ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ, ಹಿಂದಿನ ಮುಖ್ಯಮಂತ್ರಿಗಳ ಹಾದಿ ಹಿಡಿದ್ರಾ ದಳಪತಿ?
C. Joseph Vijay: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜೂನ್ 12ರಂದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದೆ ಇದೇ ಮೊದಲು ಎಂದು ಮೂಲಗಳಿಂದ ತಿಳಿದುಬಂದಿದೆ.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಸಿಎಂ ವಿಜಯ್, ದೇವಿಯ ಆಶೀರ್ವಾದ ಪಡೆಯಲಿದ್ದಾರೆ. ದಕ್ಷಿಣ ಭಾರತದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿಗೆ ಅವರು ಭೇಟಿ ನೀಡುತ್ತಿರುವುದು ಅವರ ಭಕ್ತಿ ಭಾವದ ಸಂಕೇತವಾಗಿದೆ. ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ವಿಶೇಷ ವಿಮಾನದ ಮೂಲಕ ಆಗಮನ
ವಿಜಯ್ ಅವರು ಶುಕ್ರವಾರ ಮಧ್ಯಾಹ್ನ 12.30ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಪೊಲೀಸರಿಗೆ ವಿಶೇಷ ಮನವಿ
ಝೆಡ್-ಪ್ಲಸ್ (Z-plus) ಭದ್ರತೆ ಹೊಂದಿರುವ ವಿಜಯ್ ಅವರು ಪ್ರಯಾಣಿಸುವ ಮಾರ್ಗದ ಪ್ರಮುಖ ಜಂಕ್ಷನ್ಗಳಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆ ಸಂಚಾರ ನಿಯಂತ್ರಣ ಮತ್ತು ಬಿಗಿ ಭದ್ರತೆ ಕೈಗೊಳ್ಳುವಂತೆ ತಮಿಳುನಾಡು ಸಿಐಡಿ ಭದ್ರತಾ ವಿಭಾಗವು ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದೆ.
ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಎಂ.ಜಿ. ರಾಮಚಂದ್ರನ್, ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ಅವರು ಕೂಡ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕೊಲ್ಲೂರಿಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದರು. ಇದೀಗ ಅದೇ ಹಾದಿಯನ್ನು ವಿಜಯ್ ಅವರು ಕೂಡ ಪಾಲಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ದೆಹಲಿ ಪ್ರವಾಸದಲ್ಲಿರುವ ವಿಜಯ್
ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಮೂರು ದಿನಗಳ ಪ್ರವಾಸಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಜೂನ್ 12ರಂದು ದೆಹಲಿ ಪ್ರವಾಸವನ್ನು ಮುಗಿಸಿದ ಬಳಿಕ ಅವರು ನೇರವಾಗಿ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಹಿಂದಿನ ಹಲವರು ಮುಖ್ಯಮಂತ್ರಿಗಳು ಸಹ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಅದೇ ಹಾದಿಯಲ್ಲಿ ನೂತನ ಸಿಎಂ ವಿಜಯ್ ಅವರು ಕೂಡ ಕೊಲ್ಲೂರಿಗೆ ಭೇಟಿ ನೀಡುತ್ತಿರುವುದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಮೂರು ದಿನಗಳ ಅಧಿಕೃತ ಪ್ರವಾಸಕ್ಕಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ವಿಜಯ್, ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯ ನಂತರ ಅವರು ದೆಹಲಿಯಿಂದ ನೇರವಾಗಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತಲುಪಲಿದ್ದಾರೆ.
ರಾಜಕಾರಣಿಗಳು ಕೊಲ್ಲೂರಿಗೆ ಭೇಟಿ ನೀಡುವುದೇಕೆ?
* ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವತೆ ಮೂರು ಮಹಾಶಕ್ತಿಗಳ ಸ್ವರೂಪವಾಗಿದ್ದಾಳೆ.
* ಮಹಾಲಕ್ಷ್ಮಿ: ಸಂಪತ್ತು ಮತ್ತು ಸಾರ್ವಜನಿಕ ಪ್ರಭಾವ.
* ಸರಸ್ವತಿ: ಜ್ಞಾನ ಮತ್ತು ರಾಜಕೀಯ ಚಾಣಕ್ಯತನ.
* ಮಹಾಕಾಳಿ: ಧೈರ್ಯ ಮತ್ತು ಶತ್ರುಗಳನ್ನು ಧ್ವಂಸಗೊಳಿಸುವ ಶಕ್ತಿ.
ಇಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿಯೂ ಅಡಗಿದೆ ಎಂಬ ನಂಬಿಕೆಯಿದೆ. ರಾಜಕೀಯ ನಾಯಕರಿಗೆ ಅಗತ್ಯವಿರುವ ಅಧಿಕಾರ, ಜನಪ್ರಿಯತೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಬುದ್ಧಿಶಕ್ತಿಯನ್ನು ಈ ದೇವಿ ಕರುಣಿಸುತ್ತಾಳೆ ಎಂಬುದು ರಾಜಕಾರಣಿಗಳ ಬಲವಾದ ನಂಬಿಕೆಯಾಗಿದೆ.
ಚಂಡಿಕಾ ಹೋಮ ಮತ್ತು ಶತ್ರು ಸಂಹಾರದ ನಂಬಿಕೆ
ಈ ದೇವಸ್ಥಾನದಲ್ಲಿ 'ಚಂಡಿಕಾ ಹೋಮ' (ಶತ್ರು ಸಂಹಾರ ಹೋಮ) ಮಾಡಿಸುವುದರಿಂದ ರಾಜಕೀಯದಲ್ಲಿ ಎದುರಾಗುವ ವಿರೋಧಗಳು, ದ್ರೋಹಗಳು ಹಾಗೂ ತೆರೆಮರೆಯ ಶತ್ರುಗಳ ಸಂಹಾರವಾಗುತ್ತದೆ ಎಂಬ ನಂಬಿಕೆಯಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ. ರಾಮಚಂದ್ರನ್ ಅವರು ಮೂಕಾಂಬಿಕಾ ದೇವಿಯ ಪರಮ ಭಕ್ತರಾಗಿದ್ದರು. ಮತ್ತು ದೇವಿಗೆ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು.
ಅದೇ ರೀತಿ ಮಾಜಿ ಸಿಎಂ ಜೆ. ಜಯಲಲಿತಾ ಅವರು ಕೂಡ ತಮ್ಮ ರಾಜಕೀಯ ಜೀವನದಲ್ಲಿ ತೀವ್ರ ಬಿಕ್ಕಟ್ಟು ಮತ್ತು ಸೋಲುಗಳನ್ನು ಎದುರಿಸಿದಾಗಲೆಲ್ಲಾ ಕೊಲ್ಲೂರಿಗೆ ಬಂದು ವಿಶೇಷ ಪೂಜೆ ಹಾಗೂ ಚಂಡಿಕಾ ಹೋಮಗಳನ್ನು ನೆರವೇರಿಸಿದ್ದರು. ವಿಶೇಷವಾಗಿ 2002ರಲ್ಲಿ ಸಿಎಂ ಆದ ಬಳಿಕ 2004ರ ಜುಲೈನಲ್ಲಿ ಅವರು ಇಲ್ಲಿ ದೊಡ್ಡ ಮಟ್ಟದ ಚಂಡಿಕಾ ಹೋಮ ನಡೆಸಿದ್ದರು.
ಚರ್ಚೆಗೆ ಕಾರಣವಾದ ಸಿಎಂ ವಿಜಯ್ ನಡೆ
ಈಗ ಅದೇ ಹಾದಿಯಲ್ಲಿ ತಮಿಳುನಾಡು ನೂತನ ಸಿಎಂ ವಿಜಯ್ ಅವರು ಕೂಡ ಸಾಗುತ್ತಿರುವುದರಿಂದ ಅವರು ಕೂಡ ದೇವಸ್ಥಾನದಲ್ಲಿ ರಾಜಕೀಯ ವಿಘ್ನಗಳ ನಿವಾರಣೆಗಾಗಿ ವಿಶೇಷ ಚಂಡಿಕಾ ಹೋಮ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ವಿಜಯ್ ಅವರ ಈ ಟೆಂಪಲ್ ರನ್ ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications