ನೇಪಾಳದಲ್ಲಿ ಕಿಡಿ ಹೊತ್ತಿಸಿದ ಪ್ರಧಾನಿ- ಭಾರತದ ರಾ ಮುಖ್ಯಸ್ಥರ ಭೇಟಿ
ಕಠ್ಮಂಡು, ಅಕ್ಟೋಬರ್ 23: ಭಾರತದ ರಾ ಮುಖ್ಯಸ್ಥ ಸಮಂತ್ ಕುಮಾರ್ ಗೋಯಲ್ ಅವರನ್ನು ಭೇಟಿ ಮಾಡಿದ್ದಕ್ಕಾಗಿ ನೇಪಾಳ ಪ್ರಧಾನಿ ಕೆಪಿ ಒಲಿ ಶರ್ಮಾ ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (ರಾ) ಮುಖ್ಯಸ್ಥರನ್ನು ಭೇಟಿ ಮಾಡಿ ಬುಧವಾರ ಮಧ್ಯರಾತ್ರಿಯವರೆಗೂ ಸುಮಾರು ಎರಡು ಗಂಟೆ ನಡೆಸಿದ ಸಭೆಯ ವಿವರ ನೀಡುವಂತೆ ಮಾಜಿ ಪ್ರಧಾನಿ ಪುಷ್ಪ ಕಮಲ್ ದಾಹಲ್ ಪ್ರಚಂಡ, ಜಾಲತಾಥ್ ಖಾನಲ್, ಮಾಧವ್ ಕುಮಾರ್ ನೇಪಾಳ್, ಮಾಜಿ ಉಪ ಪ್ರಧಾನಿಗಳಾದ ನಾರಾಯಣ್ ಕಾಜಿ ಶ್ರೇಷ್ಠ ಮತ್ತು ಭೀಮ್ ಬಹದ್ದೂರ್ ರಾವಲ್ ಆಗ್ರಹಿಸಿದ್ದಾರೆ.
ಗೋಯಲ್ ಅವರೊಂದಿಗೆ ಪ್ರಧಾನಿ ನಡೆಸಿದ ರಹಸ್ಯ ಸಭೆ ಆಕ್ಷೇಪಾರ್ಯ ಮತ್ತು ಸಂಶಯಾಸ್ಪದ ಎಂದು ಪುಷ್ಪ ಕಮಲ್ ಪ್ರಚಂಡ ಟೀಕಿಸಿದ್ದಾರೆ.

ಗೋಯಲ್ ಮತ್ತು ಅವರ ತಂಡ ಒಂದು ದಿನದ ನೇಪಾಳ ಪ್ರವಾಸಕ್ಕಾಗಿ ವಿಶೇಷ ವಿಮಾನದಲ್ಲಿ ಕಠ್ಮಂಡುಗೆ ತೆರಳಿತ್ತು. ಈ ಸಂದರ್ಭದಲ್ಲಿ ತಂಡವು ವಿರೋಧಪಕ್ಷದ ನಾಯಕ ಶೇರ್ ಬಹದ್ದೂರ್ ದೇಯುಬಾ, ಮಾಜಿ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಮತ್ತು ನಾಯಕ ಮಹಾಂತ ಠಾಕೂರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ನೇಪಾಳದಲ್ಲಿ ರಾಜಕೀಯ ಕಿಡಿ ಹಚ್ಚಿಸಿದೆ.
ಭಾರತದ ಸೇನಾ ಮುಖ್ಯಸ್ಥ ಎಂಎಂ ನರವಣೆ ಅವರು ಮುಂದಿನ ತಿಂಗಳು ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ರಾ ಮುಖ್ಯಸ್ಥರ ಭೇಟಿ ನಡೆದಿದೆ. ನೆರೆಯ ದೇಶಗಳಾದ ನೇಪಾಳ ಮತ್ತು ಭಾರತದ ಸಂಬಂಧ ಹಳಸಿದ್ದು, ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ.












Click it and Unblock the Notifications