ಉತ್ತರಾಖಂಡ್: ದಿಢೀರ್ ಕೋರ್ ಕಮಿಟಿ ಸಭೆ ನಡೆಸಿದ ಬಿಜೆಪಿ
ಡೆಹ್ರಾಡೂನ್, ಮಾರ್ಚ್ 07: ಉತ್ತರಾಖಂಡ್ ಬಿಜೆಪಿಯು ದಿಢೀರ್ ಕೋರ್ ಕಮಿಟಿ ಸಭೆಯನ್ನು ನಡೆಸಿದೆ. ಶನಿವಾರ ಸಂಜೆ ಕೋರ್ ಕಮಿಟಿ ಸಭೆ ನಡೆದಿದ್ದು, ಚತ್ತೀಸ್ ಗಢದ ಮಾಜಿ ಸಿಎಂ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದ್ದು, ಬಿಜೆಪಿ ಉಸ್ತುವಾರಿ ದುಷ್ಯಂತ್ ಕುಮಾರ್ ಗೌತಮ್ ಸಹ ಭಾಗಿಯಾಗಿದ್ದರು.
ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಕೋರ್ ಕಮಿಟಿ ಪ್ರತಿ ಸದಸ್ಯರೊಂದಿಗೆ ರಮಣ್ ಸಿಂಗ್ ಪ್ರತ್ಯೇಕ ಮಾತುಕತೆ ನಡೆಸಿ, ಪ್ರತಿಕ್ರಿಯೆ ಸಂಗ್ರಹಿಸಿದ್ದಾರೆ. ಬಳಿಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸ, ಆರ್ ಎಸ್ಎಸ್ ಕಚೇರಿಗೂ ರಮಣ್ ಸಿಂಗ್ ಭೇಟಿ ನೀಡಿ ಮಾತುಕತೆ ನಡೆಸಿದರು.
ಪೂರ್ವನಿಗದಿತ ವೇಳಾಪಟ್ಟಿ ಇಲ್ಲದೇ ದಿಢೀರ್ ಕೋರ್ ಕಮಿಟಿ ಸಭೆ ನಡೆದಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಗೈರ್ಸೇನ್ ನಲ್ಲಿ ಬಜೆಟ್ ಅಧಿವೇಶನದ ಸಮಯದಲ್ಲಿ ಈ ಕೋರ್ ಕಮಿಟಿ ಸಭೆ ನಡೆದಿರುವುದು ಕುತೂಹಲ ಮೂಡಿಸಿದೆ.

ಬೇಸಿಗೆ ರಾಜಧಾನಿ ಭರಾರಿಸೈನ್ (ಗೈರ್ಸೈನ್) ನಿಂದ ಬಿಜೆಪಿ ಶಾಸಕರು, ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಡೆಹ್ರಾಡೂನ್ ಗೆ ದೌಡಾಯಿಸಿದ್ದು ಸಚಿವ ಸಂಪುಟ ವಿಸ್ತರಣೆಯ ಸುಳಿವು ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೋರ್ ಕಮಿಟಿ ಸದಸ್ಯರಾದ ರಾಜ್ಯಸಭಾ ಸದಸ್ಯ ನರೇಶ್ ಬನ್ಸಾಲ್, ತೇಹ್ರಿ ಸಂಸದರಾದ ಮಾಲಾ ರಾಜ್ಯ ಲಕ್ಷ್ಮಿ ಶಾ, ಮಾಜಿ ಸಿಎಂ ವಿಜಯ್ ಬಹುಗುಣ, ನೈನಿತಾಲ್ ನ ಸಂಸದರಾದ ಅಜಯ್ ಭಟ್, ಸಚಿವ ಮದನ್ ಕೌಶಿಕ್, ರಾಜ್ಯ ಸಚಿವ ಧನ್ ಸಿಂಗ್ ರಾವತ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications