Pahalgam Attack: ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಚೀನಾ
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಹತ್ಯೆಯಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಯುದ್ಧದ ಭೀತಿ ಎದುರಾಗಿರುವ ಬೆನ್ನಲ್ಲೇ ಪಕ್ಕದ ರಾಷ್ಟ್ರ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಸಂಯಮವನ್ನು ಕಾಯ್ದುಕೊಳ್ಳಬೇಕು ಮತ್ತು ಶಾಂತಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದೆ.
ಪಾಕಿಸ್ತಾನದ ಮಿತ್ರ ರಾಷ್ಟ್ರವಾದ ಚೀನಾ, ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾನುವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಜೊತೆ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಲಹೆ ನೀಡಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ಪ್ರವಾಸಿಗರ ಗುಂಪನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು. ಭಯೋತ್ಪಾದಕ ಗುಂಪು, ದಿ ರೆಸಿಸ್ಟೆನ್ಸ್ ಫ್ರಂಟ್, ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಪ್ರತಿನಿಧಿ ಎಂದು ಗುರುತಿಸಿಕೊಂಡಿದೆ.

ಪಾಕಿಸ್ತಾನದ ಜೊತೆ ನಿಲ್ಲುತ್ತೇವೆ
ಚೀನಾದ ವಿದೇಶಾಂಗ ಸಚಿವಾಲಯದ ವಾಂಗ್ ಯಿ ಪಾಕಿಸ್ತಾನಕ್ಕೆ, ವಿಶೇಷವಾಗಿ ಅದರ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಚೀನಾದ ದೀರ್ಘಕಾಲದ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದರು. ಚೀನಾ ಯಾವಾಗಲೂ ಪಾಕಿಸ್ತಾನವನ್ನು ತನ್ನ ದೃಢವಾದ ಭಯೋತ್ಪಾದನಾ ವಿರೋಧಿ ಕ್ರಮಗಳಲ್ಲಿ ಬೆಂಬಲಿಸಿದೆ ಮತ್ತು ಪಾಕಿಸ್ತಾನದ ಸಮಂಜಸವಾದ ಭದ್ರತಾ ಕಾಳಜಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಎಂದು ಹೇಳಿದರು.
ಭಯೋತ್ಪಾದನಾ ದಾಳಿ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ವಾಂಗ್ ಒತ್ತಾಯಿಸಿದರು. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಯುದ್ಧವು ಎರಡೂ ದೇಶಗಳ ಮೂಲಭೂತ ಹಿತಾಸಕ್ತಿಗಳನ್ನು ಪೂರೈಸುವುದಿಲ್ಲ, ಶಾಂತಿ, ಸ್ಥಿರತೆ ಕಾಪಾಡುವುದಿಲ್ಲ ಎಂದ ಅವರು, ಎರಡೂ ದೇಶಗಳು ಸಂಯಮದಿಂದ ಇರಬೇಕು, ಎರಡೂ ದೇಶದ ನಾಯಕರು ಪರಸ್ಪರ ಭೇಟಿ ಮಾಡುವ ಮೂಲಕ ಪರಿಸ್ಥಿತಿಯನ್ನು ಶಾಂತವಾಗಿಸಬೇಕು ಎಂದು ಹೇಳಿದರು.
ಈ ಘಟನೆಯಿಂದ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ನೀರು ಹಂಚಿಕೆ ಒಪ್ಪಂದವಾದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ಅಟ್ಟಾರಿಯಲ್ಲಿ ಏಕೈಕ ಕಾರ್ಯಾಚರಣಾ ಭೂ ಗಡಿ ದಾಟುವಿಕೆಯನ್ನು ಮುಚ್ಚಲಾಗಿದೆ.
ಭಾರತದ ಈ ಕ್ರಮಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಯುದ್ಧದ ಕ್ರಿಯೆ ಎಂದಿರುವ ಪಾಕಿಸ್ತಾನ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಮತ್ತು ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.












Click it and Unblock the Notifications