ದೇವಭೂಮಿ ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಹೀಗೊಂದು ಅಪವಾದ
ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಪೂರ್ವತಯಾರಿ ಮತ್ತು ಪಕ್ಷದಲ್ಲಿನ ಆಂತರಿಕ ಭಿನ್ನಮತ ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದರು, ಅದರಂತೇ ಅವರು ರಾಜೀನಾಮೆ ನೀಡಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ರಾವತ್ ಅವರು ಪದತ್ಯಾಗ ಮಾಡಬೇಕು ಎನ್ನುವ ಕೂಗು ಉತ್ತರಾಖಾಂಡ ಬಿಜೆಪಿ ಘಟಕದಲ್ಲಿ ಜೋರಾಗಿ ಕೇಳಿಬರುತ್ತಿತ್ತು. ವರಿಷ್ಠರ ಆದೇಶಕ್ಕೆ ಯಾವುದೇ ಪ್ರತಿರೋಧ ತೋರದೇ ರಾವತ್ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಪಕ್ಷದಲ್ಲಿನ ಆಂತರಿಕ ಭಿನ್ನಮತ ಸರಿಪಡಿಸಲು ವರಿಷ್ಠರು ರಮಣ್ ಸಿಂಗ್ ಮತ್ತು ದುಶ್ಯಂತ್ ಸಿಂಗ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದರು. ಆದರೆ, ರಾವತ್ ವಿರೋಧಿ ಬಣದ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಸಿಎಂಗೆ ರಾಜೀನಾಮೆ ನೀಡುವ ಅನಿರ್ವಾಯತೆ ಎದುರಾಯಿತು.
ಇದರೊಂದಿಗ ದೇವಭೂಮಿ ಎಂದೇ ಕರೆಯಲ್ಪಡುವ ಉತ್ತರಾಖಾಂಡ ದಲ್ಲಿ ಯಾವುದೇ ಮುಖ್ಯಮಂತ್ರಿ ಪೂರ್ಣಾವಧಿ ಪೂರೈಸಿಲ್ಲ ಎನ್ನುವ ಅಪವಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಎದುರಾಗಿದೆ.

ಭಾರತ ಗಣರಾಜ್ಯದ 27ನೇ ರಾಜ್ಯವಾಗಿ ಉತ್ತರಾಖಂಡ ಉದಯ
ಉತ್ತರಪ್ರದೇಶದ ಹಿಮಾಲಯ ಪರ್ವತ ಪ್ರಾಂತ್ಯವನ್ನು ಬೇರಾಗಿಸಿ ಉತ್ತರಾಖಂಡ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ಭಾರತ ಗಣರಾಜ್ಯದ 27ನೇ ರಾಜ್ಯವಾಗಿ 09.11.2000ರಲ್ಲಿ ಈ ರಾಜ್ಯದ ಉದಯವಾಯಿತು. ಅಲ್ಲಿಂದ ಇಲ್ಲಿವರೆಗೆ ಈ ರಾಜ್ಯ ಎಂಟು ಮುಖ್ಯಮಂತ್ರಿಗಳನ್ನು ಕಂಡಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದವು.

ಕಾಂಗ್ರೆಸ್ಸಿನ ನಾರಾಯಣ ದತ್ ತಿವಾರಿ
ಕಾಂಗ್ರೆಸ್ಸಿನ ನಾರಾಯಣ ದತ್ ತಿವಾರಿ ಮಾತ್ರ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದನ್ನು ಬಿಟ್ಟರೆ, ಮಿಕ್ಕ ಯಾವ ಪಕ್ಷದ ಸಿಎಂ ಕೂಡಾ ಪೂರ್ಣಾವಧಿಯನ್ನು ಮುಗಿಸಲಿಲ್ಲ. ಇವೆಲ್ಲದರ ನಡುವೆ ಎರಡು ಬಾರಿ ಇಲ್ಲಿ, ರಾಜಕೀಯ ಅಸ್ಥಿರತೆ ತೋರಿದ್ದರಿಂದ ರಾಷ್ಟ್ರಪತಿ ಆಡಳಿತ ಕೂಡಾ ಜಾರಿಯಾಗಿತ್ತು.

ರಮೇಶ್ ಪೊಖ್ರಿಯಾಲ್ ಎರಡು ವರ್ಷ 75 ದಿನ ಸಿಎಂ
ಮೊದಲ ಸಿಎಂ ಆಗಿ ನಿತ್ಯಾನಂದ ಸ್ವಾಮಿ 354 ದಿನ, ಇದಾದ ನಂತರ ಭಗತ್ ಸಿಂಗ್ ಕೊಶ್ಯಾರಿ 122 ದಿನ, ಬಿ.ಸಿ.ಖಂಡೂರಿ ಎರಡು ವರ್ಷ 111 ದಿನ, ರಮೇಶ್ ಪೊಖ್ರಿಯಾಲ್ ಎರಡು ವರ್ಷ 75 ದಿನ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.

ತ್ರಿವೇಂದ್ರ ಸಿಂಗ್ ರಾವತ್ ಬಹುತೇಕ ನಾಲ್ಕು ವರ್ಷ ಮುಖ್ಯಮಂತ್ರಿ
ಮತ್ತೆ ಬಿ.ಸಿ.ಖಂಡೂರಿ ಅವರು 184 ದಿನ, ವಿಜಯ್ ಬಹುಗುಣ ಒಂದು ವರ್ಷ 324 ದಿನ, ಹರೀಶ್ ರಾವತ್ ಎರಡು ವರ್ಷ 55 ಇದಾದ ನಂತರ ಮತ್ತೆ ಇವರು 311 ದಿನ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ನಂತರ ಈಗ ರಾಜೀನಾಮೆ ನೀಡಿರುವ ತ್ರಿವೇಂದ್ರ ಸಿಂಗ್ ರಾವತ್ ಬಹುತೇಕ ನಾಲ್ಕು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.












Click it and Unblock the Notifications