Terror Attack: ನನ್ನನ್ನೂ ಸಾಯಿಸಿ ಎಂದ ಕನ್ನಡಿಗ ಮಂಜುನಾಥ್ ಪತ್ನಿ: ಪಾಪಿ ಉಗ್ರರು ಹೇಳಿದ್ದೇನು?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಪ್ರವಾಸಿಗರ ಗುಂಪಿನ ಮೇಲೆ ಉಗ್ರರು ದಾಳಿ ಮಾಡಿದ್ದು 26 ಮಂದಿಯನ್ನು ಕೊಂದುಹಾಕಿದ್ದಾರೆ. ಇನ್ನೂ ಹಲವು ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ದುರ್ಘಟನೆಯಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಎನ್ನುವವರು ಕೂಡ ಮೃತಪಟ್ಟಿದ್ದಾರೆ.
ಪ್ರವಾಸಕ್ಕಾಗಿ ಮಂಜುನಾಥ್ ಮತ್ತು ಅವರ ಪತ್ನಿ ಪಲ್ಲವಿ ಕುಟುಂಬ ಸಮೇತ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದರು. ಕಾಶ್ಮೀರದ ದಾಲ್ ಸರೋವರದಲ್ಲಿ ದೋಣಿ ವಿಹಾರ ಮಾಡುವ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೇ ಮಂಜುನಾಥ್ ಅವರ ಕೊನೆಯ ವಿಡಿಯೋ ಆಗಿದೆ.

ದುರ್ಘಟನೆ ಬಗ್ಗೆ ಮಂಜುನಾಥ್ ಪತ್ನಿ ಹೇಳಿದ್ದೇನು?
ಪ್ರವಾಸಿಗರು ಪಹಲ್ಗಾಮ್ನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುವ ಸಂದರ್ಭದಲ್ಲಿ ಏಕಾಏಕಿ ನುಗ್ಗಿದ ಭಯೋತ್ಪಾದಕರು, ಗುಂಡಿನ ದಾಳಿ ಮಾಡಿದ್ದಾರೆ. ಅದರಲ್ಲೂ ಗಂಡಸರನ್ನು ಟಾರ್ಗೆಟ್ ಮಾಡಿದ್ದು ಅವರ ಹೆಸರು ಕೇಳಿ ಹಿಂದೂಗಳು ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಪತ್ನಿ ಪಲ್ಲವಿಯ ಎದುರೇ ಉಗ್ರರು ಮಂಜುನಾಥ್ ಅವರ ಮೇಲೆ ಗುಂಡು ಹಾರಿಸಿ ದಾಳಿ ಹತ್ಯೆ ಮಾಡಿದ್ದಾರೆ. ಘಟನೆಯಿಂದ ಆಘಾತಗೊಂಡ ಮಂಜುನಾಥ್ ಪತ್ನಿ ಪಲ್ಲವಿ, ಉಗ್ರರಿಗೆ ನನ್ನ ಗಂಡನನ್ನು ಕೊಂದಿರಿ ನನ್ನನ್ನೂ ಸಾಯಿಸಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಉಗ್ರ ನಾವು ನಿನ್ನನ್ನು ಸಾಯಿಸುವುದಿಲ್ಲ ಹೋಗಿ ಮೋದಿಗೆ ಹೇಳು ಎಂದು ಹೇಳಿ ಅಲ್ಲಿಂದ ಹೋಗಿದ್ದಾರೆ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಉಗ್ರರ ಕೃತ್ಯಕ್ಕೆ ವ್ಯಾಪಕ ಆಕ್ರೋಶ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ದಾಳಿಗೆ ಭಾರತ ತಕ್ಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಜನತೆ ಆಗ್ರಹಿಸಿದ್ದಾರೆ. ಭಯೋತ್ಪಾದನೆಯನ್ನು ಬುಡಸಮೇತ ಕಿತ್ತುಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇನ್ನೆಷ್ಟು ಅಮಾಯಕರ ಸಾವನ್ನು ಹೀಗೆ ಸಹಿಸಲು ಸಾಧ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ನಾಗರಿಕರು ಸಿಟ್ಟು ಹೊರಹಾಕಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ದಾಳಿ ಮಾಡಿದವರನ್ನು, ಇದಕ್ಕೆ ಬೆಂಬಲ ಕೊಟ್ಟವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ.












Click it and Unblock the Notifications