Jammu-Kashmir Exit Polls: ಮೈತ್ರಿ ಲೆಕ್ಕಾಚಾರ, ಕಮಲ ದೂರವಿಡಲು ಎನ್ಸಿ ನಿರ್ಧಾರ
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಶೇ. 63.88 ಮತದಾನ ವರದಿಯಾಗಿತ್ತು. ಇಂದು ಜಮ್ಮುಕಾಶ್ಮೀರ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ (exit poll) ಹೊರಬಿದ್ದಿದ್ದು, ಗದ್ದುಗೆ ಯಾರಿಗೆ ಎನ್ನುವ ಕುತೂಹಲ ಮೂಡಿದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್ಸಿ ಮೈತ್ರಿಕೂಟ ಶೇ 36, ಬಿಜೆಪಿ ಶೇ 41, ಪಿಡಿಎಫ್ ಶೇ 5 ಮತ್ತು ಇತರರು ಶೇ 18ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಮೈತ್ರಿ ಮಾಡಿಕೊಂಡರೆ ಮಾತ್ರ ಹೊಸ ಸರ್ಕಾರ ರಚನೆ ಸಾಧ್ಯ ಎಂದು ಹೇಳಲಾಗುತ್ತಿದೆ. ಸರ್ಕಾರ ರಚನೆಗೆ ಬಿಜೆಪಿ ಜೊತೆ ಎನ್ಸಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಗುಸುಗುಸು ಇತ್ತು. ಮತ್ತೊಂದೆಡೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯನ್ನು ವಿರೋಧಿಸುವವರ ಮತಗಳು ನಮ್ಮ ಪಕ್ಷಕ್ಕೆ ಸಿಕ್ಕಿವೆ. ಹಾಗಾಗಿ ಬಿಜೆಪಿ ಜೊತೆ ಸೇರುವ ಅನಿವಾರ್ಯವಿಲ್ಲ. ಬಿಜೆಪಿಯವರು ಅಂಗಡಿಗಳು, ಮನೆ, ಮಸೀದಿ, ಸೇರಿದಂತೆ ನಮ್ಮ ಮುಸ್ಲಿಂ ಸಮುದಾಯದ ಆಸ್ತಿಗಳ ಮೇಲೆ ಬುಲ್ಡೋಜರ್ ಹತ್ತಿಸುವ ಕೆಲಸ ಮಾಡಿದ್ದಾರೆ. ಅಂತವರೊಂದಿಗೆ ನಾವು ಮೈತ್ರಿ ಮಾಡಿಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ.

ಸಿಪಿಐ(ಎಂ) ನಾಯಕ ಹನ್ನನ್ ಮೊಲ್ಲಾಹ್ ಕೂಡ ಬಿಜೆಪಿ ವಿರುದ್ಧ ದೂರಿದ್ದು, ಜಮ್ಮುವಿನ ಜನರು ಬಿಜೆಪಿ ಸರ್ಕಾರದ ಬಗ್ಗೆ ಹೆಚ್ಚು ಸಂತೋಷವಾಗಿಲ್ಲ. ಅವರು ಪಂಡಿತರ ಸಮಸ್ಯೆಯನ್ನು ಸರಿಯಾಗಿ ನೋಡಿಲ್ಲ. ಕಾಶ್ಮೀರದಲ್ಲಿ, ಅಲ್ಪಸಂಖ್ಯಾತರು ಗಂಭೀರ ನಿರ್ಲಕ್ಷ್ಯ, ಅವಮಾನಗಳನ್ನು ಎದುರಿಸುತ್ತಿದ್ದಾರೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಮತ್ತು ವ್ಯಾಪಕವಾದ ನಿರುದ್ಯೋಗವಿದೆ. ಆದ್ದರಿಂದ, ಈ ನಕಾರಾತ್ಮಕ ವಿಷಯಗಳು ಹೆಚ್ಚು ಪರಿಣಾಮ ಬೀರಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ಕವಿಂದರ್ ಗುಪ್ತಾ ಹೇಳುವಂತೆ, ಎಕ್ಸಿಟ್ ಪೋಲ್ಗಳಲ್ಲಿ ಮಾತ್ರ ಕಾಂಗ್ರೆಸ್-ಎನ್ಸಿ ಮುನ್ನಡೆ ಸಾಧಿಸಿರಬಹುದು. ಆದರೆ ಸರಿಯಾದ ಫಲಿತಾಂಶಗಳು ಹೊರಬಂದ ನಂತರ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ನಾವು ಹೆಚ್ಚಿನ ಸ್ಥಾನ ಪಡೆಯುವ ವಿಶ್ವಾಸವಿದೆ. ಜಮ್ಮು ಪ್ರಾಂತ್ಯದಲ್ಲಿ 35 ಸ್ಥಾನಗಳು ಮತ್ತು ಕಾಶ್ಮೀರದಲ್ಲಿ ಬಿಜೆಪಿಯು ಉತ್ತಮ ಸ್ಥಿತಿಯಲ್ಲಿರುತ್ತದೆ. ಈಗಾಗಲೇ ಕೆಲವು ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತುಕತೆಯೂ ನಡೆಯುತ್ತಿದೆ ಎಂದಿದ್ದಾರೆ.
ಎಕ್ಸಿಟ್ ಪೋಲ್ ಟೈಮ್ ಪಾಸ್: ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ತಳ್ಳಿಹಾಕಿದ್ದಾರೆ. ಅಕ್ಟೋಬರ್ 8ರಂದು ಎಣಿಕೆಯ ಕೊನೆಯಲ್ಲಿ ಹೊರಬರುವ ಸಂಖ್ಯೆಗಳು ಮಾತ್ರ ಮುಖ್ಯ ಎಂದಿದ್ದಾರೆ. ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳ ಸೋಲಿನ ನಂತರ ಎಕ್ಸಿಟ್ ಪೋಲ್ಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಹಾಗಾಗಿ ಚಾನೆಲ್ಗಳು, ಸಾಮಾಜಿಕ ಮಾಧ್ಯಮಗಳು, ವಾಟ್ಸಾಪ್ ಇತ್ಯಾದಿಗಳಲ್ಲಿನ ಎಲ್ಲಾ ಗದ್ದಲಗಳನ್ನು ನಾನು ನಿರ್ಲಕ್ಷಿಸುತ್ತಿದ್ದೇನೆ. ಏಕೆಂದರೆ ಮುಖ್ಯವಾದ, ನಿಖರವಾದ ಸಂಖ್ಯೆಗಳು ಅಕ್ಟೋಬರ್ 8ರಂದು ಬಹಿರಂಗಗೊಳ್ಳಲಿದೆ. ಉಳಿದದ್ದೆಲ್ಲ ಕೇವಲ ಟೈಮ್ ಪಾಸ್ ಎಂದಿದ್ದಾರೆ.












Click it and Unblock the Notifications