Get Updates
Get notified of breaking news, exclusive insights, and must-see stories!

ಅಚ್ಯುತಾನಂದನ್ ಬದುಕಿದ್ದರೆ ಪದ್ಮ ವಿಭೂಷಣ ಪ್ರಶಸ್ತಿ ಕೊಡುತ್ತಿರಲಿಲ್ಲ: ದಿನೇಶ್‌ ಅಮಿನ್‌ ಮಟ್ಟು

ಕೇರಳದ ಮಾಜಿ ಮುಖ್ಯಮಂತ್ರಿ, ಕಮ್ಯುನಿಸ್ಟ್‌ ಹಿರಿಯ ನಾಯಕ ದಿವಂಗತ ವಿ.ಎಸ್‌.ಅಚ್ಯುತಾನಂದನ್‌ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ಆದರೆ, 'ಅಚ್ಯುತಾನಂದನ್ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿರುವುದನ್ನು ಅವರ ಕುಟುಂಬ ತಿರಸ್ಕರಿಸಬೇಕು ಎನ್ನುವ ಕೂಗು ಕೇಳತೊಡಗಿದೆ. ಅಚ್ಯುತಾನಂದನ್ ಬದುಕಿದ್ದರೆ ಮೊದಲಿಗೆ ಅವರಿಗೆ ಈ ಪ್ರಶಸ್ತಿಯನ್ನೇ ಕೊಡುತ್ತಿರಲಿಲ್ಲ, ಕೊಟ್ಟಿದ್ದರೂ ಅವರು ತಿರಸ್ಕರಿಸುತ್ತಿದ್ದರು ಎನ್ನುವುದು ನಿಜ' ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, 'ಕಮ್ಯುನಿಸ್ಟ್ ಪಕ್ಷದಿಂದ ಮುಖ್ಯಮಂತ್ರಿಗಳಾಗಿದ್ದ ಇ.ಎಂ.ಎಸ್ ನಂಬೂದಿರಿಪಾಡ್ ಮತ್ತು ಬುದ್ದದೇವ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿ ಪಡೆಯಲು ನಿರಾಕರಿಸಿದ್ದರು. ಮಾಧ್ಯಮಗಳ ವರದಿ ಪ್ರಕಾರ ಅಚ್ಯುತಾನಂದನ್ ಕುಟುಂಬ ಪ್ರಶಸ್ತಿಯನ್ನು ಸ್ವಾಗತಿಸಿದೆ. ಒಂದೊಮ್ಮೆ ಅವರು ಸ್ವಾಗತಿಸಿರುವುದು ನಿಜವೆಂದಾದರೆ, ಆ ನಿಲುವು ತೆಗೆದುಕೊಳ್ಳುವುದಕ್ಕೆ ಆ ಕುಟುಂಬಕ್ಕೆ ಖಂಡಿತ ಹಕ್ಕು ಇದೆ ಮತ್ತು ಅದನ್ನು ಪ್ರಶ್ನಿಸುವ ಅಧಿಕಾರ ಸಿಪಿಎಂಗೆ ಇಲ್ಲ. ವಿ.ಎಸ್.ಅಚ್ಯುತಾನಂದನ್ ಅವರಿಗೆ ರಾಜಕೀಯವಾಗಿ ಬಹಳ ದೊಡ್ಡ ಅನ್ಯಾಯ ಮಾಡಿರುವುದು ಸಿಪಿಎಂ ಆಗಿರುವ ಕಾರಣ ಆ ಪಕ್ಷದ ಮಾತನ್ನು ಯಾಕೆ ಕೇಳಬೇಕು ಎಂದು ಅವರ ಕುಟುಂಬ ನಿರ್ಧರಿಸಿದರೆ ಅದಕ್ಕೆ ಖಂಡಿತ ಸಮರ್ಥನೆ ಇದೆ' ಎಂದಿದ್ದಾರೆ.

VS Achuthanandan Would Have Rejected Padma Vibhushan If Alive Senior Journalist Dinesh Amin Mattu

'ತನ್ನ 26ನೇ ವಯಸ್ಸಿನಲ್ಲಿ ಸಿಪಿಐ ಸೇರಿದ್ದ ಅಚ್ಯುತಾನಂದನ್ ಮುಖ್ಯಮಂತ್ರಿಯಾಗಿದ್ದು ತನ್ನ 83ನೇ ವಯಸ್ಸಿನಲ್ಲಿ. ಕೇರಳದಲ್ಲಿ ಶೇಕಡಾ 30ರಷ್ಟು ಇರುವ ಈಳವರು ಸಿಪಿಎಂನ ದೊಡ್ಡ ಮತಬ್ಯಾಂಕ್ ಅಗಿದ್ದರೂ ಈ ಸಮುದಾಯ ರಾಜಕೀಯವಾಗಿ ನಿರಂತರವಾಗಿ ಅನ್ಯಾಯಕ್ಕೆ ಒಳಗಾಗಿರುವುದು ಇದೇ ಪಕ್ಷದಿಂದ ಎನ್ನುವುದಕ್ಕೆ ಇತಿಹಾಸ ಸಾಕ್ಷಿ. ಕಮ್ಯುನಿಸ್ಟ್ ಪಕ್ಷದಿಂದ 1957ರಿಂದ 2006ರವರೆಗೆ ಮುಖ್ಯಮಂತ್ರಿಗಳಾಗಿದ್ದವರೆಲ್ಲರೂ (ಇಎಂಎಸ್ ನಂಬೂದಿರಿಪಾಡ್, ಅಚ್ಯುತಮೆನನ್ ವಾಸುದೇವ ನಾಯರ್. ಇ.ಕೆ.ನಾಯರ್) ಮೇಲ್ಜಾತಿಗೆ ಸೇರಿರುವ ನಂಬೂದಿರಿ ಮತ್ತು ನಾಯರ್ ಸಮುದಾಯದವರು'.

'ಅಚ್ಯುತಾನಂದನ್ ಅವರಿಗಿಂತಲೂ ಹಿರಿಯ ಕಮ್ಯುನಿಸ್ಟ್ ನಾಯಕಿ ಈಳವ ಸಮುದಾಯಕ್ಕೆ ಸೇರಿದ್ದ ಕೆ.ಆರ್.ಗೌರಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಗೌರಿ 1948ರಲ್ಲಿಯೇ ಸಿಪಿಐ ಸೇರಿದ್ದವರು. 1952-54ರಲ್ಲಿ ತ್ರಿವಾಂಕೂರು-ಕೊಚ್ಚಿ ವಿಧಾನಸಭಾ ಸದಸ್ಯರಾಗಿದ್ದವರು. ನಿರಂತರವಾಗಿ ವಿಧಾನಸಭೆಗೆ ಆಯ್ಕೆಯಾಗಿ ಬರುತ್ತಿದ್ದ ಗೌರಿ ಅವರನ್ನು 1987ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಸಿಪಿಐ(ಎಂ) ಚುನಾವಣೆಯನ್ನು ಎದುರಿಸಿತು. ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿಯಾದದ್ದು ಇ.ಕೆ.ನಯನಾರ್. ಈ ಅನ್ಯಾಯದಿಂದ ನೊಂದ ಗೌರಿಯಮ್ಮ ಸಿಪಿಎಂ ತೊರೆದು ತಮ್ಮದೇ ಪಕ್ಷ ಸ್ಥಾಪಿಸಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಚಿವರಾಗಿದ್ದರು'.

ವಿರೋಧಿಸುವ ನೈತಿಕತೆ ಸಿಪಿಎಂಗೆ ಇಲ್ಲ

'ಇದನ್ನೆಲ್ಲ ನೋಡುತ್ತಾ ಬೆಳೆದಿರುವ ಪಿಣರಾಯ್ ವಿಜಯನ್ ಹೊರಗಿನ ಮತ್ತು ಒಳಗಿನ ಶತ್ರುಗಳನ್ನು ಮಣಿಸಲು ಅಗತ್ಯವಿರುವ ತಂತ್ರಗಳನ್ನೆಲ್ಲ ಕರಗತ ಮಾಡಿಕೊಂಡು ಸದ್ಯಕ್ಕೆ ಕೇರಳ ಸಿಪಿಎಂನ ಏಕಮೇವಾದ್ವಿತಿಯ ನಾಯಕ. ಪೈಪೋಟಿಯಲ್ಲಿ ಸಮೀಪಕ್ಕೆ ಬಂದಿದ್ದ ಶೈಲಜಾ ಟೀಚರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿ.ಎಸ್. ಅಚ್ಯುತಾನಂದನ್ ಕುಟುಂಬ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವಾಗತಿಸಿದರೆ ಅದನ್ನು ವಿರೋಧಿಸುವ ನೈತಿಕತೆ ಸಿಪಿಎಂಗೆ ಇಲ್ಲ'.

'ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕೇರಳದ ಕಮ್ಯುನಿಸ್ಟರಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷವೇ ವಾಸಿ. ಈಳವ ಸಮುದಾಯಕ್ಕೆ ಸೇರಿದ್ದ ಮತ್ತು ನಾರಾಯಣ ಗುರು ಚಳುವಳಿಯಲ್ಲಿಯೂ ಸಕ್ರಿಯವಾಗಿದ್ದ ಆರ್ .ಶಂಕರ್ 1962ರಲ್ಲಿ ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಗಳಾಗಿದ್ದರು. ಅವರಲ್ಲದೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದ ಎ.ಕೆ.ಆ್ಯಂಟನಿ ಮತ್ತು ಉಮನ್ ಚಾಂಡಿ ಅವರೂ ಮುಖ್ಯಮಂತ್ರಿಗಳಾಗಿದ್ದರು. ಅಲ್ಲಿ ಶೇಕಡಾ 27ರಷ್ಟು ಮುಸ್ಲಿಮರು ಮತ್ತು ಶೇಕಡಾ 18ರಷ್ಟು ಕ್ರಿಶ‍್ಚಿಯನರಿದ್ದರೂ ಈ ಸಮುದಾಯದಿಂದ ಯಾರೊಬ್ಬರು ಕಮ್ಯುನಿಸ್ಟ ಪಕ್ಷದಿಂದ ಮುಖ್ಯಮಂತ್ರಿಯಾಗಿಲ್ಲ'.

'ಅಚ್ಯುತಾನಂದನ್ ಜೊತೆಯಲ್ಲಿ ಇನ್ನೊಬ್ಬ ಈಳವ ನಾಯಕ ವೆಲ್ಲಪಳ್ಳಿ ನಟೇಶನ್ ಅವರಿಗೂ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನಾರಾಯಣ ಗುರುಗಳು ಸ್ಥಾಪಿಸಿದ್ದ ಶ್ರೀನಾರಾಯಣ ಗುರು ಪರಿಪಾಲನಾ ಯೋಗಂನ ನಾಯಕರಾಗಿದ್ದ ವೆಲ್ಲಪಳ‍್ಳಿ 2016ರಲ್ಲಿ ತಮ್ಮದೇ ಭಾರತ ಧರ್ಮ ಜನಸೇನಾ ಎಂಬ ರಾಜಕೀಯ ಪಕ್ಷ ಸ್ಥಾಪಿಸಿ ಎನ್‌ಡಿಎ ಜೊತೆ ಮೈತ್ರಿಮಾಡಿಕೊಂಡು ವಿಧಾನಸಭಾ ಚುನಾವಣೆ ಎದುರಿಸಿದ್ದರು. ಎಲ್ಲ ಕ್ಷೇತ್ರಗಳ್ಲಲಿ ಅವರ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು'.

ಈಳವರನ್ನು ಓಲೈಸಲು ಕಸರತ್ತು

'ನಟೇಶನ್ ಮಗ ತುಷಾರ್ ಅಧ್ಯಕ್ಷತೆಯ ಆ ಪಕ್ಷ ಈಗಲೂ ಎನ್‌ಡಿಎ ಜೊತೆ ಮೈತ್ರಿಯಲ್ಲಿದೆ. ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಈಳವರನ್ನು ಓಲೈಸಲು ನಡೆಸಲಾಗುತ್ತಿರುವ ಕಸರತ್ತುಗಳ ಭಾಗವಾಗಿಯೇ ಶಿವಗಿರಿಯ ಸ್ವಾಮಿಗಳನ್ನು ಕಾಂಗ್ರೆಸ್ ಪಕ್ಷ ಮಂಗಳೂರಿಗೆ ಕರೆತಂದು ಮೆರೆಸಲಾಗುತ್ತಿದೆ, ಬಿಜೆಪಿ ಈಳವ ನಾಯಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಸಮಾಧಾನಕರ ಸಂಗತಿ ಎಂದರೆ ಕೇರಳ ಚುನಾವಣೆಯ ಪೋಸ್ಟರ್ ಬಾಯ್ ರಾಮ, ಜಗನ್ನಾಥ ಅಲ್ಲ, ಅದು ನಾರಾಯಣ ಗುರು' ಎಂದು ದಿನೇಶ್‌ ಅಮಿನ್‌ ಮಟ್ಟು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+