ತಮಿಳುನಾಡು ರಾಜ್ಯ ಪರೀಕ್ಷೆ ಪರಿಗಣಿಸಿ, NEET ಕ್ಯಾನ್ಸಲ್ ಮಾಡಿ: ಕೇಂದ್ರಕ್ಕೆ ವಿಜಯ್ ಒತ್ತಡ, ಕರ್ನಾಟಕದ ನಿರ್ಧಾರ ಏನು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮೊದಲ ಬಾರಿಗೆ ಭಾಗವಹಿಸಿದರು. ಈ ಮಹತ್ವದ ಸಭೆಯಲ್ಲಿ ಅವರು ತಮಿಳುನಾಡಿನ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ 'ನೀಟ್' ವಿನಾಯಿತಿ ಕುರಿತು ಅವರು ಸಭೆಯಲ್ಲಿ ಪ್ರಬಲವಾಗಿ ಧ್ವನಿ ಎತ್ತಿದ್ದಾರೆ.
ನೀಟ್ ವಿನಾಯಿತಿಗೆ ಪಟ್ಟು
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ವಿಜಯ್, ತಮಿಳುನಾಡಿಗೆ ನೀಟ್ ಪರೀಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ನೇರವಾಗಿ ಒತ್ತಾಯಿಸಿದರು. ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ನಡೆಸಲಾಗುತ್ತಿರುವ ಈ ಪರೀಕ್ಷೆಯಿಂದ ಗ್ರಾಮೀಣ, ಬಡ ಮತ್ತು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂಬುದು ಅವರ ಪ್ರಮುಖ ವಾದವಾಗಿತ್ತು.

ಕರ್ನಾಟಕದ ನಿರ್ಧಾರ ಏನು?
ಇತ್ತೀಚೆಗೆ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಗ್ರೇಸ್ ಮಾರ್ಕ್ಸ್ ವಿವಾದಗಳು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೂ ಮುಂಚೆಯಿಂದ ಕರ್ನಾಟಕ ಸರ್ಕಾರವು ಸಹ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಅಥವಾ ರಾಜ್ಯಗಳಿಗೆ ತಮ್ಮದೇ ಆದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ನಿರಂತರವಾಗಿ ಕೇಂದ್ರವನ್ನು ಆಗ್ರಹಿಸುತ್ತಿದೆ. ಆದಾಗ್ಯೂ, 2026ರ ವೇಳೆಗೆ, ಕರ್ನಾಟಕದಲ್ಲಿ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿಗಳಿಗೆ ನೀಟ್ ಕಡ್ಡಾಯವಾಗಿಯೇ ಉಳಿದಿದೆ.
ಇದೀಗ ತಮಿಳುನಾಡು ಸಿಎಂ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸುವ ಮೂಲಕ, ದಕ್ಷಿಣ ಭಾರತದ ರಾಜ್ಯಗಳಿಂದ ನೀಟ್ ವಿರುದ್ಧದ ಹೋರಾಟದ ಕೂಗು ಮತ್ತಷ್ಟು ಬಲಗೊಂಡಿದೆ.
ಬಾಕಿ ಅನುದಾನ ಬಿಡುಗಡೆಗೆ ಮನವಿ
ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಬರಬೇಕಾದ ಬಾಕಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ವಿಜಯ್ ಆಗ್ರಹಿಸಿದರು. ಕೇಂದ್ರ ಪುರಸ್ಕೃತ 'ಸಮಗ್ರ ಶಿಕ್ಷಣ ಯೋಜನೆಯಡಿ ಬರಬೇಕಾದ 3,284 ಕೋಟಿ ರೂಪಾಯಿಗಳು ಹಾಗೂ ಹೊಗೆನಕಲ್ 2ನೇ ಹಂತದ ಸಂಯೋಜಿತ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ 2,284 ಕೋಟಿ ರೂಪಾಯಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಅವರು ಪ್ರಧಾನಿ ಬಳಿ ಮನವಿ ಮಾಡಿದರು.
ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಬೇಡಿಕೆಗಳು
ರಾಜ್ಯದ ರಸ್ತೆ ಸಂಪರ್ಕವನ್ನು ಸುಧಾರಿಸಲು ಆರು ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು ಮತ್ತು ತಮಿಳುನಾಡಿಗೆ (ವಿಶೇಷವಾಗಿ ಕೊಯಮತ್ತೂರಿನಲ್ಲಿ) ಎರಡನೇ ಏಮ್ಸ್ ಆಸ್ಪತ್ರೆಯನ್ನು ಮಂಜೂರು ಮಾಡಬೇಕು ಎಂದು ಅವರು ಪ್ರಸ್ತಾಪಿಸಿದರು. ಇದರ ಜೊತೆಗೆ, ಪ್ರಸಿದ್ಧ ತಮಿಳು ಕೃತಿ 'ತಿರುಕ್ಕುರಳ್' ಅನ್ನು ರಾಷ್ಟ್ರೀಯ ಸಾಹಿತ್ಯ ಎಂದು ಅಧಿಕೃತವಾಗಿ ಘೋಷಿಸಬೇಕು ಮತ್ತು ಗ್ರಾಮೀಣ ವಸತಿ ಯೋಜನೆಗಳಿಗಾಗಿ ವಿಬಿ-ಜಿ ರಾಮ್-ಜಿ ಅಡಿಯಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು.
ಮೀನುಗಾರರ ರಕ್ಷಣೆ ಆಗ್ರಹ
ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡು ಮೀನುಗಾರರನ್ನು ಆಗಾಗ ಬಂಧಿಸುತ್ತಿರುವ ಗಂಭೀರ ಸಮಸ್ಯೆಯತ್ತ ಬೆಳಕು ಚೆಲ್ಲಿದ ಸಿಎಂ ವಿಜಯ್, ಮೀನುಗಾರಿಕಾ ಸಮುದಾಯಗಳ ಜೀವನೋಪಾಯ ಮತ್ತು ಸುರಕ್ಷತೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು. ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಸಾಂಪ್ರದಾಯಿಕ ಮೀನುಗಾರಿಕಾ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದರು. ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಬಂಧಿಯಾಗಿರುವ ತಮಿಳುನಾಡು ಮೀನುಗಾರರು ಹಾಗೂ ಅವರ ದೋಣಿಗಳನ್ನು ಬಿಡುಗಡೆ ಮಾಡಲು ತುರ್ತು ರಾಜತಾಂತ್ರಿಕ ಮಟ್ಟದ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿನ ಹಿತಾಸಕ್ತಿಗಳು ಮತ್ತು ಹಕ್ಕುಗಳನ್ನು ದೃಢವಾಗಿ ಕಾಪಾಡುವ ಜೊತೆಗೆ, ಕೇಂದ್ರ ಸರ್ಕಾರದೊಂದಿಗೆ ಅಭಿವೃದ್ಧಿಯ ನಿಟ್ಟಿನಲ್ಲಿ ರಚನಾತ್ಮಕವಾಗಿ ಕೆಲಸ ಮಾಡುವುದಾಗಿ ಸಿಎಂ ವಿಜಯ್ ಸಭೆಯಲ್ಲಿ ಸ್ಪಷ್ಟಪಡಿಸಿದರು. ನೀತಿ ಆಯೋಗದ ಅಧಿಕೃತ ಸಭೆಯ ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚೆ ನಡೆಸಿದರು.












Click it and Unblock the Notifications