ಬೆಳಗಾವಿ ಗಡಿಯಲ್ಲಿ ಕನ್ನಡ ಕಾರ್ಯಕರ್ತರ ಪ್ರತಿಭಟನೆ: ಶರದ್ ಪವಾರ್ ಕೆಂಡಾಮಂಡಲ
ಮುಂಬೈ, ಡಿಸೆಂಬರ್ 6: ಬೆಳಗಾವಿ ಗಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರದ ವಾಹನಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಕೆಲ ವಾಹನಗಳಿಗೆ ಮಸಿ ಬಳಿದು ಧರಣಿ ನಡೆಸಿದ್ದಾರೆ. ಪದೇಪದೇ ಗಡಿ ತಂಟೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕನ್ನಡ ಪರ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಗಡಿ ವಿವಾದ ತೀವ್ರ ಸ್ವರೂಪ ಪಡೆದಿರುವ ಹೊತ್ತಿನಲ್ಲೇ ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿ ನೀಡುವುದಾಗಿ ಘೋಷಿಸಿರುವುದು ಕರವೇ ಕಾರ್ಯಕರ್ತರನ್ನು ಕೆರಳಿಸಿದೆ.
ಹಿರೇಬಾಗೇವಾಡಿಯಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದಗಳಾಗಿದ್ದು, ಪರಿಸ್ಥಿತಿ ಈಗ ತಿಳಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಬಳಿ ನಡೆದಿರುವ ಈ ಘಟನಾವಳಿಗಳು ಮಹಾರಾಷ್ಟ್ರದ ರಾಜಕೀಯ ನಾಯಕರನ್ನು ಕೆರಳಿಸಿದೆ.
ಈ ವಿಚಾರವಾಗಿ ಕೆಂಡಾಮಂಡಲಾಗಿರುವ ಎನ್ಸಿಪಿ ನಾಯಕ ಶರದ್ ಪವಾರ್, 'ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿದ್ದಾರೆ. ಆದರೆ, ಈ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಮೃದುಧೋರಣೆ ತೋರಿಲ್ಲ. ನಮ್ಮ (ಮಹಾರಾಷ್ಟ್ರ) ತಾಳ್ಮೆಯನ್ನು ಯಾರೂ ಪರೀಕ್ಷಿಸಬಾರದು. ಇದು ತಪ್ಪು ದಿಕ್ಕಿನಲ್ಲಿ ಸಾಗಲು ಬಿಡಬಾರದು' ಎಂದು ತಿಳಿಸಿದ್ದಾರೆ.
ಬೆಳಗಾವಿ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಿಎಂ ಶಿಂಧೆ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಗಡಿ ಸಮಸ್ಯೆ ಕುರಿತು ಎಲ್ಲಾ ಸಂಸದರು ಒಗ್ಗೂಡಿ, ಒಂದೇ ನಿಲುವು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ. ಇದಕ್ಕೆ ಸಮಯ ಕೂಡಿ ಬಂದಿದೆ' ಎಂದು ಪವಾರ್ ಹೇಳಿದ್ದಾರೆ.
ಇದೇ ವೇಳೆ, ಹಿರೇಬಾಗೇವಾಡಿಯಲ್ಲಿ ನಡೆದಿರುವ ಘಟನಾವಳಿಗಳ ಕುರಿತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಅವರಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.