ರಾಹುಲ್ ಗಾಂಧಿ, ಕರುಣಾನಿಧಿ ಭೇಟಿ : ಐಸಿಯುನಲ್ಲಿ ರಾಜಕೀಯ?
Recommended Video
ಡಿಎಂಕೆ ಮುಖ್ಯಸ್ಥ, ಮಾಜಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಚೆನ್ನೈನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ವಿಐಪಿಗಳ ದಂಡೇ ವಯೋವೃದ್ದ ನಾಯಕನ ಆರೋಗ್ಯ ಬಂದು ವಿಚಾರಿಸುತ್ತಿದೆ. ವಿವಿಐಪಿಗಳು ಐಸಿಯು ಯುನಿಟಿನ ಒಳಗೊಗಿ ಕರುಣಾನಿಧಿಯನ್ನು ನೋಡಿಕೊಂಡು ಬರುತ್ತಿದ್ದಾರೆ.
ತುರ್ತು ನಿಗಾ ಘಟಕಕ್ಕೆ ಸಾಮಾನ್ಯವಾಗಿ ಯಾರನ್ನೂ ಬಿಡುವ ಪದ್ದತಿಯಿಲ್ಲ, ಆದರೂ ಉಪರಾಷ್ಟ್ರಪತಿ, ತಮಿಳುನಾಡು ರಾಜ್ಯಪಾಲರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿವಿಐಪಿಗಳು ಆಸ್ಪತ್ರೆಗೆ ಬಂದಾಗ, ಐಸಿಯು ಒಳಗೆ ಆಸ್ಪತ್ರೆಯ ಆಡಳಿತ ಮಂಡಳಿ ಹೇಗೆ ಹೋಗಲು ಅನುವು ಮಾಡಿಕೊಟ್ಟಿತು? ಕರುಣಾನಿಧಿಯವರ ಇಂತಾ ಸ್ಥಿತಿಯಲ್ಲೂ ಇದರ ಹಿಂದೆ ರಾಜಕೀಯ ಅಡಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕರುಣಾನಿಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ
ಇತ್ತ, ಕರುಣಾನಿಧಿ ಮತ್ತು ಕಟ್ಟಾ ಡಿಎಂಕೆ ಮುಖಂಡರು ಎಂದೂ ದೇವರನ್ನು ನಂಬಿದವರಲ್ಲ.. ನಂಬೋದು ಬಿಡೋದು ಅವರವರಿಗೆ ಬಿಟ್ಟ ವಿಚಾರ. ಆದರೆ, ಹಿಂದೂ ದೇವರು ಮತ್ತು ಪೂಜಾಪದ್ದತಿಗಳನ್ನು ಅಣಕಿಸುತ್ತಿದ್ದ ಮುಖಂಡರು ಈಗ ಕರುಣಾನಿಧಿ ಬೇಗ ಚೇತರಿಸಿಕೊಳ್ಳಲಿ ಎಂದು ದೇವರ ಮೊರೆ ಹೋಗುತ್ತಿರುವ ಮತ್ತು ಯಮಧರ್ಮರಾಜ ಹೋಗು..ಹೋಗು ಎಂದು ಬೊಬ್ಬಿಡುತ್ತಿರುವ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಕರುಣಾನಿಧಿಯ ಹಿರಿಯ ಮಗ ಅಳಗಿರಿ ಆವಾಗಾವಾಗ ಬಂದು ತಂದೆಯ ಆರೋಗ್ಯವನ್ನು ವಿಚಾರಿಸುತ್ತಿದ್ದರೆ, ಡಿಎಂಕೆ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಎಂದೇ ಬಿಂಬಿತವಾಗಿರುವ ಅವರ ಇನ್ನೊಬ್ಬ ಪುತ್ರ ಸ್ಟಾಲಿನ್ ಮತ್ತು ಪುತ್ರಿ ಕನಿಮೋಳಿ ಆಸ್ಪತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಜೀವನ್ಮರಣ ಹೋರಾಟ ನಡೆಸುತ್ತಿರುವ ಕರುಣಾನಿಧಿ ಆಸೆ ಕೊನೆಗೂ ಕೈಗೂಡಿತು!
ಆಸ್ಪತ್ರೆಗೆ ಬರುತ್ತಿರುವ ವಿವಿಐಪಿಗಳನ್ನು ಐಸಿಯು ಒಳಗೆ ಸ್ಟಾಲಿನ್ ಖುದ್ದು ಕರೆದುಕೊಂಡು ಹೋಗುತ್ತಿದ್ದಾರೆ, ಅವರ ಜೊತೆಗೆ ಫೋಟೊಗ್ರಾಫರ್, ಜೊತೆಗೆ ಈ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ ಬೇರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಕರುಣಾನಿಧಿಗೆ ಇದರಿಂದ ಸೋಂಕು ತಗಲುವುದಿಲ್ಲವೇ ಎಂದರೆ, ಜಯಲಲಿತಾ ಅವರ ಅಂತಿಮ ದಿನಗಳತ್ತ ಸುದ್ದಿ ಹೊರಳುತ್ತದೆ.
2ಪ್ರಮುಖ ಪಕ್ಷಗಳಿಗೆ ನಿರ್ಣಾಯಕ ಮುಂದಿನ ಸಾರ್ವತ್ರಿಕ ಚುನಾವಣೆ
ತಮಿಳುನಾಡು ಅಸೆಂಬ್ಲಿ ಚುನಾವಣೆ, ಹಾಲೀ ಎಐಡಿಎಂಕೆ ಸರಕಾರ ಪತನಗೊಳ್ಳದಿದ್ದರೆ ಸದ್ಯಕ್ಕಂತೂ ನಡೆಯುವುದಿಲ್ಲ. ಅಲ್ಲಿನ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಿಗೆ ನಿರ್ಣಾಯಕವಾಗಿರುವುದು ಮುಂದಿನ ಸಾರ್ವತ್ರಿಕ ಚುನಾವಣೆ. ದೆಹಲಿಯಲ್ಲಿ ತಮ್ಮ ಹಿಡಿತ ಸಾಧಿಸಲು ಮುಂಬರುವ ಲೋಕಸಭಾ ಚುನಾವಣೆ ಎಐಡಿಎಂಕೆ ಮತ್ತು ಡಿಎಂಕೆಗೆ ತುಂಬಾ ಮಹತ್ವದ್ದು. ಡಿಎಂಕೆ ಪಕ್ಷ ಯುಪಿಎ ಜೊತೆ, ಎಐಡಿಎಂಕೆ ಪಕ್ಷ ಎನ್ಡಿಎ ಜೊತೆ ಗುರುತಿಸಿಕೊಂಡಿದೆ. ಈ ಹೊತ್ತಿನಲ್ಲಿ ಡಿಎಂಕೆ, ಕರುಣಾನಿಧಿಯವರ ಆರೋಗ್ಯ ಹದೆಗೆಟ್ಟಿರುವ ವಿಚಾರವನ್ನು ಇಟ್ಟುಕೊಂಡು ಅನುಕಂಪಗಿಟ್ಟಿಸಿಕೊಳ್ಳಲು ನೋಡುತ್ತಿದೆ ಜೊತೆಗೆ ತಮಿಳುನಾಡು ಜನತೆಗೆ ಸಂದೇಶವೊಂದನ್ನು ರವಾನಿಸುವ ಪ್ರಯತ್ನದಲ್ಲಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ
ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ತೀವ್ರ ಅನಾರೋಗ್ಯಕ್ಕೀಡಾಗಿ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. 74 ದಿನ ಆಸ್ಪತೆಯಲ್ಲಿದ್ದ ಜಯಲಲಿತಾ ಕೊನೆಗೆ ಕೊನೆಯುಸಿರೆಳೆದರು. ಜಯಲಲಿತಾ ಆಸ್ಪತ್ರೆಗೆ ದಾಖಲಾದಾಗ ಯಾವ ಸ್ಥಿತಿಯಲ್ಲಿದ್ದರು ಮತ್ತು ಆಸ್ಪತ್ರೆಯ ತುರ್ತು ಘಟಕದಲ್ಲಿ ಹೇಗೆ ಇದ್ದರು ಎನ್ನುವುದು ಕೆಲವರಿಗೆ ಬಿಟ್ಟರೆ ಇಡೀ ದೇಶದ ಜನತೆಗೆ ಗೊತ್ತಿರಲಿಲ್ಲ.
ಜಯಾ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ
ಡಿಸೆಂಬರ್ 5, 2016ರಂದು ಜಯಲಲಿತಾ ನಿಧನರಾಗಿದ್ದಾರೆಂದು ಅಧಿಕೃತವಾಗಿ ಘೋಷಣೆಯಾದ ನಂತರವಷ್ಟೇ ಅವರ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಜಯಲಲಿತಾ ಆಸ್ಪತ್ರೆಗೆ ಸೇರಿದಾಗಲೇ ಸತ್ತಿದ್ದರು, ರಾಜ್ಯದ ಜನರಿಗೆ ಎಐಎಡಿಎಂಕೆ ಮಂಕುಬೂದಿ ಎರಚಲು ನೋಡುತ್ತಿದೆ ಎಂದೆಲ್ಲಾ ಜನ ಮಾತನಾಡಿಕೊಳ್ಳುತ್ತಿದ್ದರು ಮತ್ತು ಈ ಎಲ್ಲಾ ವಿದ್ಯಮಾನಗಳು ಪಕ್ಷದ ಇಮೇಜಿಗೆ ಭಾರೀ ಧಕ್ಕೆ ತಂದಿತ್ತು.
ಖುದ್ದು ಸ್ಟಾಲಿನ್ ಐಸಿಯುಗೆ ಕರೆದುಕೊಂಡು ಹೋಗುತ್ತಿದ್ದಾರೆ
ಕರುಣಾನಿಧಿ ವಿಚಾರದಲ್ಲಿ ಹೀಗಾಗಬಾರದು ಎನ್ನುವ ರಾಜಕೀಯ ಲೆಕ್ಕಾಚಾರದಿಂದಲೇ ವಿವಿಐಪಿಗಳನ್ನು ಖುದ್ದು ಸ್ಟಾಲಿನ್ ಐಸಿಯುಗೆ ಕರೆದುಕೊಂಡು ಹೋಗುತ್ತಿದ್ದಾರೆ. ಜಯಲಲಿತಾಗೆ ಎಐಎಡಿಎಂಕೆ ಮಾಡಿದಂತೆ ನಾವು ನಮ್ಮ ನಾಯಕನಿಗೆ ಮಾಡುವುದಿಲ್ಲ ಮತ್ತು ಅವರ ಆರೋಗ್ಯ ವಿಚಾರದಲ್ಲಿ ಯಾವುದೇ ಮುಚ್ಚುಮೆರೆಯಿಲ್ಲ ಎನ್ನುವ ಸಂದೇಶವನ್ನು ತಮಿಳುನಾಡಿನ ಜನತೆಗೆ ತಲುಪಿಸಲು ಡಿಎಂಕೆಯ ಮಾಸ್ಟರ್ ಪ್ಲ್ಯಾನ್ ಇದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕುಮಾರಸ್ವಾಮಿ, ಕರುಣಾನಿಧಿ ಆರೋಗ್ಯ ವಿಚಾರಿಸಲು ಚೆನ್ನೈಗೆ
ಹಾಗಾಗಿಯೇ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮಿಳುನಾಡು ಸಿಎಂ ಪಳನಿಸ್ವಾಮಿ, ಕೇರಳ ಸಿಎಂ ಪಿಣರಾಯಿ ವಿಜಯನ್, ರಜನಿಕಾಂತ್, ಕಮಲಹಾಸನ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದಾಗ ಖುದ್ದು ಸ್ಟಾಲಿನ್ ಅವರನ್ನು ಐಸಿಯುಗೆ ಕರೆದುಕೊಂಡು ಹೋಗಿ ಕರುಣಾನಿಧಿ ಅವರನ್ನು ನೋಡಲು ಅವಕಾಶ ನೀಡಿದ್ದಾರೆ. ಇಂದು ಅಥವಾ ನಾಳೆ ಕರ್ನಾಟಕದ ಸಿಎಂ ಕುಮಾರಸ್ವಾಮಿ ಕೂಡಾ, ಕರುಣಾನಿಧಿ ಆರೋಗ್ಯ ವಿಚಾರಿಸಲು ಚೆನ್ನೈಗೆ ಪ್ರಯಾಣಿಸುತ್ತಿದ್ದಾರೆ.