ಯಡಿಯೂರಪ್ಪ ಸರ್ವಪಕ್ಷಗಳ ಸಭೆ ಕರೆದರು, ಮೋದಿ ಕರೆಯುವುದು ಯಾವಾಗ?
ದೇಶ ಕೊರೊನಾ ಮೆಡಿಕಲ್ ಎಮರ್ಜೆನ್ಸಿ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಸರ್ವಪಕ್ಷಗಳ ಸಭೆಯನ್ನು ವಿಧಾನಸೌಧದಲ್ಲಿ (ಮಾರ್ಚ್ 29) ಕರೆದಿದ್ದಾರೆ. ಸಭೆ, ಸಮ್ಮೇಳನ ಸಭಾಂಗಣದಲ್ಲಿ ಚಾಲ್ತಿಯಲ್ಲಿದೆ.
ಈ ಸಭೆಯನ್ನು ವಿರೋಧ ಪಕ್ಷಗಳ ಒತ್ತಾಯದ ನಂತರ ಸಿಎಂ ಕರೆದಿದ್ದರೂ, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆದ ಮೊದಲ ಸಿಎಂ ಎಂದೆನಿಸಿಕೊಂಡರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್. ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಆದಿಯಾಗಿ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
ಕೊರೊನಾ: quarantineಗೆ 17 ಹೋಟೆಲ್ ಗುರುತಿಸಿದ ಬಿಬಿಎಂಪಿ
ಆದರೆ, ಯಡಿಯೂರಪ್ಪ ಮಾಡಿದ ಕೆಲಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಾರಾ ಎನ್ನುವುದಿಲ್ಲಿ ಪ್ರಶ್ನೆ. ಯಾಕೆಂದರೆ, ಇಡೀ ದೇಶಕ್ಕೆ ದೇಶವೇ ಈ ಮಾರಣಾಂತಿಕ ವೈರಸ್ ನಿಂದ ಜರ್ಝರಿತವಾಗಿದೆ.
ಈ ವೈರಸ್ ಯಾವ ಮಟ್ಟಿಗೆ ಮರಣ ಮೃದಂಗ ಭಾರಿಸಬಹುದು ಎನ್ನುವುದನ್ನು ಅನುಭವಿ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದ ಯಡಿಯೂರಪ್ಪ, ಮೋದಿ ಲಾಕ್ ಡೌನ್ ಘೋಷಿಸುವ ಮೊದಲೇ, ಅದನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದರು. ಆ ಮೂಲಕ, ಲಾಕ್ ಡೌನ್ ಆದ ಮೊದಲ ರಾಜ್ಯ ಕರ್ನಾಟಕವಾಗಿತ್ತು.
ಪ್ರಧಾನಿಗಳು ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದಾಗ ಸೋನಿಯಾ ಮತ್ತು ರಾಹುಲ್ ಗಾಂಧಿ ಅದನ್ನು ಸ್ವಾಗತಿಸಿದ್ದರು. ಇದೊಂದು ಸೂಕ್ತವಾದ ಹೆಜ್ಜೆ ಎಂದು ಶ್ಲಾಘಿಸಿದ್ದರು. ಸೋನಿಯಾ, ಪ್ರಧಾನಿಗೆ ಪತ್ರ ಬರೆದು, ತಮ್ಮ ಬೆಂಬಲವನ್ನೂ ಸೂಚಿಸಿದ್ದರು.
ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್
ಇಂತಹ ಪರಿಸ್ಥಿತಿ ದೇಶಕ್ಕೆ ಎದುರಾಗಬಹುದು ಎನ್ನುವುದನ್ನು ಯಾರೂ ಊಹಿಸಿರಲಿಕ್ಕಿಲ್ಲ. ಬಿಎಸ್ವೈ ಕರೆದಂತೆ ಮೋದಿ, ಸರ್ವಪಕ್ಷಗಳ ಸಭೆಯನ್ನು ಕರೆಯುವುದು ಯಾವಾಗ? ಎಲ್ಲಾ ಪಕ್ಷಗಳಲ್ಲೂ ಅನುಭವಿಗಳು ಇದ್ದೇ ಇರುತ್ತಾರೆ. ಅವರದ್ದೇ ಆದ ಸಲಹೆ, ಟಿಪ್ಪಣಿಗಳು ಈ ವಿಚಾರದಲ್ಲಿ ಇರಬಹುದು. ಅದು, ಕೊರೊನಾ ಮಟ್ಟಹಾಕಲು ಉಪಯೋಗಕ್ಕೆ ಬರಲೂ ಬಹುದು.
ಕೊರೊನಾ ವಿಚಾರದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಲವತ್ತು ದಿನಗಳ ಹಿಂದೆಯೇ ಸರಕಾರವನ್ನು ಎಚ್ಚರಿಸಿದ್ದರು. ಆದರೆ, ಕೇಂದ್ರ ಸರಕಾರ ಈ ವಿಚಾರಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿರಲಿಲ್ಲ. ಅಂದೇ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ನಿಲ್ಲಿಸಿದ್ದರೆ, ದೇಶವನ್ನು ಲಾಕ್ ಡೌನ್ ಮಾಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎನ್ನುವ ವಾದವೂ ಅಲ್ಲಲ್ಲಿ ಇದೆ.
ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸರಕಾರಕ್ಕೆ ಮುಂದಕ್ಕೆ ಹೋಗಬೇಕಿದೆ. ಸರ್ವಪಕ್ಷಗಳ ಸಭೆಯಲ್ಲಿ ಹಲವು ಉಪಯುಕ್ತವಾದ ಸಲಹೆಗಳು ಬರಬಹುದು. ಇದು ಎಲ್ಲಾ ರಾಜಕೀಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿರಬೇಕಾದ ತುರ್ತು ಸಮಯವಿದು. ಯಾಕೆಂದರೆ ದೇಶ ಚೆನ್ನಾಗಿದ್ದರೆ ತಾನೇ, ರಾಜಕೀಯ, ರಾಜಕೀಯ ನಾಯಕರು.