ತೆಂಗಿನ ಕಾಯಿ ಚಿಪ್ಪಿನಲ್ಲೂ ಇಡ್ಲಿ ಮಾಡಬಹುದು! ಇದರ ರೆಸಿಪಿ ಮತ್ತು ಆರೋಗ್ಯ ಲಾಭಗಳ ಮಾಹಿತಿ ಇಲ್ಲಿದೆ
ಇಡ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿ ತಯಾರಿಸಲ್ಪಡುವ ಆಹಾರ. ಇದನ್ನು ಹೆಚ್ಚಾಗಿ ಬೆಳಗ್ಗಿನ ಉಪಹಾರವಾಗಿ ಸೇವಿಸಲಾಗುತ್ತದೆ. ಜ್ವರ ಬಂದಾಗ, ಹೊಟ್ಟೆ ಸಮಸ್ಯೆ ಎದುರಾದಾಗ ಸಾಮಾನ್ಯವಾಗಿ ಇಡ್ಲಿ ಸೇವಿಸುವ ಸಲಹೆಯನ್ನೇ ನೀಡಲಾಗುತ್ತದೆ. ಇಡ್ಲಿ ಹಿಟ್ಟನ್ನು ಹುದುಗಿಸಿ, ಆವಿಯಲ್ಲಿ ಬೇಯಿಸಲಾಗತ್ತದೆ ಅಂದರೆ ಸ್ಟೀಮ್ ಮಾಡಲಾಗುತ್ತದೆ. ಇಡ್ಲಿಯನ್ನು ಫಟಾಫಟ್ ಎಂದು ತಯರಿಸಲಾಗುವುದಿಲ್ಲ. ಯಾಕೆಂದರೆ ಇದಕ್ಕೆ ಒಂದು ದಿನದ ಮೊದಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.
ಭಾರತವು ತೆಂಗಿನಕಾಯಿಯನ್ನು ಅತಿಯಾಗಿ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ. ನಮ್ಮಲ್ಲಿ ಬಹುತೇಕ ಅಡುಗೆಯಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ನೀವು ಇಲ್ಲಿಯವರೆಗೆ ತೆಂಗಿನಕಾಯಿ ಬಳಸಿ ಚಿಪ್ಪನ್ನು ಎಸೆಯುತ್ತಿದ್ದರೆ, ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಇದೀಗ ದಕ್ಷಿಣ ಭಾರತೀಯ ಖಾದ್ಯವಾದ ಇಡ್ಲಿಯೊಂದಿಗೆ ಹೊಸ ಆವಿಷ್ಕಾರವನ್ನು ಮಾಡಲಾಗುತ್ತಿದೆ. ಹೌದು, ಕೊಕೊನೆಟ್ ಶೆಲ್ ಇಡ್ಲಿ ಅಂದರೆ ತೆಂಗಿನ ಚಿಪ್ಪನ್ನು ಬಳಸಿ ತಯಾರಿಸಲಾಗುವ ಇಡ್ಲಿ.ಈಗ ಈ ಇಡ್ಲಿಗೆ ಭಾರೀ ಡಿಮ್ಮ್ಯಾಂಡ್. ಇದು ನೋಡಲು ಆಕರ್ಷಕವಾಗಿರುವುದಲ್ಲದೆ, ರುಚಿಯೂ ಅದ್ಭುತವಾಗಿರುತ್ತದೆ.

ಇಡ್ಲಿಯನ್ನು ಸಾಮಾನ್ಯವಾಗಿ ಇಡ್ಲಿ ಪಾತ್ರೆಯಲ್ಲಿ ತಯಾರಿಸಲಾಗುತ್ತದೆ. ಆದರೆ ಇಲ್ಲಿ, ಇದನ್ನು ಇಡ್ಲಿ ತಟ್ಟೆ, ಅಥವಾ ಅಚ್ಚಿನ ಬದಲು ತೆಂಗಿನ ಚಿಪ್ಪಿನಲ್ಲಿ ಬೇಯಿಸಲಾಗುತ್ತದೆ. ಇದು ಇಡ್ಲಿಗೆ ವಿಶಿಷ್ಟವಾದ ತೆಂಗಿನಕಾಯಿ ಪರಿಮಳವನ್ನು ನೀಡುತ್ತದೆ. ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಸಾಮಾನ್ಯ ಇಡ್ಲಿಗೆ ಬಳಸುವ ಹಿಟ್ಟನ್ನೇ ಕೊಕನೆಟ್ ಶೆಲ್ ಇಡ್ಲಿಗೂ ಬಳಸುವುದು. ಆದರೆ ಬೇಯಿಸುವುದು ಮಾತ್ರ ತೆಂಗಿನಕಾಯಿ ಚಿಪ್ಪಿನಲ್ಲಿ.
ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು:
2 ಕಪ್ ಅಕ್ಕಿ
1/2 ಕಪ್ ಉದ್ದಿನ ಬೇಳೆ
1/4 ಚಮಚ ಮೆಂತ್ಯೆ ಕಾಳುಗಳು
ಅಗತ್ಯವಿರುವಷ್ಟು ನೀರು
2 ಟೇಬಲ್ ಸ್ಪೂನ್ ಎಣ್ಣೆ
ಒಂದು ತೆಂಗಿನಕಾಯಿ ಚಿಪ್ಪು
ಇಡ್ಲಿ ತಯಾರಿಸುವ ವಿಧಾನ:
ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮೆಂತ್ಯ ಬೀಜಗಳೊಂದಿಗೆ ರುಬ್ಬಿ ಕನಿಷ್ಠ 8 ಗಂಟೆಗಳ ಹುದುಗಲು ಬಿಡಿ. ಬೆಳಿಗ್ಗೆ ಆ ಹಿಟ್ಟಿಗೆ ಅಗತ್ಯವಿದ್ದಷ್ಟು ಅಥವಾ ನಿಮ್ಮ ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿಕೊಳ್ಳಿ.
ಇಡ್ಲಿ ಬೇಯಿಸಲು ತೆಂಗಿನ ಚಿಪ್ಪನ್ನು ಬಳಸುವುದು ಹೇಗೆ?
- ತೆಂಗಿನ ಕಾಯಿಯನ್ನು ಸಂಪೂರ್ಣವಾಗಿ ತೆಗೆದು ಚಿಪ್ಪುಗಳ ಮೇಲಿರುವ ನಾರನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಿ.
-ಈಗ ಚಿಪ್ಪನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
- ನಂತರ ತೆಂಗಿನ ಚಿಪ್ಪುಗಳನ್ನು ಚೆನ್ನಾಗಿ ಒರೆಸಿ ಎಣ್ಣೆ ಹಚ್ಚಿ.
- ಸ್ಟೀಮರ್ನಲ್ಲಿ ನೀರನ್ನು ಬಿಸಿ ಮಾಡಿ.
- ಚಿಪ್ಪಿಗೆ ಅರ್ಧದಷ್ಟು ಹಿಟ್ಟು ಸೇರಿಸಿ.
- ಇಡ್ಲಿ ತಟ್ಟೆ ಒಳಗೆ ಚಿಪ್ಪನ್ನು ನಿಧಾನವಾಗಿ ಇರಿಸಿ.
- ಮಧ್ಯಮ ಉರಿಯಲ್ಲಿ 10-15 ನಿಮಿಷ ಬೇಯಿಸಿ.
- ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾದ ನಂತರ ಇಡ್ಲಿಗಳನ್ನು ಹೊರತೆಗೆಯಿರಿ.
ತೆಂಗಿನ ಚಿಪ್ಪಿನಲ್ಲಿ ಇಡ್ಲಿಯನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಾಗುವುದು.
ಆಹಾರಕ್ಕೆ ವಿಶೇಷ ಪರಿಮಳ ನೀಡುತ್ತದೆ:
ತೆಂಗಿನ ಚಿಪ್ಪಿನಲ್ಲಿ ಆಹಾರ ಬೇಯಿಸುವುದು ಮತ್ತು ತಿನ್ನುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ತೆಂಗಿನ ಚಿಪ್ಪಿನಲ್ಲಿ ಇಡ್ಲಿ ಸೇರಿದಂತೆ ಏನೇ ಆಹಾರ ಬೇಯಿಸಿದರೂ ಅದು ಆಹಾರಕ್ಕೆ ಒಂದು ರೀತಿಯ ಸೂಕ್ಷ್ಮವಾದ ಪರಿಮಳವನ್ನು ವರ್ಗಾಯಿಸುತ್ತದೆ. ಇದು ಆಹಾರದ ರುಚಿಯನ್ನು ಕೂಡಾ ದುಪ್ಪಟ್ಟು ಮಾಡುತ್ತದೆ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:
ತೆಂಗಿನ ಚಿಪ್ಪಿನಲ್ಲಿ ಇಡ್ಲಿಯನ್ನು ಬೇಯಿಸಿದಾಗ, ಚಿಪ್ಪಿನಲ್ಲಿರುವ ನೈಸರ್ಗಿಕ ನಾರಿನ ಅಂಶವು ಆಹಾರದ ಜೊತೆ ಹೊಟ್ಟೆ ಸೇರಿಕೊಳ್ಳುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ನಿಧಾನವಾಗಿ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕೂಡಾ ಹೇಳಲಾಗುತ್ತದೆ.
ಉದರದ ಆರೋಗ್ಯ ಕಾಪಾಡುವುದು:
ಆರೋಗ್ಯ ತಜ್ಞರ ಪ್ರಕಾರ, ತೆಂಗಿನ ಚಿಪ್ಪುಗಳು ನಿಮ್ಮ ಹೊಟ್ಟೆಗೆ ಪ್ರಯೋಜನಕಾರಿಯಾದ ಪೋಷಕಾಂಶಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ. ಮಲಬದ್ಧತೆಯಂತಹ ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುತ್ತಿರುವವರು ತಟ್ಟೆ, ಪಾತ್ರೆಯ ಬದಲಿಗೆ ತೆಂಗಿನ ಚಿಪ್ಪನ್ನು ಬಳಸಬೇಕು. ಆಗ ತೆಂಗಿನ ಕಾಯಿ ಚಿಪ್ಪಿನಲ್ಲಿರುವ ಫೈಬರ್ ಮತ್ತು ವಿಟಮಿನ್ ಎ, ಡಿ, ಇ ಮತ್ತು ಕೆ ಅಂಶವು ನಿಮ್ಮ ಕರುಳಿನ ಚಲನೆಯನ್ನು ನಿಧಾನವಾಗಿ ಸುಧಾರಿಸುತ್ತದೆ ಎನ್ನಲಾಗಿದೆ.
ಪರಿಸರ ಸ್ನೇಹಿ:
ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದಾಗಿ ನಮ್ಮ ಗ್ರಹ ಅಂದರೆ ಭೂಮಿಯ ಪರಿಸರ ಹಾಳಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಜನರು ಜನರು ಪರಿಸರ ಸ್ನೇಹಿ ಕ್ಯಾರಿ ಬ್ಯಾಗ್ಗಳು ಮತ್ತು ಕಟ್ಲರಿಗಳಿಗೆ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ತೆಂಗಿನ ಚಿಪ್ಪುಗಳು ಪರಿಸರ ಮತ್ತು ಮಾನವ ದೇಹಕ್ಕೂ ಉತ್ತಮವಾದ ಮತ್ತೊಂದು ಸ್ಮಾರ್ಟ್ ಆಯ್ಕೆಯಾಗಿರಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications