ಜನಾದೇಶದ ಬಳಿಕ ಸೋನಿಯಾರಿಂದ ಉತ್ತರಾಖಂಡ ಸಿಎಂ ಆಯ್ಕೆ: ಹರೀಶ್ ರಾವತ್
ಡೆಹ್ರಾಡೂನ್, ಜನವರಿ 20: ಉತ್ತರಾಖಂಡದಲ್ಲಿ ನಾವು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ, ನಮಗೆ ಜನಾದೇಶ ದೊರೆತಾಗ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಉತ್ತರಾಖಂಡ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ನಿರ್ಧಾರ ಮಾಡುತ್ತಾರೆ ಎಂದು ಪಕ್ಷದ ಪ್ರಚಾರ ಮುಖ್ಯಸ್ಥ ಹರೀಶ್ ರಾವತ್ ಎನ್ಡಿಟಿವಿಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ.
"ಪಕ್ಷದ ನಾಯಕತ್ವದ ಅಭಿಪ್ರಾಯವೆಂದರೆ ನಾವು ಒಗ್ಗಟ್ಟಿನಿಂದ ಚುನಾವಣೆಗಳನ್ನು ಎದುರಿಸಬೇಕಾಗಿದೆ ಮತ್ತು ಒಬ್ಬರನ್ನು ಆಯ್ಕೆ ಮಾಡುವ ಜನಾದೇಶ ಬಂದಾಗ ನಾವು ಮುಖ್ಯಮಂತ್ರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸೋನಿಯಾ ಜಿ ನಂತರ ಮುಖ್ಯಮಂತ್ರಿ ಯಾರು ಎಂದು ನಿರ್ಧಾರ ಮಾಡುತ್ತಾರೆ. ಪಕ್ಷವು ಅವರ ನಿರ್ಧಾರವನ್ನು ಒಪ್ಪುತ್ತದೆ," ಎಂದು ತಿಳಿಸಿದ್ದಾರೆ.
ಪಕ್ಷದ ಕೇಂದ್ರ ನಾಯಕತ್ವವು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಿಚಾರದಲ್ಲಿ ತನ್ನನ್ನು ಕೈಬಿಟ್ಟಿದೆ ಎಂದು ಹರೀಶ್ ರಾವತ್ ಇತ್ತೀಚೆಗೆ ಸಾರ್ವಜನಿಕವಾಗಿ ಸ್ಪಷ್ಟ ಸುಳಿವನ್ನು ನೀಡಿದ್ದರು. ನಂತರ ಕಾಂಗ್ರೆಸ್ ಅತೃಪ್ತಿಯನ್ನು ತಣಿಸುವ ಯತ್ನವನ್ನು ಮಾಡಿದ್ದವು. ಹರೀಶ್ ರಾವತ್ರನ್ನು ಗುಡ್ಡಗಾಡು ಪ್ರದೇಶದಲ್ಲಿ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿತು.

ಬೆಂಬಲಿಸುವ ಬದಲು ಪಕ್ಷ ಹಿಂದೇಟು ಹಾಕಿದೆ ಎಂದಿದ್ದ ಹರೀಶ್
ಪಕ್ಷದಲ್ಲಿನ ಆಂತರಿಕ ಕಚ್ಚಾಟದ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಹರೀಶ್ ರಾವತ್, "ನಾವು ಈ ಸವಾಲನ್ನು ಒಗ್ಗಟ್ಟಿನಿಂದ ಎದುರಿಸುತ್ತಿದ್ದೇವೆ. ನಾವು ಸೋನಿಯಾ ಮತ್ತು ರಾಹುಲ್ ಅವರ ನಾಯಕತ್ವದಲ್ಲಿ ಒಂದಾಗಿದ್ದೇವೆ," ಎಂದು ಹೇಳಿದ್ದಾರೆ. "ಇದು ವಿಚಿತ್ರ ಅಲ್ಲವೇ? ನಾವು ಈ ಚುನಾವಣಾ ಸಮುದ್ರದಲ್ಲಿ ಈಜಬೇಕು, ಆದರೆ ನನ್ನನ್ನು ಬೆಂಬಲಿಸುವ ಬದಲು, ಸಂಘಟನೆಯು ನನಗೆ ಬೆನ್ನು ಮಾಡಿ ನಿಂತಿದೆ," ಎಂದು ಹರೀಶ್ ರಾವತ್ ಡಿಸೆಂಬರ್ 22 ರಂದು ಟ್ವೀಟ್ ಮಾಡಿದ್ದರು.
"ನಾವು ಹುಡುಕಬೇಕಾದ ಅನೇಕ ಮೊಸಳೆಗಳನ್ನು (ಪರಭಕ್ಷಕ) ಸಮುದ್ರದಲ್ಲಿ ಬಿಡಲಾಗುತ್ತಿದೆ. ನಾನು ಯಾರನ್ನು ಅನುಸರಿಸಬೇಕೋ ಅವರೇ ಜನ ನನ್ನ ಕೈಕಾಲು ಕಟ್ಟಿ ಹಾಕಿದ್ದಾರೆ. ನಾನು ಯೋಚಿಸುತ್ತಿದ್ದೆ. ಹರೀಶ್ ರಾವತ್, ಇದು ತುಂಬಾ ದೂರದ ಸಂಚಾರ, ನೀವು ಸಾಕಷ್ಟು ಮಾಡಿದ್ದೀರಿ, ಇದು ವಿಶ್ರಾಂತಿ ಸಮಯ," ಎಂದು ಕೂಡಾ ಹರೀಶ್ ರಾವತ್ ಹೇಳಿದ್ದರು.
"ಒಬ್ಬರನ್ನು ದೂರಿದರೆ ಒಳಜಗಳ ಇದೆ ಎಂದಲ್ಲ"
ಈ ಟ್ವೀಟ್ಗಳ ಬಗ್ಗೆ ಪ್ರಶ್ನೆ ಮಾಡಿದಾಗ ಹರೀಶ್ ರಾವತ್ ಟ್ವೀಟ್ಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಆ ಹೇಳಿಕೆಯು ಸತ್ಯವಾಗಿದೆ ಆದರೆ ಅದನ್ನು ಸರಿಪಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ," ಎಂದು ಹರೀಶ್ ರಾವತ್ ಹೇಳಿದ್ದಾರೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಶ್ಲಾಘಿಸಿದ ರಾವತ್, ಈ ಬದಲಾವಣೆಯನ್ನು ತಂದ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು. ಹಾಗೆಯೇ, "ಒಬ್ಬರನ್ನು ದೂರುವುದು ಎಂದರೆ ನಮ್ಮಲ್ಲಿ ಒಳಜಗಳ ಇದೆ ಎಂದಲ್ಲ," ಎಂದಿದ್ದಾರೆ.
ಇನ್ನು ಉಸ್ತುವಾರಿಯಾದರೂ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹರೀಶ್ ರಾವತ್, "ನನ್ನನ್ನು ಪ್ರಚಾರದ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಆದರೆ ಬ್ಲಾಕ್ ಸಮಿತಿ ಮತ್ತು ಇತರ ಅನೇಕ ಸಮಿತಿಗಳು ನನಗೆ ಸಹಕಾರ ನೀಡುತ್ತಿಲ್ಲ," ಎಂದರು. "ಪಕ್ಷದ ದೊಡ್ಡ ವಿಭಾಗವು ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ನಾನು ಸಲಹೆಗಳನ್ನು ನೀಡಿದಾಗ ಅವರು ಕೇಳುತ್ತಿಲ್ಲ. ಆದ್ದರಿಂದ ನಾನು ಅದನ್ನು ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದೇನೆ ಮತ್ತು ಟ್ವೀಟ್ಗಳ ಮೂಲಕ ಅದನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ," ಸ್ಪಷ್ಟಪಡಿಸಿದರು.
ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ತಂತ್ರ ಕುರಿತು ಮಾತನಾಡಿದ ಹರೀಶ್ ರಾವತ್, "ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತವನ್ನು ಪಡೆಯುವ ಅಗತ್ಯವಿದೆ. ನಾವು ನಿರುದ್ಯೋಗ ಮತ್ತು ಹಣದುಬ್ಬರದಂತಹ ಸ್ಥಳೀಯ ಸಮಸ್ಯೆಗಳೊಂದಿಗೆ ರಾಷ್ಟ್ರೀಯತೆಯ ಬಿಜೆಪಿಯ ಅಜೆಂಡಾವನ್ನು ಎದುರಿಸಬಹುದು," ಎಂದು ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications