Bengaluru: ಬೆಂಗಳೂರು ಪೂರ್ವ ನಗರ ಪಾಲಿಕೆ: ಮಳೆ ನೀರು ನಿಲ್ಲುವ ಪ್ರದೇಶಗಳಲ್ಲಿ ತಕ್ಷಣ ಪರಿಹಾರಕ್ಕೆ ಸೂಚನೆ
Bengaluru: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬುಧವಾರ ಸುರಿದ ಮಳೆಯ ಹಿನ್ನೆಲೆಯಲ್ಲಿ ಮಳೆ ನೀರು ನಿಲ್ಲುವ ತಗ್ಗು ಪ್ರದೇಶಗಳಲ್ಲಿನ ಸಮಸ್ಯೆಗಳು ಹಾಗೂ ಸಾರ್ವಜನಿಕರಿಂದ ಬಂದ ದೂರುಗಳಿಗೆ ಶಾಶ್ವತ ಪರಿಹಾರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಏಪ್ರಿಲ್ 30ರ ಗುರುವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖವಾಗಿ ನೀರು ನಿಲ್ಲುವ ತಗ್ಗು ಪ್ರದೇಶಗಳು, ರಸ್ತೆಗಳು ಹಾಗೂ ಅಂಡರ್ಪಾಸ್ಗಳಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಗಳಿಗೆ ನಿರ್ದೇಶನ ನೀಡಿದ್ದಾರೆ.

ಪರಿಶೀಲಿಸಲಾದ ಪ್ರಮುಖ ಸ್ಥಳಗಳು
* ದೊಡ್ಡನೆಕ್ಕುಂದಿ ರೈಲ್ವೆ ಅಂಡರ್ಪಾಸ್
* ಮಾರತ್ ಹಳ್ಳಿ ಅಂಡರ್ಪಾಸ್
* ಆಶ್ರಯ ಲೇಔಟ್ ಹಂತ-2
* ಸೇಲಂ ಬ್ರಿಡ್ಜ್
* ದೇವರಬೀಸನಹಳ್ಳಿ (ನ್ಯೂ ಹಾರಿಜನ್ ಕಾಲೇಜ್ ಸಮೀಪದ ಮಳೆ ನೀರು ಕಾಲುವೆ)
* ಬೋಗನಹಳ್ಳಿ ಗ್ರಾಮದ ಸರ್ವೆ ನಂ.18
* ಸಕ್ರಾ ಆಸ್ಪತ್ರೆ ರಸ್ತೆ
Bengaluru: ಪ್ರಮುಖ ಸೂಚನೆಗಳು
ಈ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಮಳೆ ಸಂದರ್ಭದಲ್ಲಿ ನೀರು ನಿಲ್ಲುವ ಮೂಲಕ ಸಮಸ್ಯೆ ಉಂಟಾಗುತ್ತಿದ್ದು, ಈ ಪ್ರದೇಶಗಳಲ್ಲಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರಿಶೀಲನೆ ವೇಳೆ ಆಯುಕ್ತರು ಕೆಳಕಂಡ ಪರಿಹಾರ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ಸೂಚಿಸಿದ್ದಾರೆ. ರಸ್ತೆಬದಿ ಚರಂಡಿಗಳು ಮತ್ತು ಮಳೆ ನೀರು ಕಾಲುವೆಗಳಲ್ಲಿ ಹೂಳು, ಕಸ ಹಾಗೂ ಇನ್ನಿತರೆ ಅಡೆತಡೆಗಳನ್ನು ತಕ್ಷಣ ತೆರವುಗೊಳಿಸುವುದು.
ಚರಂಡಿಗಳು ಮತ್ತು ಕಾಲುವೆಗಳಿಂದ ಹೊರ ತೆಗೆದ ಹೂಳು, ಮಣ್ಣು ಮತ್ತು ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡುವುದು. ರಸ್ತೆ ಮೇಲಿನ ಮಳೆ ನೀರು ಸರಾಗವಾಗಿ ಚರಂಡಿಗೆ ಹರಿಯಲು ಕರ್ಬ್ ಪ್ರವೇಶಗಳಲ್ಲಿನ ಗ್ರೇಟಿಂಗ್ ಮತ್ತು ಅಂಡರ್ ಪಾಸ್ ಗ್ರೇಟಿಂಗ್ ಸ್ವಚ್ಛಗೊಳಿಸುವುದು ಹಾಗೂ ಎಲ್ಲಾ ಡ್ರೈನೇಜ್ ಚೇಂಬರ್ಗಳನ್ನು ಸ್ವಚ್ಛಗೊಳಿಸಿ ನೀರಿನ ಸರಾಗ ಹರಿವಿಗೆ ಕ್ರಮವಹಿಸುವುದು ಹಾಗೂ ಅಗತ್ಯವಿರುವ ಕಡೆ ಡೆಬ್ರಿಸ್ ಕ್ಯಾಚರ್ ಅಳವಡಿಸುವುದಕ್ಕೆ ಸೂಚನೆ ನೀಡಲಾಗಿದೆ.
ಮುಂದುವರಿದು ನೀರು ನಿಲ್ಲುವ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ಗಮನ ನೀಡಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು, ದೊಡ್ಡನೆಕ್ಕುಂದಿ ರೈಲ್ವೆ ಅಂಡರ್ಪಾಸ್ನಲ್ಲಿ ಭವಿಷ್ಯದ ಸಮಸ್ಯೆ ತಡೆಗಟ್ಟಲು ಕಾಂಕ್ರೀಟ್ ತಡೆಗೋಡೆ ನಿರ್ಮಾಣಕ್ಕೆ ಕ್ರಮ, ಚರಂಡಿಗಳು ಮತ್ತು ಕಾಲುವೆಗಳ ಅಕ್ಕಪಕ್ಕದಲ್ಲಿ ಬ್ಲಾಕ್ ಸ್ಪಾಟ್ ಆಗದಂತೆ ಕ್ರಮವಹಿಸುವುದು ಹಾಗೂ ನೀರು ನಿಲ್ಲುವ ತಗ್ಗು ಪ್ರದೇಶಗಳಲ್ಲಿ ತ್ವರಿತ ಕ್ರಮಕ್ಕಾಗಿ ಅಗತ್ಯವಿರುವ ಪಂಪ್, ಯಂತ್ರಗಳು, ಸಲಕರಣೆ ಹಾಗೂ ಮಾನವ ಸಂಪನ್ಮೂಲವನ್ನು ವ್ಯವಸ್ಥೆ ಮಾಡಿಕೊಂಡು ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವುದು. ಹಾಗೂ 24*7 ಗಂಟೆಯೂ ವಿಪತ್ತು ನಿರ್ವಹಣೆ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರುವಂತೆ ಸೂಚನೆ ನೀಡಲಾಗಿದೆ.
ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ನೀರು ನಿಲ್ಲುವ ಪ್ರದೇಶಗಳಲ್ಲಿನ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಅಧಿಕಾರಿಗಳು ಕಾರ್ಯತತ್ಪರಾಗಬೇಕೆಂದು ಆಯುಕ್ತರು ತಿಳಿಸಿದ್ದಾರೆ. ಆಯುಕ್ತರ ಸ್ಥಳ ಪರಿಶೀಲನೆ ವೇಳೆಯಲ್ಲಿ ಕಾರ್ಯಪಾಲಕ ಎಂಜಿನಿಯರಾದರಾದ ಉದಯ್ ಚೌಗಲೆ, ರವಿಕುಮಾರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರರು ಹಾಜರಿದ್ದರು.












Click it and Unblock the Notifications