ಗಾಲ್ವನ್ನಲ್ಲಿ ಯೋಧರ ಘರ್ಷಣೆಯ ಕಾರಣ ಬಹಿರಂಗ
ನವದೆಹಲಿ, ಜೂನ್ 17 : ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿದೆ. ಭಾರತದ 20 ಯೋಧರು ಈ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಈ ಸಂಘರ್ಷಕ್ಕೆ ಕಾರಣವೇನು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಯೋಧರ ಸಂಘರ್ಷಕ್ಕೆ ಚೀನಾ ಯೋಧರು ವಿವಾದಿತ ಪ್ರದೇಶದಲ್ಲಿ ವೀಕ್ಷಣಾ ಗೋಪುರ ನಿರ್ಮಾಣ ಮಾಡಿದ್ದು ಕಾರಣ ಎಂಬ ಮಾಹಿತಿ ಸಿಕ್ಕಿದೆ. ಭಾರತೀಯ ಸೇನೆ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಚೀನಾದವರು ಗಲಾಟೆಗೆ ಮುಂದಾಗಿದ್ದಾರೆ.
ಚೀನಾ ಅಂತರಾಷ್ಟ್ರೀಯ ಗಡಿ ಒಪ್ಪಂದ ಉಲ್ಲಂಘನೆ ಮಾಡಿ ಬೆಟ್ಟದ ಮೇಲೆ ವೀಕ್ಷಣಾ ಗೋಪುರ ನಿರ್ಮಾಣ ಮಾಡಿತು. ಆಗ ಕರ್ನಲ್ ಬಿ. ಸಂತೋಷ್ ಬಾಬು ಅವರು ಕೆಲವೇ ಸೈನಿಕರ ಜೊತೆ ಸ್ಥಳಕ್ಕೆ ತೆರಳಿದರು. ಇಲ್ಲಿ ಗೋಪುರ ನಿರ್ಮಾಣ ಮಾಡುವಂತಿಲ್ಲ ಎಂದು ಹೇಳಿದ್ದರು.

ಗಾಲ್ವನ್ ನದಿಯ ಅಂಚಿನಲ್ಲಿದ್ದ ಗೋಪುರವನ್ನು ತೆರವು ಮಾಡಲು ಪ್ರಯತ್ನವನ್ನು ನಡೆಸಿದರು. ಆಗ ಆಕ್ರೋಶಗೊಂಡ ಚೀನಾದ ಸೈನಿಕರು ಗಲಾಟೆ ಮಾಡಿ, ಹಲ್ಲೆ ಆರಂಭಿಸಿದರು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.
ಚೀನಾ ಯೋಧರು ಗಲಾಟೆ ಆರಂಭಿಸಿದಾಗ ಭಾರತದ ಇನ್ನೂ ಹಲವು ಯೋಧರು ಸ್ಥಳಕ್ಕೆ ತೆರಳಿದರು. ಸುಮಾರು ತಾಸುಗಳ ಕಾಲ ಎರಡೂ ಸೇನೆಯ ಯೋಧರ ನಡುವೆ ಗಲಾಟೆ ನಡೆದಿದೆ. ಈ ಘರ್ಷಣೆಯಲ್ಲಿ ಬಿ. ಸಂತೋಷ್ ಬಾಬು ಸೇರಿ 20 ಯೋಧರು ಹುತಾತ್ಮರಾಗಿದ್ದಾರೆ.
ಭಾರತದಂತೆ ಚೀನಾದ ಯೋಧರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಎಷ್ಟು ಜನರು ಮೃತಪಟ್ಟಿದ್ದಾರೆ? ಎಂಬ ಮಾಹಿತಿಯನ್ನು ಚೀನಾ ನೀಡಿಲ್ಲ. ಆದರೆ ಅಮೆರಿಕದ ಗುಪ್ತಚರ ಇಲಾಖೆ 35 ಚೀನಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಶುಕ್ರವಾರ ಎರಡೂ ಸೇನೆಗಳ ಮೇಜರ್ಗಳ ಮಟ್ಟದ ಸಭೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಸೇನೆಗಳು ಈಗಿರುವ ಪ್ರದೇಶದಿಂದ ಒಂದು ಕಿ. ಮೀ. ದೂರಕ್ಕೆ ಸಾಗಿ ಗಡಿಯಲ್ಲಿನ ಪರಿಸ್ಥಿತಿ ಶಾಂತಗೊಳಿಸುವ ಸಾಧ್ಯತೆ ಇದೆ.












Click it and Unblock the Notifications