K.Annamalai: ನಡುರಸ್ತೇಲಿ ಶರ್ಟ್ ಬಿಚ್ಚಿ ಚಾಟಿಯಿಂದ ಬಾರಿಸಿಕೊಂಡು ಹುಚ್ಚಾಟ ಮೆರೆದ ಅಣ್ಣಾಮಲೈ
ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ಬೀದಿಗಿಳಿದು ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ನಡುರಸ್ತೆಯಲ್ಲಿ ತಮ್ಮ ಅಂಗಿ ಬಿಚ್ಚಿ, ಚಾಟಿಯಿಂದ ಬಾರಿಸಿಕೊಂಡು ಅಣ್ಣಾಮಲೈ ಪ್ರತಿಭಟನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ತಮಿಳುನಾಡಿನ ಅಣ್ಣಾ ಯೂನಿವರ್ಸಿಟಿಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಖಂಡಿಸಿ, ಡಿಎಂಕೆ ಸರ್ಕಾರದ ವಿರುದ್ಧ ಅಣ್ಣಾಮಲೈ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ತಮ್ಮ ಪ್ರತಿಭಟನೆಯ ಸಂಕೇತವಾಗಿ ಹಲವು ಬಾರಿ ಚಾಟಿಯೇಟು ತಮಗೆ ತಾವೇ ಕೊಟ್ಟುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಡಿಎಂಕೆ ಸರ್ಕಾರ ಮತ್ತು ಪೊಲೀಸರು ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಹಾಗು ಆಕೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಇದು ಆಡಳಿತದ ಅಸಮರ್ಥತೆಯನ್ನು ಪ್ರತಿಬಿಂಬಿಸುವ ನಾಚಿಕೆಗೇಡಿನ ಕೃತ್ಯ ಎಂದು ಅವರು ಕಿಡಿಕಾರಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ನಾನು ಪಾದರಕ್ಷೆಗಳನ್ನು ಕಾಲಿಗೆ ಹಾಕುವುದಿಲ್ಲ ಎಂದು ಅಣ್ಣಾಮಲೈ ನಿನ್ನೆ ಘೋಷಣೆ ಮಾಡಿದ್ದರು. ಅಣ್ಣಾ ಯೂನಿವರ್ಸಿಟಿಯಲ್ಲಿ ಸಿಸಿಟಿವಿ ಕ್ಯಾಮರಾಗಳ ಕೊರತೆ ಇದೆ. ಅಲ್ಲದೆ ಮಹಿಳೆಯರ ಸುರಕ್ಷತೆಗಾಗಿ ಉದ್ದೇಶಿಸಿರುವ ನಿರ್ಭಯಾ ನಿಧಿಯನ್ನು ರಾಜ್ಯವು ಎಷ್ಟರಮಟ್ಟಿಗೆ ಬಳಸಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದರು.

ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ಅಣ್ಣಾಮಲೈ ಅವರು ತಮಿಳುನಾಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣ ಎಫ್ಐಆರ್ ಸಾರ್ವಜನಿಕರ ಲಭ್ಯತೆಗೆ ಹೇಗೆ ಅವಕಾಶ ನೀಡಿದ್ದಾರೆ. ಅಲ್ಲದೆ ಎಫ್ಐಆರ್ ಅನ್ನು ಬಹಿರಂಗಪಡಿಸುವ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದೀರಿ. ಈ ವಿಚಾರದಲ್ಲಿ ಪೊಲೀಸರು ಹಾಗೂ ಡಿಎಂಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು. ನಿರ್ಭಯಾ ನಿಧಿ ಎಲ್ಲಿಗೆ ಹೋಯಿತು? ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಏಕೆ ಇರಲಿಲ್ಲ? ಎಂದೂ ಅಣ್ಣಾಮಲೈ ಸಿಡಿದಿದ್ದಾರೆ.
ಅಲ್ಲದೆ ಈ ಘಟನೆ ಖಂಡಿಸಿ ತಮ್ಮ ನಿವಾಸದ ಮುಂದೆ ಚಾಟಿಯಿಂದ ಬಾರಿಸಿಕೊಳ್ಳಲಿದ್ದೇನೆ. ನಾನು ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಅಣ್ಣಾಮಲೈ ಅವರು ಪ್ರತಿಜ್ಞೆ ಮಾಡಿದ್ದು, ಇದನ್ನು ಪಕ್ಷದ ಇತರ ಕಾರ್ಯಕರ್ತರು ಅನುಸರಿಸಬೇಕು ಎಂದು ನಾನು ಒತ್ತಾಯಿಸುವುದಿಲ್ಲ ಎಂದಿದ್ದಾರೆ. ಇನ್ನು ಅಣ್ಣಾಮಲೈ ಅವರು ಮುಂದಿನ 48 ದಿನಗಳ ಕಾಲ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
15 ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಇಷ್ಟು ದಿನ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿದ್ದಕ್ಕೆ ಇಂದು ಅಮಾಯಕ ವಿದ್ಯಾರ್ಥಿನಿ ಮೇಲೆ ಈ ಕ್ರೌರ್ಯ ನಡೆದಿದೆ. ಇದಕ್ಕೆ ಡಿಎಂಕೆ ಸರಕಾರವೇ ಸಂಪೂರ್ಣ ಹೊಣೆ. ಇದನ್ನು ತಮಿಳುನಾಡಿನ ಜನರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? ಆಡಳಿತ ಪಕ್ಷದವರಾಗಿದ್ದರೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ಕಾನೂನು ತಮಿಳುನಾಡಿನಲ್ಲಿ ಇದೆಯೇ? ಎಂದು ಅಣ್ಣಾಮಲೈ ಹರಿಹಾಯ್ದಿದ್ದಾರೆ.












Click it and Unblock the Notifications