ತೆಹೆಲ್ಕಾ ಸೃಷ್ಟಿಕರ್ತ ತರುಣ್ ಬಂಧನ ಗ್ಯಾರಂಟಿ
ಪಣಜಿ, ನ.26: ಗೋವಾದಲ್ಲಿ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ತೆಹಲ್ಕಾ ಸುದ್ದಿಸಂಸ್ಥೆ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ತರುಣ್ ತೇಜಪಾಲ್ ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗದ ಕಾರಣ ಅವರನ್ನು ಬಂಧಿಸಲಾಗುತ್ತದೆ ಎಂದು ಗೋವಾ ಪೊಲೀಸರು ಹೇಳಿದ್ದಾರೆ.
ತೇಜಪಾಲ್ ಪರ ನಿಂತಿರುವ ಎಂಡಿ ಶೋಮಾ ಅವರ ನಿಲುವನ್ನು ಖಂಡಿಸಿ ತೆಹೆಲ್ಕಾ ಸಂಸ್ಥೆ ಹಿರಿಯ ಉದ್ಯೋಗಿಗಳು ಸಂಸ್ಥೆ ತೊರೆದಿದ್ದರು. ಇಂದು ಬೆಳಗ್ಗೆ ಶೋಮಾ ಕೂಡಾ ರಾಜೀನಾಮೆ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತರುಣ್ ತೇಜಪಾಲ್ ಗೆ ಗೋವಾ ಪೊಲೀಸರು ಸಮನ್ಸ್ ಜಾರಿ ಮಾಡಿ ಗುರುವಾರ ಮಧ್ಯಾಹ್ನ 3 ಗಂಟೆ ತನಕ ಡೆಡ್ ಲೈನ್ ನೀಡಿದ್ದರು.
ಆದರೆ, ಸಮನ್ಸ್ ಗೆ ಉತ್ತರಿಸಿದ್ದ ತೇಜಪಾಲ್, 'ಶನಿವಾರ ಮಧ್ಯಾಹ್ನದ ವೇಳೆಗೆ ಬರುತ್ತೇನೆ. ದಯವಿಟ್ಟು ಕಾಲಾವಕಾಶ ನೀಡಿ' ಎಂದು ಪೊಲೀಸರಿಗೆ ಪ್ರತಿಕ್ರಿಯಿಸಿದ್ದರು. ತೇಜಪಾಲ್ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಶನಿವಾರ(ನ.29) ಅರ್ಜಿ ವಿಚಾರಣೆಗೆ ಬರಬೇಕಿತ್ತು.
ದೆಹಲಿಯಲ್ಲಿ ಜಾಮೀನು ಸಿಕ್ಕರೆ ಗೋವಾ ಪೊಲೀಸರ ವಿಚಾರಣೆ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ತೇಜಪಾಲ್ ಇದ್ದರು. ಆದರೆ, ದೆಹಲಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ಹಿಂಪಡೆದಿದ್ದಾರೆ. ಈ ನಡುವೆ ಗುರುವಾರ ಸಂಜೆ ಗೋವಾ ಪೊಲೀಸರಿಗೆ ಫ್ಯಾಕ್ಸ್ ಪತ್ರ ಕಳಿಸಿ ನಾಳೆ ವಿಚಾರಣೆಗೆ ಬರುತ್ತೇನೆ ಎಂದಿದ್ದಾರೆ.
ಈ ನಡುವೆ ತೇಜಪಾಲ್ ಅವರನ್ನು ಶತಾಯಗತಾಯ ಪಣಜಿಗೆ ಕರೆಸಿಕೊಳ್ಳುವ ಪಣ ತೊಟ್ಟಿರುವ ಪಣಜಿ ಪೊಲೀಸರು, ತರುಣ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲು ಮುಂದಾಗಿದ್ದಾರೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂಬ ಸುದ್ದಿ ಬಂದಿದೆ.
ತೇಜಪಾಲ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿದ ಯುವತಿ ತೆಹೆಲ್ಕಾ ಸಂಸ್ಥೆ ತೊರೆದ ನಂತರ ಸಾಲು ಸಾಲು ಹಿರಿಯ ಪತ್ರಕರ್ತರು ತೆಹೆಲ್ಕಾ ಬಿಟ್ಟಿದ್ದಾರೆ. ಶೋಮಾ ಚೌಧುರಿಗೂ ಮುನ್ನ ಹಿರಿಯ ಸಂಪಾದಕಿ ರಾಣಾ ಅಯೂಬ್ ಅವರು ಮಂಗಳವಾರ(ನ.26) ರಾಜೀನಾಮೆ ನೀಡಿದ್ದಾರೆ. ಇವರಿಗಿಂತ ಮುಂಚೆ ಸೌಗಾತ್ ದಾಸ್ ಗುಪ್ತಾ,ಅಯೇಷಾ ಸಿದ್ದಿಕಾ, ಜಾಯ್ ಮಜೂಂದಾರ್ ಹಾಗೂ ರೇವತಿ ಲಾಲ್ ಅವರು ಸಂಸ್ಥೆ ತೊರೆದಿದ್ದಾರೆ.
ಈಗಾಗಲೇ ಕ್ಷಮೆಯಾಚಿಸಿ, ಸಂಸ್ಥೆ ನಿಯಮದಂತೆ ನಡೆದುಕೊಂಡಿದ್ದೇನೆ. ಯಾವುದೇ ರೀತಿಯ ತನಿಖೆಗೆ ಸಿದ್ಧ ಎಂದಿದ್ದ ಆರೋಪಿ ತರುಣ್ ತೇಜಪಾಲ್ ಮೇಲೆ ಗೋವಾ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ 344 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.