ಒಂದು ವೇಳೆ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಯಾದರೂ ಉಕ್ರೇನಿಯನ್ನರ ಹೋರಾಟ ನಿಲ್ಲಲ್ಲ
ಕೀವ್, ಮಾರ್ಚ್ 7: ಉಕ್ರೇನ್ ಮೇಲೆ ತನ್ನ ಸೇನಾ ದಾಳಿಯನ್ನು ಮುಂದುವರೆಸಿರುವ ರಷ್ಯಾ, ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದೆ. ಸದ್ಯ ಉಕ್ರೇನ್ನಲ್ಲಿನ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಗೆ ರಷ್ಯಾ ಈಗಾಗಲೇ ಹಲವು ಬಾರಿ ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಉಕ್ರೇನ್ ಆಡಳಿತ, ಒಂದು ವೇಳೆ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಯಾದರೂ ದೇಶದ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಯೋಜನೆ ರೂಪಿಸಿಕೊಂಡಿದೆ.
ಈ ಕುರಿತು ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್, ರಷ್ಯಾ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಯಾದರೂ ಉಕ್ರೇನ್ ತನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಧಿಕಾರದಲ್ಲಿದ್ದಾಗ ಹೇಗೆ ಆಡಳಿತ ನಡೆಯುತ್ತಿದೆಯೋ ನಂತರವೂ ಹೆಚ್ಚೂ ಕಡಿಮೆ ಅದೇ ರೀತಿ ಮುಂದುವರಿಸಲು ಅವರು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಉಕ್ರೇನ್ನ ಧೈರ್ಯಶಾಲಿ ಜನರ ನಿಜವಾದ ಪ್ರತಿನಿಧಿಗಳಾಗಿ ಝೆಲೆನ್ಸ್ಕಿ ಮತ್ತು ಅವರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ 12 ದಿನಗಳಲ್ಲಿ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ಈವರೆಗೆ ಮೂರು ಬಾರಿ ರಷ್ಯಾ ಪ್ರಯತ್ನಿಸಿದೆ. ಉಕ್ರೇನ್ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆ ಸಕಾಲದಲ್ಲಿ ಮುನ್ಸೂಚನೆ ನೀಡಿದ್ದರಿಂದ ಈ ಸಂಚುಗಳನ್ನು ವಿಫಲಗೊಳಿಸಲಾಯಿತು. ವಾಗ್ನರ್ ಗ್ರೂಪ್ ಮತ್ತು ಚೆಚೆನ್ಯಾ ಬಂಡುಕೋರರ ಎರಡು ಪ್ರತ್ಯೇಕ ಗುಂಪುಗಳನ್ನು ಉಕ್ರೇನ್ ಅಧ್ಯಕ್ಷರ ಹತ್ಯೆಗೆಂದು ಕಳಿಸಲಾಗಿತ್ತು ಎಂದರು.
ಉಕ್ರೇನ್ಗೆ ಬಂದಿರುವ ರಷ್ಯಾ ಸೇನೆಯು ಉದ್ದೇಶಪೂರ್ವಕವಾಗಿ ಜನರನ್ನು ಕೊಲ್ಲುತ್ತಿದೆ. ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ನೂರಾರು ಜನರು ಮೃತಪಟ್ಟಿದ್ದಾರೆ. ಯಾವುದನ್ನೂ ಮರೆಯುವುದಿಲ್ಲ, ಯಾರನ್ನೂ ಕ್ಷಮಿಸುವುದಿಲ್ಲ. ನಮ್ಮ ನೆಲಕ್ಕೆ ಬಂದು ನಮ್ಮ ಮೇಲೆ ದೌರ್ಜನ್ಯ ಎಸಗಿದ ಎಲ್ಲರನ್ನೂ ಶಿಕ್ಷಿಸುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು.
ಪ್ರಧಾನಿ ಮೋದಿ-ಝೆಲೆನ್ಸ್ಕಿ ದೂರವಾಣಿ ಮಾತುಕತೆ
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ದೂರವಾಣಿ ಮೂಲಕ ಸುಮಾರು 35 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ರಷ್ಯಾ ದೇಶ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಎರಡನೇ ಬಾರಿಗೆ ಪ್ರಧಾನಿ ಮೋದಿಯವರು ಝೆಲೆನ್ಸ್ಕಿ ಜತೆ ಮಾತನಾಡಿದ್ದಾರೆ. ಹಾಗೆಯೇ, ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.
ಅತ್ತ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವೀಟ್ ಮಾಡಿ, ತಾವು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದನ್ನು ಖಚಿತಪಡಿಸಿದ್ದಾರೆ. ರಷ್ಯಾದ ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರವನ್ನು ಉಕ್ರೇನ್ ನೀಡುತ್ತಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದೆ.
ನಾವು ಭಾರತೀಯರ ಸ್ಥಳಾಂತರಕ್ಕೆ ಸಹಕಾರ ಕೊಟ್ಟಿದ್ದಕ್ಕೆ ಭಾರತದ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ರಷ್ಯಾದೊಂದಿಗೆ ಉನ್ನತ ಮಟ್ಟದಲ್ಲಿ ಶಾಂತಿ ಮಾತುಕತೆ ನಡೆಸಲು ಸಿದ್ಧ ಇರುವ ಉಕ್ರೇನ್ ಬದ್ಧತೆಯನ್ನೂ ಶ್ಲಾಘಿಸಿದ್ದಾರೆ. ಉಕ್ರೇನ್ಗೆ ಬೆಂಬಲ ನೀಡಿದ್ದಕ್ಕೆ ಭಾರತ ಮತ್ತು ಭಾರತದ ಪ್ರಧಾನಿಯವರಿಗೆ ಕೃತಜ್ಞತೆಗಳು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.












Click it and Unblock the Notifications