ಬಿಆರ್ಎಸ್ ಪಕ್ಷದ ಇಬ್ಬರು ಪ್ರಭಾವಿ ನಾಯಕರು ಕಾಂಗ್ರೆಸ್ಗೆ: ತೆಲಂಗಾಣದ ಮೇಲೆ ದಟ್ಟಗೊಳ್ಳುತ್ತಿದೆಯೇ ಕರ್ನಾಟಕದ ಛಾಯೆ?
ಹೈದರಾಬಾದ್, ಜೂನ್ 22: ಬಿಆರ್ಎಸ್ ಪಕ್ಷದ ಪ್ರಭಾವಿ ನಾಯಕರಾದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಜೂಪಲ್ಲಿ ಕೃಷ್ಣ ರಾವ್ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಈ ಇಬ್ಬರು ನಾಯಕರು ಬುಧವಾರ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ, ಸಂಸದ ಕೋಮಟಿ ವೆಂಕಟ್ ರೆಡ್ಡಿ ಮತ್ತು ಇತರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, 'ಸಿಎಂ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ಎಸ್ ಪಕ್ಷದಿಂದ ಏಕೆ ಹೊರಬಂದಿದ್ದೇವೆ ಎಂಬುದರ ಕುರಿತು ನಾನು ಹಲವು ಬಾರಿ ಮಾತನಾಡಿದ್ದೇನೆ. 9 ವರ್ಷಗಳ ಹಿಂದೆ ರಾಜ್ಯ ರಚನೆಯಾದಾಗಿನಿಂದ ತೆಲಂಗಾಣ ಜನತೆಯ ಕನಸು ಕನಸಾಗಿಯೇ ಉಳಿದಿದೆ. ರಾಜ್ಯದ ಜನರ ಕನಸುಗಳನ್ನು ನನಸು ಮಾಡಲು ನಾವೀಗ ಒಂದಾಗುತ್ತಿದ್ದೇವೆ' ಎಂದು ಹೇಳಿದ್ದಾರೆ.

6 ತಿಂಗಳ ಹಿಂದೆಯೇ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿದ್ದು, ಈ ಬಗ್ಗೆ ಸುದೀರ್ಘವಾಗಿ ಯೋಚಿಸಿದ ನಂತರ ಬಿಆರ್ಎಸ್ ತೊರೆಯುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ರೆಡ್ಡಿ ತಿಳಿಸಿದ್ದಾರೆ.
'ನಾವು ನಮ್ಮ ನಿರ್ಧಾರವನ್ನು ಜೂನ್ 24 ಅಥವಾ 25 ರಂದು ಪ್ರಕಟಿಸುತ್ತೇವೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಪಕ್ಷಕ್ಕೆ ಸೇರುತ್ತೇವೆ. ನಾನು ದೆಹಲಿ ಅಥವಾ ಹೈದರಾಬಾದ್ನಲ್ಲಿ ಸೇರುವುದಿಲ್ಲ. ಖಮ್ಮಂನ ಹೃದಯ ಭಾಗದಲ್ಲೇ ಪಕ್ಷ ಸೇರುತ್ತೇನೆ. ನಾನು ಮೂರು ವಿಧಾನಸಭಾ ಸ್ಥಾನಗಳ ಬಗ್ಗೆ ಯೋಚಿಸುತ್ತಿದ್ದು, ಅವುಗಳಲ್ಲಿ ಒಂದರಿಂದ ಸ್ಪರ್ಧಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ತೆಲಂಗಾಣ ಜನತೆಯ ಕನಸುಗಳನ್ನು ನನಸು ಮಾಡಲು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಜೂಪಲ್ಲಿ ಕೃಷ್ಣರಾವ್ ಹೇಳಿದ್ದಾರೆ.

'ತೆಲಂಗಾಣ ಚಳವಳಿಯು ವಿವಿಧ ಹಂತದ ಜನರೊಂದಿಗೆ ರಾಜಿ ಮಾಡಿಕೊಂಡಿತು. ಅದಕ್ಕಾಗಿ ಅನೇಕ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ತೆಲಂಗಾಣದ ಜನರ ಕನಸುಗಳನ್ನು ನನಸಾಗಿಸಲು ನಾವು ಟಿಆರ್ಎಸ್ಗೆ (ಈಗ ಬಿಆರ್ಎಸ್) ಸೇರಿದ್ದೆವು. ನಾವು ಪ್ರಗತಿಗಾಗಿ ಕಾಯುತ್ತಿದ್ದೆವು. ಆದರೆ ಬಿಆರ್ಎಸ್ ಭರವಸೆ ನೀಡಿದಕ್ಕೆ ಮತ್ತು ಅನುಷ್ಠಾನ ಮಾಡಿದ್ದಕ್ಕೆ ಭಾರಿ ವ್ಯತ್ಯಾಸವಿದೆ' ಎಂದು ಅವರು ಆರೋಪಿಸಿದರು.
ಬಿಆರ್ಎಸ್ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಗಗನಕ್ಕೇರಿದ್ದು, ಪ್ರಜಾಪ್ರಭುತ್ವ ಎಲ್ಲೂ ಕಾಣಸಿಗುವುದಿಲ್ಲ. ಅವರು ಜನರ ಬಡತನ ಮತ್ತು ಮುಗ್ಧತೆಯ ಲಾಭ ಪಡೆದು ಅವರನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ನಾವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕಲು ಬಯಸುತ್ತೇವೆ ಎಂದೂ ಅವರು ಹೇಳಿದ್ದಾರೆ.

ಪೊಂಗುಲೇಟಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, 'ತೆಲಂಗಾಣ ಒಳ್ಳೆಯ ದಿನಗಳನ್ನು ಕಾಣಲಿದೆ. ತೆಲಂಗಾಣ ರಚನೆಯಾದಾಗ ಕೆಸಿಆರ್ ಅವರ ಕುಟುಂಬವನ್ನು ಹೊರತುಪಡಿಸಿ ಯಾರಿಗೂ ಪ್ರಯೋಜನವಾಗಲಿಲ್ಲ. ಕೆಸಿಆರ್ಗೆ ತೆಲಂಗಾಣ ಚಳವಳಿಗೆ ಯಾವುದೇ ಸಂಬಂಧವಿಲ್ಲ. ಇಂದು ಅವರು ತಮ್ಮ ಪಕ್ಷದ ಹೆಸರಿನಿಂದ ತೆಲಂಗಾಣ ಪದವನ್ನು ತೆಗೆದುಹಾಕಿದ್ದಾರೆ' ಎಂದು ಹೇಳಿದ್ದಾರೆ.
'ತೆಲಂಗಾಣವೆಂಬ ಭಾವನಾತ್ಮಕ ವಿಚಾರದಿಂದ ಅವರು ರಾಜ್ಯವನ್ನು ದೋಚಿದ್ದಾರೆ. ರಾಜ್ಯದಲ್ಲಿ ಬಿಆರ್ಎಸ್ ಪಕ್ಷವನ್ನು ನೆಲಕಚ್ಚಿಸಲು ಈ ಸೇರ್ಪಡೆಗಳನ್ನು ಮಾಡುತ್ತಿದ್ದೇವೆ. ನಾವು ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಅವರ ಮಿತ್ರರ ಗುಂಪನ್ನು ಕಾಂಗ್ರೆಸ್ಗೆ ಆಹ್ವಾನಿಸಿದ್ದೇವೆ' ಎಂದೂ ಹೇಳಿದ್ದಾರೆ.
'ಪೊಂಗುಲೇಟಿ ಮತ್ತು ಖಮ್ಮಂ ಜಿಲ್ಲೆಯ ನಾಯಕರು ಕೆಸಿಆರ್ ಅವರ ಅವನತಿಗೆ ಅಡಿಪಾಯ ಹಾಕುತ್ತಿದ್ದಾರೆ. ಸದ್ಯದಲ್ಲೇ ದೆಹಲಿಗೆ ತೆರಳಿ ಪಕ್ಷದ ಮುಖಂಡರಿಗೆ ರಾಜ್ಯದ ರಾಜಕೀಯ ಪರಿಸ್ಥಿತಿ ವಿವರಿಸುತ್ತೇವೆ. ಖಮ್ಮಂನಲ್ಲಿ ನಡೆಯುವ ಸಾರ್ವಜನಿಕ ಸಭೆ ಕೆಸಿಆರ್ ಆಡಳಿತದ ಕೊನೆಯ ದಿನವಾಗಿರುತ್ತದೆ. ಇಡೀ ಕೃಷ್ಣಾ ಜಲಾನಯನ ಪ್ರದೇಶವು ಕಾಂಗ್ರೆಸ್ ಪರವಾಗಿ ನಿಲ್ಲಲು ಸಿದ್ಧವಾಗಿದೆ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications