ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು: ಗೆಹ್ಲೋಟ್
ಅಜ್ಮೇರ್ (ರಾಜಸ್ತಾನ), ಮಾರ್ಚ್ 13: ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಹದಿನೈದು ಸಲ 'ಸರ್ಜಿಕಲ್ ಸ್ಟ್ರೈಕ್' ನಡೆದಿದೆ. ಆದರೆ ಅದರ ಬಗ್ಗೆ ಯಾವತ್ತಿಗೂ ಮಾತನಾಡಿಲ್ಲ. ಮೋದಿ ಸರಕಾರವು ಸೇನೆಯ ಕಾರ್ಯಾಚರಣೆಯನ್ನು 'ರಾಜಕಾರಣಕ್ಕೆ' ಬಳಸಿಕೊಳ್ಳುತ್ತಿದೆ ಎಂದು ರಾಜಸ್ತಾನದ ಮುಖ್ಯಮಂತ್ರಿ ಆಶೋಕ್ ಗೆಹ್ಲೋಟ್ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರವಾಗಿ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯಲ್ಲಿ ಚಾದರ್ ಹೊದಿಸಿದ ಅವರು, ಆ ನಂತರ ಏನು ಮಾತನಾಡಿದ್ದಾರೆ ಎಂಬುದರ ವಿವರ ಇಲ್ಲಿದೆ.
* ದಿವಂಗತ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಈ ದೇಶಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವುಗಳನ್ನು ಹೇಳದ ಮೋದಿ ಸರಕಾರ, ಗಾಂಧಿ ಕುಟುಂಬದ ಹೆಸರಿಗೆ ಮಸಿ ಬಳಿದಿದೆ.

* ದೇಶದ ಜನರು ಅಮಾಯಕರು. ದೇಶದ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಅಂದುಕೊಂಡಿದ್ದಾರೆ. ಆದರೆ ಈ ಹಿಂದೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಹದಿನೈದು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆದರೆ ಅಂಥದ್ದೊಂದು ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಂದಿಗೂ ಹೇಳಿರಲಿಲ್ಲ.
* ಸರಕಾರದ ಪರವಾಗಿ ಇಂಥ ಬೆಳವಣಿಗೆಗಳನ್ನು ದೊಡ್ಡದು ಮಾಡಿ ಹೇಳಬಾರದು.
* ಮೋದಿ ಪ್ರಧಾನಿ ಆದರು ಮತ್ತು ಇಸ್ರೋದಿಂದ ಉಪಗ್ರಹ ಉಡಾವಣೆ ಮಾಡಲಾಯಿತು. ಆದರೆ ಮೋದಿ ಆಡಳಿತಾವಧಿಯಲ್ಲಿ ಮಾತ್ರ ಉಪಗ್ರಹ ಉಡಾವಣೆ ಮಾಡಲಾಯಿತು ಎಂದು ತೋರಿಸಲಾಯಿತು. ಇಸ್ರೋದಿಂದ ನೂರಾರು ಉಪಗ್ರಹ ಉಡಾವಣೆ ಆಗುವಂತೆ ಮಾಡಿದವರು ಇಂದಿರಾ ಗಾಂಧಿ.
* ಪಾಕಿಸ್ತಾನದಿಂದ ಬೇರ್ಪಡಿಸಿ, ಬಾಂಗ್ಲಾದೇಶ ಎಂಬ ದೇಶದ ಉದಯಕ್ಕೆ ಕಾರಣರಾದವರು ಹಾಗೂ ಖಲೀಸ್ತಾನ್ ರೂಪುಗೊಳ್ಳದಂತೆ ನೋಡಿಕೊಂಡವರು ಇಂದಿರಾ ಗಾಂಧಿ. ಸ್ವಾತಂತ್ರ್ಯಕ್ಕಾಗಿ ಜವಾಹರ್ ಲಾಲ್ ನೆಹರೂ ಹನ್ನೆರಡು ವರ್ಷ ಜೈಲಿನಲ್ಲಿದ್ದರು. ಆದರೆ ಅವರು (ಬಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಏನು ಹಬ್ಬಿಸುತ್ತಿದ್ದಾರೆ? ಬಿಜೆಪಿ ಹಾಗೂ ಆರೆಸ್ಸೆಸ್ ನಿಂದ ಕಾಂಗ್ರೆಸ್ ಮತ್ತು ಅದರ ಪರಂಪರೆಗೆ ಕೆಟ್ಟ ಹೆಸರು ತರಲು ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗುತ್ತಿದೆ.
* ನರೇಂದ್ತ ಮೋದಿ ಬಾಲಿವುಡ್ ನಟರಾಗಬೇಕಿತ್ತು. ಸಿನಿಮಾಗಳಲ್ಲಿ ನಟ, ನಟಿಯರು, ಖಳನಾಯಕ ಇರುತ್ತಾರೆ. ಅವರು ಪ್ರೀತಿ- ಅಂತಃಕರಣದ ಬಗ್ಗೆ ಮಾತನಾಡುತ್ತಾರೆ. ಅದರಿಂದ ವೀಕ್ಷಕರಿಗೆ ಖುಷಿ ಆಗುತ್ತದೆ. ಆದರೆ ಸಿನಿಮಾದಲ್ಲಿ ಸತ್ಯ ಇರುವುದಿಲ್ಲ. ಮತ್ತು ಹಾಗೆ ತೋರಿಸುವ ಪ್ರೀತಿ ಹಾಗೂ ಅಂತಃಕರಣ ನಿಜವಾಗಿರುವುದಿಲ್ಲ.
* ಅವರು ಪ್ರಧಾನಿ ಎಂಬ ಪಾತ್ರಕ್ಕೆ ಬಂದಿದ್ದರಿಂದ ದೇಶ ಹಾಗೂ ವಿದೇಶದಲ್ಲಿ ಯಶಸ್ವಿ ಆಗಿರಬಹುದು. ಆದರೆ ಅವರು ಯಶಸ್ವಿ ಆಗಿದ್ದಾರೆ ಅನ್ನೊದನ್ನು ನಾನು ಒಪ್ಪುವುದಿಲ್ಲ. ಜಗತ್ತು ಏನು ಬೇಕಾದರೂ ಹೇಳಲಿ.












Click it and Unblock the Notifications