ಸಂಪುಟದಿಂದ 'ಔಟ್' ಆಗಬೇಕಿದ್ದ ಉಮಾಭಾರತಿ ಬಚಾವ್ ಆಗಿದ್ದು ಹೀಗೆ
Recommended Video

ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಗಂಗಾ ಶುದ್ದೀಕರಣ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲವೇ? ಭಾನುವಾರ (ಸೆ 3) ನಡೆದ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆಯತ್ತ ಅವಲೋಕಿಸಿದರೆ, ಮೋದಿ ವೇಗಕ್ಕೆ ಉಮಾಭಾರತಿ ಸ್ಪಂದಿಸುತ್ತಿಲ್ಲ ಎನ್ನುವುದು ಖಾತ್ರಿಯಾಗುತ್ತದೆ.
ಭಾರೀ ಪ್ರಚಾರ ಪಡೆದುಕೊಂಡಿದ್ದ ಗಂಗಾ ಶುದ್ದೀಕರಣ ಯೋಜನೆ, ಕುಂಟುತ್ತಾ ತೆವಳುತ್ತಾ ಸಾಗುತ್ತಿದ್ದದ್ದು ಮೋದಿ ಸರಕಾರಕ್ಕೆ ಭಾರೀ ಮುಜುಗರವನ್ನು ತಂದೊಡ್ಡಿತ್ತು. ಆ ಕಾರಣಕ್ಕಾಗಿ, ಖಾತೆಯನ್ನು ಸರಿಯಾಗಿ ನಿರ್ವಹಿಸದೇ ಇರುವುದಕ್ಕಾಗಿ (bad performance) ಬಿಜೆಪಿಯ ಫೈರ್ ಬ್ರಾಂಡ್ ಉಮಾಭಾರತಿ ಅವರನ್ನು ಸಂಪುಟದಿಂದ ಕೈಬಿಡಲು ಮೋದಿ ಟೀಮ್ ನಿರ್ಧರಿಸಿತ್ತು.
ಆದರೆ, ಕೊನೇ ಕ್ಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯಪ್ರವೇಶದಿಂದ ಉಮಾ ತಲೆದಂಡ ತಪ್ಪಿ, ಖಾತೆ ಬದಲಾವಣೆಯಾಯಿತು ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಭಾನುವಾರದ ಸಚಿವ ಸಂಪುಟ ವಿಸ್ತರಣೆಯ ವೇಳೆ ಉಮಾಭಾರತಿ ನಿರ್ವಹಿಸುತ್ತಿದ್ದ ಜಲ ಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ ಖಾತೆಯನ್ನು ನಿತಿನ್ ಗಡ್ಕರಿಯವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಉಮಾಗೆ ಕುಡಿಯುವ ನೀರು, ಸ್ವಚ್ಛತೆ ಖಾತೆ ನೀಡಲಾಗಿದೆ.
ಖಾತೆಯ ಕಳಪೆ ನಿರ್ವಹಣೆಗಾಗಿ ಉಮಾಭಾರತಿಯನ್ನು ಸಂಪುಟದಿಂದ ಕೈಬಿಡುವ ನಿರ್ಧಾರಕ್ಕೆ ಮೋದಿ ಮತ್ತು ಅಮಿತ್ ಶಾ ಬಂದಿದ್ದರು. ಆದರೆ, ಉತ್ತರಪ್ರದೇಶದಲ್ಲಿ ನಡೆದ ಬಿಜೆಪಿಯ ಮಾತೃ ಸಂಘಟನೆ RSS ಕಾರ್ಯಕ್ರಮದಲ್ಲಿ ಸಂಘದ ಮುಂಖಡರು ಉಮಾ ಕೈಬಿಡದಂತೆ ಶಾಗೆ ಸೂಚಿಸಿದ್ದಾರೆಂದು ವರದಿಯಾಗಿದೆ. ಮುಂದೆ ಓದಿ..

ಉಮಾರಂತಹ ಪ್ರಭಾವಿ ನಾಯಕಿಯನ್ನು ಕೈಬಿಡಬೇಡಿ
ಉಮಾಭಾರತಿಯಂತಹ ಪ್ರಭಾವಿ ನಾಯಕಿಯನ್ನು ಸಂಪುಟದಿಂದ ಕೈಬಿಟ್ಟರೆ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಮೇಲಾಗಿ ಅವರು ಹಿಂದುಳಿದ ವರ್ಗದವರಾಗಿರುವುದರಿಂದ ಪಕ್ಷದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಂಘಟನೆಯ ಮುಖಂಡರು ಅಮಿತ್ ಶಾಗೆ ಮಾರ್ಗದರ್ಶನ ನೀಡಿದ್ದಾರೆಂದು ತಿಳಿದುಬಂದಿದೆ.

ಗಂಗಾ ಪುನರುಜ್ಜೀವನ ಖಾತೆಯಿಂದ ಕೈಬಿಡುವುದಕ್ಕೆ ಅಭ್ಯಂತರ ಇಲ್ಲ
ಆದರೆ, ಗಂಗಾ ಪುನರುಜ್ಜೀವನ ಖಾತೆಯಿಂದ ಕೈಬಿಡುವುದಕ್ಕೆ ಅಭ್ಯಂತರ ಇಲ್ಲ ಎಂದಿರುವ RSS, ಆ ಮೂಲಕ ಮೋದಿ ಸರಕಾರ ವಹಿಸಿರುವ ಹೊಸ ಖಾತೆಯನ್ನಾದರೂ ಸರಿಯಾಗಿ ನಿರ್ವಹಿಸಲು ಇದು ಉಮಾಭಾರತಿಗೆ ಎಚ್ಚರಿಕೆ ನೀಡಿದಂತಾಗಲಿ ಎಂದು ಸಂಘಟನೆಯ ಪ್ರಮುಖರು ಅಮಿತ್ ಶಾಗೆ ತಿಳಿಸಿದ್ದಾರೆಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ತನ್ನ ಲೇಖನದಲ್ಲಿ ಹೇಳಿದೆ.

ಕಲ್ಯಾಣ್ ಸಿಂಗ್ ಬಿಜೆಪಿಯಿಂದ ದೂರವಾದ ಘಟನ ಉಲ್ಲೇಖನೆ
ಈ ಹಿಂದೆ ಉತ್ತರಪ್ರದೇಶದ ಸಿಎಂ ಆಗಿದ್ದ ಕಲ್ಯಾಣ್ ಸಿಂಗ್ ಬಿಜೆಪಿಯಿಂದ ದೂರವಾದ ಘಟನೆಯನ್ನು ಉಲ್ಲೇಖಿಸಿ ಅಮಿತ್ ಶಾಗೆ ರಾಜಕೀಯ ಪಾಠ ಮಾಡಿದ ಸಂಘಟನೆಯ ಪ್ರಮುಖರು, ಕೆಲವೊಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರಿಂದಾಗುವ ಪರಿಣಾಮದ ಬಗ್ಗೆ ಯೋಚಿಸಿ ನಿರ್ಧಾರಕ್ಕೆ ಬನ್ನಿ ಎಂದು ಅಮಿತ್ ಶಾಗೆ ಹೇಳಿದ್ದಾರೆ. ಕಲ್ಯಾಣ್ ಸಿಂಗ್ ಬಿಜೆಪಿಯಿಂದ ದೂರವಾದ ನಂತರ ಲೋಧಾ ಸಮುದಾಯ ಬಿಜೆಪಿಯಿಂದ ದೂರವಾಗಿತ್ತು.

ಖಾತೆ ಬದಲಾಗಿರುವುದಕ್ಕೆ ಸಿಟ್ಟಾಗಿರುವ ಉಮಾಭಾರತಿ
ಖಾತೆ ಬದಲಾಗಿರುವುದಕ್ಕೆ ಸಿಟ್ಟಾಗಿರುವ ಉಮಾಭಾರತಿ ಭಾನುವಾರ (ಸೆ 3) ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಗೈರಾಗಿದ್ದರು. ಮೋದಿಯವರ ಮಹತ್ವಾಕಾಂಕ್ಷೆಯ ಗಂಗಾ ಶುದ್ದೀಕರಣ ಯೋಜನೆಗಾಗಿ 'ಗಂಗಾ ಪುನರುಜ್ಜೀವನ' ಎನ್ನುವ ಹೊಸ ಖಾತೆಯನ್ನು ಮೋದಿ ಹುಟ್ಟುಹಾಕಿದ್ದರು.

RSS ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಸೆಪ್ಟಂಬರ್ ಒಂದರಿಂದ ಮೂರರವರೆಗೆ ಉತ್ತರಪ್ರದೇಶದ ವೃಂದಾವನದಲ್ಲಿ ನಡೆದ RSS ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ, ಸಂಘಟನೆಯ ಹಿರಿಯರು ಸೂಚನೆ ನೀಡುವ ಮೂಲಕ, ಅತ್ತ ಉಮಾಭಾರತಿಗೂ ಸಚಿವ ಸ್ಥಾನದ ಜವಾಬ್ದಾರಿ ಮತ್ತು ಮೋದಿ ವೇಗಕ್ಕೆ ತಕ್ಕಂತೆ ಕೆಲಸ ಮಾಡಿ ಎನ್ನುವ ಸೂಚನೆಯನ್ನು ನೀಡಿದಂತಾಗಿದೆ.












Click it and Unblock the Notifications