಾ ತಿಳಿಸಿದ್ದಾರೆ. ಜೊತೆಗೆ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 25 ಕಿಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆದರೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications