'ಬಹುಮತ ಕಳೆದುಕೊಂಡ ಇಮ್ರಾನ್, ಶರೀಫ್ ಶೀಘ್ರ ಪಾಕ್ ಪ್ರಧಾನಿ' ಎಂದ ಪಿಪಿಪಿ ಅಧ್ಯಕ್ಷ
ಇಸ್ಲಾಮಾಬಾದ್, ಮಾರ್ಚ್ 31: ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಈಗ ಪಾಕಿಸ್ತಾನ ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿದ್ದಾರೆ ಹಾಗೂ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರು ಶೀಘ್ರದಲ್ಲೇ ಪ್ರಧಾನಿಯಾಗಲಿದ್ದಾರೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ನಡೆಯಲಿರುವ ವಿಶ್ವಾಸ ಮತದ ಮೊದಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ಭುಟ್ಟೋ, ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿ ಬೆಂಬಲಿಸಲು ನಿರ್ಧರಿಸಿದ ಮುತ್ತಹಿದಾ ಕ್ವಾಮಿ ಮೂವ್ಮೆಂಟ್-ಪಾಕಿಸ್ತಾನ (ಎಂಕ್ಯೂಎಂ-ಪಿ) ಗೆ ಧನ್ಯವಾದ ಅರ್ಪಿಸಿದರು. ಹಾಗೆಯೇ ಗುರುವಾರವೇ ಮತದಾನ ನಡೆಯಬೇಕು ಎಂದರು.
"ಇಮ್ರಾನ್ ಖಾನ್ ಈಗಾಗಲೇ ಬಹುಮತವನ್ನು ಕಳೆದುಕೊಂಡಿದ್ದಾರೆ. ಇನ್ನು ಮುಂದೆ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನ ಮಂತ್ರಿ ಅಲ್ಲ. ನಾಳೆ ಸಂಸತ್ ಅಧಿವೇಶನ ನಡೆಯಲಿ, ಈ ವಿಚಾರವನ್ನು ನಾವು ಆದಷ್ಟು ಶೀಘ್ರ ಇತ್ಯರ್ಥ ಮಾಡೋಣ," ಎಂದು ಬುಧಾವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ತಿಳಿಸಿದರು.

"ಈ ವಿಚಾರವು ಒಂದು ಇತ್ಯರ್ಥಕ್ಕೆ ಬಂದ ಬಳಿಕ ನಾವು ಚುನಾವಣೆಯ ಬಗ್ಗೆ ಸರಿಯಾದ ನಿರ್ಧಾರವನ್ನು ಕೈಗೊಳ್ಳಬಹುದು. ಪಾರದರ್ಶಕವಾಗಿ ಚುನಾವಣೆಯನ್ನು ನಡೆಸಬಹುದು. ಹಾಗೆಯೇ ನಾವು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡುವತ್ತ ಹೆಜ್ಜೆ ಇರಿಸಬಹುದು. ಆರ್ಥಿಕ ಬಿಕ್ಕಟ್ಟಿಗೆ ಅಂತ್ಯವನ್ನು ಕೂಡಾ ಹಾಡಬಹುದು," ಎಂದು ವಿವರಿಸಿದರು.
ಶಹಬಾಜ್ ಷರೀಫ್ ಮುಂದಿನ ಪ್ರಧಾನಮಂತ್ರಿಯೇ?
ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶಹಬಾಜ್ ಷರೀಫ್ ಅವರು ಶೀಘ್ರದಲ್ಲೇ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ. "ಪಿಪಿಪಿ ಹಾಗೂ ಎಂಕ್ಯೂಎಂ-ಪಿಯ ಕಾರ್ಯ ಸಂಬಂಧವು ಅವಿಶ್ವಾಸ ನಿರ್ಣಯದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಕರಾಚಿ ಮತ್ತು ಪಾಕಿಸ್ತಾನದ ಅಭಿವೃದ್ಧಿಗಾಗಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ," ಎಂದು ಕೂಡಾ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ತಿಳಿಸಿದ್ದಾರೆ.

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸವಾಲು
ಪಾಕಿಸ್ತಾನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಶೆಹಬಾಜ್ ಷರೀಫ್ ಸವಾಲು ಹಾಕಿದ್ದಾರೆ ಎಂದು ಪಿಪಿಪಿ ಅಧ್ಯಕ್ಷರು ತಿಳಿಸಿದ್ದಾರೆ. "ಇಮ್ರಾನ್ ಖಾನ್ಗೆ ಯಾವುದೇ ಆಯ್ಕೆ ಉಳಿದಿಲ್ಲ. ರಾಜೀನಾಮೆ ನೀಡಬಹುದು ಅಥವಾ ಅವಿಶ್ವಾಸ ನಿರ್ಣಯದ ಮೂಲಕ ವಜಾಗೊಳಿಸಬಹುದು," ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ.
ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸುಮಾರು 100 ಶಾಸಕರು ಮಾರ್ಚ್ 8 ರಂದು ರಾಷ್ಟ್ರೀಯ ವಿಧಾನಸಭೆ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದರು. ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರಕ್ಕೆ ಖಾನ್ ನೇತೃತ್ವದ ಪಿಟಿಐ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿದರು.
ಇಮ್ರಾನ್ ಖಾನ್ನ ಪಿಟಿಐ ಪಕ್ಷದ 23 ಸಂಸದರೂ ಕೂಡಾ ಇಮ್ರಾನ್ ಖಾನ್ ಜೊತೆಯಾಗಿದ್ದಾರೆ. ಸರ್ಕಾರ ರಚನೆ ಮಾಡಬೇಕಾದರೆ, 172 ಸಂಸದರ ಬಲ ಅಗತ್ಯವಾಗಿದೆ. ಬಂಡಾಯದ ಕಾರಣ ಕೇವಲ 155 ಸಂಸದರ ಬೆಂಬಲ ಹೊಂದಿ ಇಮ್ರಾನ್ ಖಾನ್ ಪರದಾಡುವಂತಾಗಿದೆ. ಏಪ್ರಿಲ್ 3ರಂದು ಅವರ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
"ಇಮ್ರಾನ್ ಖಾನ್ ದೇಶದ ಪ್ರಧಾನ ಮಂತ್ರಿಯಾಗಿ ಆರ್ಥಿಕತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹಣದುಬ್ಬರ ಪ್ರಮಾಣ ಎರಡಂಕಿಗೆ ಹೆಚ್ಚಾಗಿರುವ ಕಾರಣ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಇದೆ. ರಾಜಕೀಯ ಭವಿಷ್ಯಕ್ಕೆ ಆತಂಕ ತಂದೊಡ್ಡಿದೆ," ಎಂದು ಆರೋಪ ಮಾಡಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ.












Click it and Unblock the Notifications