ಮೋದಿಗೆ ನೀಡಿದ 'ಚಾಂಪಿಯನ್ಸ್ ಆಫ್ ಅರ್ಥ್' ಪ್ರಶಸ್ತಿ ಹಿಂದಕ್ಕೆ ಪಡೆಯಿರಿ: ಪಾಕಿಸ್ತಾನ
ಇಸ್ಲಮಾಬಾದ್, ಮಾರ್ಚ್ 16: ಪಾಕಿಸ್ತಾನದಲ್ಲಿ ಹೇರಳವಾಗಿರುವ ನೈಸರ್ಗಿಕ ನಿಕ್ಷೇಪಗಳನ್ನು ಭಾರತ ತನ್ನ ವೈಮಾನಿಕ ದಾಳಿಯ ಮೂಲಕ ಹಾನಿಗೊಳಿಸಿದೆ ಎಂದು ಹವಾಮಾನ ಮುನ್ಸೂಚನೆಯ ಬಗ್ಗೆ ಪಾಕ್ ಪ್ರಧಾನಿಯ ಸಲಹೆಗಾರ ಮಲಿಕ್ ಅಮೀನ್ ಅಸ್ಲಾಂ ದೂರಿದ್ದಾರೆ.
ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ನಿರ್ದೇಶನದಂತೆ, ನೈರೋಬಿಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 4ನೇ ಅಧಿವೇಶನದಲ್ಲಿ ಯುಎನ್ಇಎ (United Nations Environment Assembly) ಅಸೆಂಬ್ಲಿಗೆ ಸಲ್ಲಿಸಿದ ಕಡತದಲ್ಲಿ ಭಾರತದ ವಿರುದ್ದ ದೂರಿನ ಸುರಿಮಳೆಯನ್ನೇ ಪಾಕ್ ಸುರಿಸಿದೆ.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಲಾಗಿದ್ದ "ಚಾಂಪಿಯನ್ಸ್ ಆಫ್ ಅರ್ಥ್" ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯುವಂತೆ, ಪಾಕಿಸ್ತಾನ ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ. ಪರಿಸರ ಸಂರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಕೈಗೊಂಡಿರುವ ಕ್ರಮಗಳನ್ನು ಗುರುತಿಸಿ ವಿಶ್ವಸಂಸ್ಥೆ ಕಳೆದ ವರ್ಷ ಈ ಪ್ರಶಸ್ತಿ ನೀಡಿತ್ತು.

ಪಾಕಿಸ್ತಾನದ ನೆಲದ ಮೇಲೆ ಮೋದಿ ಸರಕಾರದ ವೈಮಾನಿಕ ದಾಳಿಯಿಂದ ಪರಿಸರಕ್ಕೆ ಹಾನಿಯುಂಟಾಗಿದೆ ಎಂದು ದೂರಿರುವ ಪಾಕ್, ಮೋದಿಗೆ ನೀಡಲಾಗಿರುವ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದು, ಅವರಿಗೆ ಸರಿಯಾದ ಪಾಠ ಕಲಿಸಬೇಕೆಂದು ಒತ್ತಾಯಿಸಿದೆ.
ಮಸಾರ್ ಜಾಬ್ಬಾ ಫಾರೆಸ್ಟ್ ರಿಸರ್ವ್ ಸಂರಕ್ಷಿತ ಪ್ರದೇಶದಲ್ಲಿ ಭಾರತೀಯ ವಾಯುಸೇನೆ ದಾಳಿ ನಡೆಸುವ ಮೂಲಕ, 'ಪರಿಸರ ಭಯೋತ್ಪಾದನೆ'ಯನ್ನು ನಡೆಸಿದೆ, ಈ ಭಾಗದಲ್ಲಿ ಭಾರತ ಮಾಡಿದ ಹಾನಿಗಳಿಗೆ ಬೆಲೆ ಪಾವತಿಸಬೇಕಿದೆ ಎಂದು ಬಾಲಕೋಟ್ ದಾಳಿಯನ್ನು ಪರೋಕ್ಷವಾಗಿ ಪಾಕಿಸ್ತಾನ ಉಲ್ಲೇಖಿಸಿದೆ.












Click it and Unblock the Notifications