ಬ್ಯಾಂಕಾಕ್ ಬಾಂಬ್ ಸ್ಫೋಟ: 2 ಭಾರತೀಯರ ವಿಚಾರಣೆ
ಬ್ಯಾಂಕಾಕ್, ಸೆ. 07: ಇತ್ತೀಚಿಗೆ ಇಲ್ಲಿನ ದೇಗುಲವೊಂದರ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಭಾರತೀಯರನ್ನು ಥಾಯ್ ಪೊಲೀಸರು ಪ್ರಶ್ನಿಸಿದ್ದಾರೆ.
ಇಬ್ಬರು ಭಾರತೀಯರನ್ನು ವಶಕ್ಕೆ ಪಡೆದು ಪಾಸ್ ಪೋರ್ಟ್ ವಿವರದ ಬಗ್ಗೆ ಥಾಯ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಂಕಿತನ ಜೊತೆಗೆ ಇವರಿಬ್ಬರಿಗೂ ಸಂಪರ್ಕವಿರುವ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮಿಕ್ಕಂತೆ ಬಂಧಿತರ ಬಗ್ಗೆ ಯಾವುದೇ ವಿಷಯವನ್ನು ಹೊರ ಹಾಕಿಲ್ಲ. ವಿಚಾರಣೆಗಾಗಿ ಮಾತ್ರ ವಶಕ್ಕೆ ಪಡೆಯಲಾಗಿದೆಯೇ? ಅಥವಾ ಇಬ್ಬರನ್ನು ಬಂಧಿಸಲಾಗಿದೆಯೇ? ಎಂಬುದರ ಬಗ್ಗೆ ಕೂಡಾ ಸುಳಿವು ಸಿಕ್ಕಿಲ್ಲ. [ಬ್ಯಾಂಕಾಕಿನಲ್ಲಿ ಬಾಂಬ್ ಸ್ಫೋಟದ ದಿನದ ಸುದ್ದಿ]

ಬಾಂಬ್ ಸ್ಫೋಟ ಪ್ರಕರಣದ ಶಂಕಿತನೊಬ್ಬನ ಜೊತೆ ಬಂಧಿತರ ಪೈಕಿ ಒಬ್ಬ ವ್ಯಕ್ತಿ ನಿರಂತರವಾಗಿ ಫೋನ್ ಕರೆ ಮಾಡಿರುವುದು ತಿಳಿದು ಬಂದಿದೆ. ಘಟನೆ ನಂತರ ಥಾಯ್ಲೆಂಡ್ ತೊರೆಯುವುದಕ್ಕೂ ಮುನ್ನ ಕೂಡಾ ಇವರಿಬ್ಬರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ಥಾಯ್ಲೆಂಡಿನ ತನಿಖಾ ಸಂಸ್ಥೆ ಜೊತೆ ಭಾರತದ ಗುಪ್ತಚರ ಇಲಾಖೆ ನಿರಂತರ ಸಂಪರ್ಕದಲ್ಲಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸೆಂಟ್ರಲ್ ಬ್ಯಾಂಕಾಕ್ನ ಎರ್ವಾನ್ ದೇಗುಲದ ಹೊರಗೆ ಆಗಸ್ಟ್ 17ರ ಸಂಜೆ ಭಾರಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 130ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.(ಒನ್ ಇಂಡಿಯಾ ಸುದ್ದಿ)












Click it and Unblock the Notifications