ಲೆನಿನ್ ಪ್ರತಿಮೆ ಧ್ವಂಸವಾದ ಬೆನ್ನಲ್ಲೇ ತ್ರಿಪುರಾದಲ್ಲಿ ಹಿಂಸಾಚಾರ
ಅಗರ್ತಲಾ, ಮಾರ್ಚ್ 6: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದ 48 ಗಂಟೆಗಳಲ್ಲಿ ಎಡಪಕ್ಷಗಳ ಸಂಕೇತದಂತಿದ್ದ ಲೆನಿನ್ ಪ್ರತಿಮೆಯನ್ನು ಧರೆಗುರುಳಿಸಲಾಗಿದೆ. ಇದಾದ ಬೆನ್ನಿಗೆ ತ್ರಿಪುರಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಹಲವು ಕಡೆಗಳಲ್ಲಿ ಸಿಆರ್ ಪಿಸಿ ಸೆಕ್ಷನ್ 144 ಘೋಷಿಸಲಾಗಿದೆ.
ತ್ರಿಪುರಾದ ಬೆಲೋನಿಯಾ ಕಾಲೇಜು ವೃತ್ತದಲ್ಲಿ ರಷ್ಯಾದ ಕ್ರಾಂತಿಕಾರಿ ಲೆನಿನ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿತ್ತು. ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಆಡಳಿತದಲ್ಲಿದ್ದ ಎಡಪಕ್ಷಗಳನ್ನು ಸೋಲಿಸಿ ಕಳೆದ ಶನಿವಾರ ಬಿಜೆಪಿ ಇಲ್ಲಿ ಅಧಿಕಾರಕ್ಕೇರಿದ ಬೆನ್ನಿಗೆ ಸೋಮವಾರ ಸಂಜೆ ವೇಳೆಗೆ ಈ ಲೆನಿನ್ ಪ್ರತಿಮೆಯತ್ತ ಜೆಸಿಬಿ ನುಗ್ಗಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು ಸುಂದರ ವೃತ್ತಕ್ಕೆ ಜೆಸಿಬಿ ನುಗ್ಗಿಸಿ ವೃತ್ತದ ಮಧ್ಯದಲ್ಲಿ ಸ್ಥಾಪಿತವಾಗಿದ್ದ ಪ್ರತಿಮೆಯನ್ನು ದೂಡಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಸಿಪಿಐಎಂ ಕಚೇರಿಗಳ ಮೇಲೆ ದಾಳಿ
ಅತ್ತ ಪ್ರತಿಮೆ ಧರೆಗುರುಳಿದ ಬೆನ್ನಿಗೆ ಇಲ್ಲಿನ ಹಲವು ಸಿಪಿಐಎಂ ಕಚೇರಿಗಳ ಮೇಲೆ ದಾಳಿಗಳು ಕೂಡ ನಡೆದಿವೆ. ಒಟ್ಟಾರೆ ತ್ರಿಪುರಾದ ವಾತಾವರಣ ಪ್ರಕ್ಷುಬ್ಧತೆಯನ್ನು ಪಡೆದುಕೊಂಡಿದೆ.
ತನ್ನ500ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗಿದೆ. ಮತ್ತು ಕಚೇರಿಗಳನ್ನು ಜಖಂಗೊಳಿಸಲಾಗಿದೆ ಎಂದು ಸಿಪಿಐಎಂ ಹೇಳಿದ್ದರೆ, ತನ್ನ 49 ಕಾರ್ಯಕರ್ತರ ಮೇಲೆಯೂ ದಾಳಿ ನಡೆದಿದೆ ಎಂದು ಬಿಜೆಪಿ ಹೇಳಿದೆ.

ಭಯ ಬಿತ್ತುವ ಯತ್ನ
ಬಿಜೆಪಿ ಕಾರ್ಯಕರ್ತರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಿಪಿಐಎಂ, ಬಿಜೆಪಿ ನಡೆ ಪ್ರಧಾನ ಮಂತ್ರಿಯವರ ಹೇಳಿಕೆಗೆ ವಿರುದ್ಧವಾಗಿದೆ. ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದೆ ಎಂದು ಹೇಳುತ್ತಲೇ ದಾಳಿ ಮಾಡುತ್ತಿದೆ. ತ್ರಿಪುರಾದಲ್ಲಿ ನಡೆಯುತ್ತಿರುವ ಘಟನೆಗಳು ಸಿಪಿಐಎಂ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಭಯ ಉಂಟು ಮಾಡುವ ಯತ್ನ ಎಂದು ಹೇಳಿದೆ.

1,539 ಕಾರ್ಯಕರ್ತರ ಮೇಲೆ ದಾಳಿ
ಸೋಮವಾರ ಸಂಜೆ 4 ಗಂಟೆವರೆಗೆ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ 514 ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. 1,539 ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. 196 ಮನೆಗಳಿಗೆ ಬೆಂಕಿ ಇಡಲಾಗಿದೆ. 134 ಪಕ್ಷ ಕಚೇರಿಗಳ ಮೇಲೆ ದಾಳಿ ಮಾಡಲಾಗಿದ್ದು ಇದರಲ್ಲಿ 64 ಕಚೇರಿಗಳನ್ನು ಹೊತ್ತಿಸಲಾಗಿದೆ. ಇದೇ ವೇಳೆ 208 ಕಚೇರಿಗಳನ್ನು ಒತ್ತಾಯಪೂರ್ವಕವಾಗಿ ಬಿಜೆಪಿ ಮತ್ತು ಐಪಿಎಫ್ ಟಿಯವರು ಆಕ್ರಮಿಸಿಕೊಂಡಿದ್ದಾರೆ ಎಂದು ರಾಜ್ಯ ಸಿಪಿಎಂ ಕಾರ್ಯದರ್ಶಿ ಬಿಜನ್ ಧಾರ್ ಹೇಳಿದ್ದಾರೆ.
|
ಘಟನೆ ಸಮರ್ಥಿಸಿಕೊಂಡ ಗವರ್ನರ್!
ವಿಚಿತ್ರವೆಂದರೆ ಘಟನೆಯನ್ನು ರಾಜ್ಯಪಾಲರು ಸಮರ್ಥಿಸಿಕೊಂಡಿದ್ದಾರೆ. ಆಯ್ಕೆಗೊಂಡ ಸರಕಾರ ತನಗೆ ಇಚ್ಛಿಸಿದನ್ನು ಮಾಡಲು ಸ್ವತಂತ್ರವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಪಿಐಎಂ ಬಿಜೆಪಿ-ಆರ್.ಎಸ್.ಎಸ್ ಪ್ರೇರಿತ ರಾಜ್ಯಪಾಲರು ಪರೋಕ್ಷವಾಗಿ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಿಡಿಕಾರಿದೆ.

ಘಟನೆಗೆ ಖಂಡನೆ
ಘಟನೆಯನ್ನು ಸಿಪಿಐ ನಾಯಕ ಡಿ. ರಾಜಾ, ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ, ಜೆಡಿಯು ಸಂಸದ ಹರಿವಂಶ್ ಮೊದಲಾದವರು ಖಂಡಿಸಿದ್ದಾರೆ. ಇಲ್ಲಿನ ಜನ ಬಿಜೆಪಿ-ಆರ್.ಎಸ್.ಎಸ್ ಗೆ ಪಾಠ ಕಲಿಸಲಿದ್ದಾರೆ ಎಂದು ಯೆಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಕ್ಷನ್ 144
ಇಂದು ತ್ರಿಪುರಾದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಇದರ ಬೆನ್ನಿಗೆ ಹಿಂಸಾಚಾರ ತಾರಕ್ಕೇರಿರುವುದರಿಂದ ರಾಜ್ಯದ ಹಲವು ಭಾಗಗಳಲ್ಲಿ ಸಿಆರ್ ಪಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಇನ್ನು ರಾಜ್ಯಪಾಲರು ಮತ್ತು ಡಿಜಿಪಿ ಜತೆ ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತ್ರಿಪುರಾ ಮುಖ್ಯಮಂತ್ರಿಯಾಗಿ ವಿಪ್ಲವ್
ಇದೇ ವೇಳೆ ನೂತನ ತ್ರಿಪುರಾ ಮುಖ್ಯಮಂತ್ರಿಯಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ವಿಪ್ಲವ್ ಕುಮಾರ್ ದೇವ್ ರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. 48 ವರ್ಷದ ವಿಪ್ಲವ್ ದೇವ್ 25 ವರ್ಷಗಳ ನಂತರ ತ್ರಿಪುರಾದ ಮೊದಲ ಕಮ್ಯೂನಿಸ್ಟೇತರ ಮುಖ್ಯಮಂತ್ರಿಯಾಗಲಿದ್ದಾರೆ.












Click it and Unblock the Notifications